ಕನ್ನಡಪ್ರಭ ವಾರ್ತೆ ಶಿವಮೊಗ್ಗ ಸೂಡಾದಿಂದ ಶೀಘ್ರವೇ ನಗರದಲ್ಲಿ ಸ್ಥಳ ಹುಡುಕಿ 250 ರಿಂದ 500 ಎಕರೆಯ ಸರ್ಕಾರಿ ಲೇಔಟ್ ಸಿದ್ಧಪಡಿಸಿ ಬಡವರು, ಮಧ್ಯಮ ವರ್ಗದವರಿಗೆ ನಿವೇಶನ ನೀಡಬೇಕು. ಅಲ್ಲಿಯವರೆಗೆ ಖಾಸಗಿಯವರಿಗೆ ಅನುಮತಿ ನೀಡದಂತೆ ಸೂಡಾ ಆಯುಕ್ತರಿಗೆ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ತಾಕೀತು ಮಾಡಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ನಗರಾಭಿವೃದ್ಧಿ ಪ್ರಾಧಿಕಾರ, ಮಹಾನಗರಪಾಲಿಕೆ, ಕೆಯುಐಡಿಎಫ್ಸಿ, ಕನನೀಸ-ಒಚ ಮತ್ತು ನಗರ ಯೋಜನಾ ಪ್ರಾಧಿಕಾರದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಶಿವಮೊಗ್ಗದಲ್ಲಿ ಸರ್ಕಾರಿ ಲೇಔಟ್ ತುಂಬಾ ಕಡಿಮೆ ಇವೆ. ಜನಸಾಮಾನ್ಯರಿಗೆ ಅವರ ಕೈಗೆಟುಕುವ ದರದಲ್ಲಿ ನಿವೇಶನ ಹಂಚಿಕೆ ಮಾಡುವುದು ಸರ್ಕಾರದ ಉದ್ದೇಶವಾಗಿದೆ. ಕೇವಲ ಖಾಸಗಿಯವರಿಗೆ ಲೇಔಟ್ ನಿರ್ಮಾಣಕ್ಕೆ ಅನುಮತಿ ನೀಡುವುದು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ಕೆಲಸವಲ್ಲ ಎಂದು ಖಾರವಾಗಿ ಹೇಳಿದರು. ಸ್ಥಳೀಯ ಶಾಸಕರು, ಸಂಸದರು ಮತ್ತು ಡಿಸಿ ಅವರೊಂದಿಗೆ ಸೂಡಾ ಆಯುಕ್ತರು ಚರ್ಚಿಸಿ ಸ್ಥಳ ಗುರುತಿಸಿ ಲೇಔಟ್ ಅಭಿವೃದ್ಧಿಪಡಿಸಬೇಕು ಹಾಗೂ ಸಿಡಿಪಿಯನ್ನು ಶೀಘ್ರದಲ್ಲಿ ಸಿದ್ಧಪಡಿಸಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಬೇಕು. ಪ್ರಾಧಿಕಾರದಿಂದ ಸರ್ಕಾರಿ ಲೇಔಟ್ಗಳು, ರಸ್ತೆಗಳು, ಕೆರೆ ಅಭಿವೃದ್ಧಿ ಸೇರಿದಂತೆ ಅಭಿವೃದ್ಧಿ ಕೆಲಸಗಳು ಆಗಬೇಕು. ಡಿಪಿಆರ್ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಬೇಕು. ಎಲ್ಲ ಕೆಲಸಗಳು ಪಾರದರ್ಶಕವಾಗಿ ನಡೆಯಬೇಕು ಎಂದು ಸೂಚಿಸಿದರು. ಸ್ಮಾಟ್ಸಿಟಿ ಕಳಪೆ ಕಾಮಗಾರಿಗೆ ಗರಂ: ಸ್ಮಾರ್ಟ್ಸಿಟಿ ಯೋಜನೆಯ ಕುರಿತು ಅನೇಕ ದೂರುಗಳು ಬಂದಿವೆ. ಯುಜಿ ಕೇಬಲ್, ರಸ್ತೆ, ಚರಂಡಿ ಇತರೆ ಕಾಮಗಾರಿ ಬಗ್ಗೆ ಸಾಕಷ್ಟು ದೂರುಗಳಿವೆ. ಸಮಗ್ರವಾಗಿ ಈ ದೂರುಗಳ ಕುರಿತು ಪರಿಶೀಲನೆ ನಡೆಸಿ, ಈ ಲೋಪಗಳು ಸರಿಯಾದ ಮೇಲೆ ಬಾಕಿ ಹಣ ಪಾವತಿಸಬೇಕು. ಕಳಪೆ ಕಾಮಗಾರಿ ಬಗ್ಗೆ ಪರಿಶೀಲನೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು. ₹25 ಕೋಟಿ ಸದ್ಬಳಕೆಯಾಗಲಿ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 18 ಸಾವಿರ ಬೀದಿದೀಪಗಳ ಅಳವಡಿಕೆ ಆಗಿದೆ. ಶೇ.98 ಬೀದಿದೀಪಗಳು ಉರಿಯಬೇಕು. ಅಗತ್ಯವಿದ್ದಲ್ಲಿ ಹೆಚ್ಚುವರಿ ಬೀದಿದೀಪಗಳನ್ನು ಅಳವಡಿಸಬೇಕು. ಸಮರ್ಪಕವಾಗಿ ನಿರ್ವಹಿಸಬೇಕು. ಹೆಚ್ಚುವರಿಗಯಾಗಿ ಅನುದಾನ ಬೇಕಾದಲ್ಲಿ ಪ್ರಸ್ತಾವನೆ ಸಲ್ಲಿಸಿ, ಕೆರೆಗಳು, ಪಾರ್ಕ್ ಅಭಿವೃದ್ಧಿ ಸೇರಿದಂತೆ ಪಾಲಿಕೆಗೆ ₹25 ಕೋಟಿ ಮಂಜೂರು ಮಾಡಿದ್ದು, ಸಮರ್ಪಕವಾಗಿ ಬಳಸಿಕೊಳ್ಳುವಂತೆ ತಿಳಿಸಿದರು. ಯುಜಿಡಿಗೆ ₹220 ಕೋಟಿ ಪ್ರಸ್ತಾವನೆ ಸಲ್ಲಿಸಿದ್ದು, ಹಣ ಮಂಜೂರು ಮಾಡಲಾಗುವುದು. ರಿಸ್ಟೋರೇಷನ್ ಕಾಮಗಾರಿಯನ್ನು ಸಹ ಸಮರ್ಪಕವಾಗಿ ಮಾಡಬೇಕು ಎಂದು ಸೂಚನೆ ನೀಡಿದರು. ಸಭೆಯಲ್ಲಿ ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಆರಗ ಜ್ಞಾನೇಂದ್ರ, ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ, ಜಿಪಂ ಸಿಇಒ ಸ್ನೇಹಲ್ ಸುಧಾಕರ ಲೋಖಂಡೆ, ಎಎಸ್ಪಿ ಅನಿಲ್ಕುಮಾರ್ ಭೂಮರೆಡ್ಡಿ, ಡಿಯುಡಿಸಿ ಯೋಜನಾ ನಿರ್ದೇಶಕ, ಸೂಡಾ ಆಯುಕ್ತ ವಿಶ್ವನಾಥ ಮುದಜ್ಜಿ, ಸ್ಥಳೀಯ ಸಂಸ್ಥೆ ಮುಖ್ಯಸ್ಥರು, ಅಧಿಕಾರಿಗಳು ಹಾಜರಿದ್ದರು. - - - ಬಾಕ್ಸ್ ಜನವರಿವರೆಗೆ ಕುಡಿಯುವ ನೀರಿಗೆ ಸಮಸ್ಯೆ ಇಲ್ಲ ಪಾಲಿಕೆ, ನಗರಸಭೆ, ಪುರಸಭೆ, ಸ್ಥಳೀಯ ಸಂಸ್ಥೆಗಳಲ್ಲಿ ಹೊಸ ನಿಯಮದಂತೆ ಕರ ವಸೂಲಾತಿಯನ್ನು ಕಟ್ಟುನಿಟ್ಟಾಗಿ ಮಾಡಬೇಕು. ಇಲ್ಲವಾದಲ್ಲಿ ಶಿಸ್ತಿನ ಕ್ರಮ ವಹಿಸಲಾಗುವುದು ಎಂದು ಸಚಿವ ಬೈರತಿ ಸುರೇಶ್ ಎಚ್ಚರಿಕೆ ನೀಡಿದರು. ಕುಡಿಯುವ ನೀರು, ಕಸ ನಿರ್ವಹಣೆ ಹಾಗೂ ಮುಖ್ಯವಾಗಿ ಎಲ್ಲಿಯೂ ನೀರು ಕಲುಷಿತವಾಗದಂತೆ ಕ್ರಮ ವಹಿಸಬೇಕು. ಯುಜಿಡಿ ಪೈಪ್ಗಳು ಒಡೆದು ಹಾಳಾಗಿದ್ದರೆ ತಕ್ಷಣವೇ ಬೇರೆ ಹಾಕಬೇಕು. ಕುಡಿಯುವ ನೀರು ಕಲುಷಿತವಾಗದಂತೆ ಎಚ್ಚರ ವಹಿಸಬೇಕು. ನಗರ ಭಾಗದಲ್ಲಿ ಜನವರಿವರೆಗೆ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಆನಂತರ ಕುಡಿಯುವ ನೀರನ್ನು ಉತ್ತಮವಾಗಿ ನಿರ್ವಹಿಸಬೇಕು. ಅಗತ್ಯವಿದ್ದಲ್ಲಿ ಟ್ಯಾಂಕರ್ ಮೂಲಕ ಸರಬರಾಜು ಮಾಡಬೇಕು ಎಂದು ಸಚಿವರು ತಿಳಿಸಿದರು. - - - ಕೋಟ್ ₹900 ಕೋಟಿ ಮಂಜೂರು: ಸ್ಮಾರ್ಟ್ಸಿಟಿಗೆ ಸಂಬಂಧಿಸಿದಂತೆ ₹990 ಕೋಟಿ ಮಂಜೂರಾಗಿದ್ದು, 71 ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗಿತ್ತು. ಅದರಲ್ಲಿ 67 ಕಾಮಗಾರಿಗಳು ಪೂರ್ಣಗೊಂಡಿವೆ. ಶೇ.97 ಭೌತಿಕ ಮತ್ತು ಶೇ.92 ಆರ್ಥಿಕ ಪ್ರಗತಿಯಾಗಿದೆ. 4 ಕಾಮಗಾರಿ ಪ್ರಗತಿಯಲ್ಲಿದೆ - ಮಾಯಣ್ಣಗೌಡ, ಎಂಡಿ, ಸ್ಮಾರ್ಟ್ಸಿಟಿ ಯೋಜನೆ - - - -27ಎಸ್ಎಂಜಿಕೆಪಿ01: ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಮಾತನಾಡಿದರು.