ಕನ್ನಡಪ್ರಭ ವಾರ್ತೆ ಕೋಲಾರ
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಅಜಾತಶತ್ರು, ಧೀಮಂತ ನಾಯಕ, ಸ್ನೇಹಜೀವಿ, ಭಾರತ ಕಂಡ ಸರ್ವಶ್ರೇಷ್ಠ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿಯವರ ೧೦೦ನೇ ವರ್ಷದ ಹುಟ್ಟುಹಬ್ಬವನ್ನು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಆಚರಿಸಲಾಯಿತು.ಜಿಲ್ಲಾ ಉಪಾಧ್ಯಕ್ಷ ವಿಜಯಕುಮಾರ್ ಮಾತನಾಡಿ, ತಮ್ಮ ಜೀವನವಿಡೀ ದೇಶಕ್ಕಾಗಿ ಬದುಕು ಮುಡಿಪಾಗಿಟ್ಟ ವಾಜಪೇಯಿಯವರಿಗೆ ಭಾರತ ರತ್ನ ನೀಡಲು ಮೋದಿ ಸರ್ಕಾರವೇ ಬರಬೇಕಾಯಿತು. ಕೆಲವು ನಾಯಕರೆನಿಸಿದವರು ತಮಗೆ ತಾವೇ ಭಾರತ ರತ್ನ ಕೊಟ್ಟುಕೊಂಡ ನಿದರ್ಶನಗಳ ನಡುವೆ ವಾಜಪೇಯಿಯವರಂತಹ ಪ್ರಾಮಾಣಿಕ ನಾಯಕರನ್ನು ಮರೆತು ಹೋಗಿದ್ದು ಮಾತ್ರ ದುರಂತದ ಸಂಗತಿ ಎಂದು ಬೇಸರಗೊಂಡರು.
ಆಜಾತ ಶತ್ರು, ಕವಿ ಹೃದಯಿ ರಾಜಕಾರಣಿ ವಾಜಪೇಯಿ ತಮ್ಮ ಆಡಳಿತಾವಧಿಯಲ್ಲಿ ಭಾರತದ ಹಿರಿಮೆ ಹೆಚ್ಚಿಸಿದ್ದಾರೆ. ಉನ್ನತ ಆದರ್ಶ ಹಾಗೂ ಮೌಲ್ಯಾಧಾರಿತ ರಾಜಕಾರಣದ ಮೂಲಕ ಮಾದರಿಯಾಗಿದ್ದು, ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತನೂ ಇವರ ಆದರ್ಶಗಳನ್ನು ಪಾಲಿಸುವ ಮೂಲಕ ಭಾರತವನ್ನು ಬಲಿಷ್ಠ ರಾಷ್ಟ್ರವನ್ನಾಗಿಸಲು ಪಣತೊಟ್ಟು ನಿಲ್ಲಬೇಕಾಗಿದೆ ಎಂದರು.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಓಂ ಶಕ್ತಿ ಚಲಪತಿ ಮಾತನಾಡಿ, ಅಟಲ್ ಬಿಹಾರಿ ವಾಜಪೇಯಿಯವರು ಮೂರು ಬಾರಿ ಕೋಲಾರಕ್ಕೆ ಬಂದಿದ್ದರು. ಕೋಲಾರಕ್ಕೆ ಪವರ್ ಗ್ರೀಡ್ ವಾಜಪೇಯಿ ಪ್ರಧಾನಿಯಾಗಿದ್ದಾಗ ನೀಡಿದ ಕೊಡುಗೆ ಎಂದು ತಿಳಿಸಿದರು.
ಪ್ರಪಂಚವು ಭಾರತ ಕಡೆ ನೋಡುವಂತೆ ಮಾಡಿದ್ದು ವಾಜಪೇಯಿ. ಪೋಕ್ರಾನ್ ನಲ್ಲಿ ಅಣು ಬಾಂಬ್ ಸ್ಫೋಟ ಮಾಡಿ ಇಡೀ ಪ್ರಪಂಚವೇ ಭಾರತ ಕಡೆ ನೋಡುವಂತಾಯಿತು. ಪ್ರತಿ ಭಾರತೀಯನಿಗೂ ಅಡುಗೆ ಅನಿಲ ಸುಲಭವಾಗಿ ಸಿಗುವಂತೆ ಮಾಡಿದ್ದು ಅಟಲ್ ಬಿಹಾರಿ ವಾಜಪೇಯಿ, ಟೆಲಿ ಕಮ್ಯುನಿಕೇಶನ್ ಪರಿಚಯಿಸಿದ್ದು ಇವರ ಕಾಲದಲ್ಲಿಯೇ ಎಂದು ತಿಳಿಸಿದರು.ಬಿಜೆಪಿ ಜಿಲ್ಲಾ ಮಾಧ್ಯಮ ಸಂಚಾಲಕ ಕೆಂಬೋಡಿ ನಾರಾಯಣಸ್ವಾಮಿ ಮಾತನಾಡಿ, ಮಾಜಿ ಪ್ರಧಾನಿ ವಾಜಪೇಯಿಯವರು ೧೦ ಬಾರಿ ಲೋಕಸಭಾ ಸದಸ್ಯರಾಗಿ, ಎರಡು ಬಾರಿ ರಾಜ್ಯಸಭಾ ಸದಸ್ಯರಾಗಿ ಮುರಾರ್ಜಿ ದೇಸಾಯಿ ಅವರ ಸರ್ಕಾರದಲ್ಲಿ ವಿದೇಶಾಂಗ ಮಂತ್ರಿಯಾಗಿ ಸೇವೆ ಸಲ್ಲಿಸಿ ಮೂರು ಬಾರಿ ಪ್ರಧಾನಮಂತ್ರಿಯಾಗಿ ದೇಶಕ್ಕಾಗಿ ದುಡಿದಿದ್ದಾರೆ ಎಂದರು.
ಇವರು ಪ್ರಧಾನಮಂತ್ರಿಯಾಗಿದ್ದ ಕಾಲದಲ್ಲಿ ದೇಶದ ಉದ್ದಗಲಕ್ಕೂ ಚತುಷ್ಪಥ ರಸ್ತೆಗಳನ್ನು ನಿರ್ಮಿಸಿ ಸರ್ವ ಶಿಕ್ಷಣ ಅಭಿಯಾನವನ್ನು ಜಾರಿಗೆ ತಂದಿದ್ದರು ಹಾಗೂ ಹಲವಾರು ಯೋಜನೆಗಳನ್ನು ಕೊಟ್ಟ ಮೊದಲ ಪ್ರಧಾನಿ ಎಂದು ತಿಳಿಸಿದರು.ಗ್ರಾಮ ಸಡಕ್ ಯೋಜನೆಯಿಂದ ಪ್ರತಿ ಹಳ್ಳಿಗೂ ರಸ್ತೆ, ಪ್ರತಿ ಹಳ್ಳಿಗೂ ವಿದ್ಯುತ್, ಪ್ರತಿ ಶಾಲೆಗೂ ಸರ್ವ ಶಿಕ್ಷಣ ಅಭಿಯಾನದಲ್ಲಿ ಸುಣ್ಣ ಬಣ್ಣ ಬಳಿಯುವ ಕಾರ್ಯಕ್ರಮ ,ಆರು ಪಥದ ರಸ್ತೆಗಳು, ಇಡೀ ವಿಶ್ವಕ್ಕೆ ಭಾರತ ಬಲಿಷ್ಠ ದೇಶವೆಂದು ತೋರಿಸಿಕೊಟ್ಟಂಥ ಮಹಾನ್ ವ್ಯಕ್ತಿ ವಾಜಪೇಯಿ. ದೇಶದ ಜನತೆಗೆ ಹಲವಾರು ಯೋಜನೆಗಳು ನೀಡಿದಂಥ ಮಹಾನ್ ನಾಯಕನನ್ನು ದೇಶವು ಸದಾ ನೆನಪಿಸಿಕೊಳ್ಳಬೇಕು ಎಂದು ತಿಳಿಸಿದರು.
ಇತರೆ ಮುಖಂಡರು ಮಾತನಾಡಿ, ಮಹಾನ್ ಚೇತನವನ್ನು ಎಂದು ಬಣ್ಣಿಸಿ, ವಿರೋಧ ಪಕ್ಷದ ನಾಯಕರಾಗಿದ್ದಾಗಲೂ ಅವರು ಸದನದಲ್ಲಿ ಮಾತನಾಡಲು ನಿಂತರೆ ಇಡೀ ಸದನವೇ ಮೂಕವಿಸ್ಮಿತವಾಗುತ್ತಿತ್ತು. ಅಂತಹ ಮಹಾನ್ ಚೇತನ ಇಂದು ಇಲ್ಲವಾಗಿರುವುದು ದೇಶಕ್ಕೆ ತುಂಬಲಾರದ ನಷ್ಟ ಎಂದರು.ಈಗ ಪ್ರಧಾನಿ ನರೇಂದ್ರ ಮೋದಿಯವರು ವಾಜಪೇಯಿಯವರ ಆದರ್ಶಗಳನ್ನೇ ಮೈಗೂಡಿಸಿಕೊಂಡಿದ್ದು, ಭಾರತಕ್ಕೆ ವಿಶ್ವಮಾನ್ಯತೆ ತಂದುಕೊಟ್ಟಿದ್ದಾರೆ, ವಾಜಪೇಯಿ ಅವರು ತೋರಿಸಿದ ಮಾರ್ಗದಲ್ಲೇ ಸಾಗುತ್ತಿರುವ ಮೋದಿಯವರಿಂದ ಮಾತ್ರ ಭಾರತ ವಿಶ್ವ ಮಾನ್ಯತೆ ಪಡೆಯಲು ಸಾಧ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಪಾಧ್ಯಕ್ಷ ಮಾಗೇರಿ ನಾರಾಯಣಸ್ವಾಮಿ, ಕಾರ್ಯದರ್ಶಿ ಹಾರೋಹಳ್ಳಿ ವೆಂಕಟೇಶ್, ನಗರಾಧ್ಯಕ್ಷ ಸಾಮಬಾಬು, ಜಿಲ್ಲಾ ಖಜಾಂಚಿ ಮಹೇಶ್, ಹಿಂದುಳಿದ ವರ್ಗಗಳ ಮಂಜುನಾಥ್, ಯುವ ಮೋರ್ಚ ಹರೀಶ್, ನಗರ ಉಪಾಧ್ಯಕ್ಷ ರಾಮಚಂದ್ರ, ಮಹೇಂದ್ರ ಸಿಂಗ್ ಇದ್ದರು.