ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ಹನಿಗಳಲ್ಲಿ ಅಳಲು ತೋಡಿಕೊಳ್ಳುವ ಕವಿ

KannadaprabhaNewsNetwork | Published : Jun 10, 2025 12:23 PM

‘ಕಣ್ಣಲ್ಲಿ ಕಣ್ಣೀರು ಇಲ್ಲದೇ ಹೋಗಿದ್ದರೆ ಕಣ್ಣೇ ನೀನಾಗಿದ್ದ ಸತ್ಯ ತಿಳಿಯುತ್ತಿರಲಿಲ್ಲ ಮನದಲ್ಲಿ ನೋವು ಇಲ್ಲದಿದ್ದರೆ ಹೃದಯವೇ ನೀನೆಂಬ ವಾಸ್ತವ ಅರಿವಾಗುತ್ತಿರಲಿಲ್ಲ

ಕನ್ನಡಪ್ರಭ ವಾರ್ತೆ ಮೈಸೂರು

ಇಹಲೋಕ ತ್ಯಜಿಸಿದ ತಮ್ಮ ಪತ್ನಿಯ ಬಗ್ಗೆ ರಾಜ್ಯ ಬಿಜೆಪಿ ಒಬಿಸಿ ಮೋರ್ಚಾ ಅಧ್ಯಕ್ಷ, ನೈಪುಣ್ಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಆರ್‌. ರಘು ಅವರು ಅನುತಾಪದಿಂದ ಹೃದಯಾಂತರಾಳದಿಂದ ಬಂದ ಹನಿಗವನಗಳ ಗುಚ್ಛ ‘ಭೂಮಿಪುತ್ರಿ''''''''

ಈ ಕವನ ಸಂಕಲನದ ತುಂಬ ಪ್ರೀತಿ ಹರಿದಾಡಿದೆ, ಭಾವನೆಗಳು ನದಿಯಂತೆ ಓದುಗರೆದೆಗೆ ಹರಿದಿವೆ. ಪರಿತಾಪಗಳು ಸಾಕಷ್ಟು ಬಾರಿ ಸುಳಿದಾಡಿ ತಾವೇ ನೊಂದು ಅಕ್ಷರಗಳಾಗಿ ಕುಳಿತಿವೆ. ಕೊನೆಯಿಲ್ಲದ ಏಕಾಂಗಿತನದ ಅಸಹನೆ ಕೆಲವೊಮ್ಮೆ ಓದುಗನನ್ನೂ ದುಃಖಿತನನ್ನಾಗಿ ಮಾಡುತ್ತದೆ. ಸಹಿಸಲಾರದ ಒಂಟಿತನವಿದ್ದರೂ ಈ ಪದಲಾಲಿತ್ಯದಲ್ಲಿ ತನ್ನ ಪತ್ನಿಯನ್ನು ಜೊತೆಗಿಟ್ಟುಕೊಂಡು ಒಂಟಿತನದ ಬೇಗುದಿ ನೀಗಿಕೊಳ್ಳುವ ತಹತಹವಿದೆ. ಪಶ್ಚಾತ್ತಾಪದ ಸುಳಿಯಲ್ಲಿ ಸಿಲುಕಿ ಹೊರಬರಲಾರದೆ ನರಳಿದ ರಾತ್ರಿಗಳಿವೆ. ತನ್ನ ತಪ್ಪಿಗಾಗಿ ತನ್ನನ್ನೇ ಶಿಕ್ಷೆಗೀಡು ಮಾಡಿಕೊಳ್ಳುವ ನಿದ್ದೆ ಬಾರದ ಕಣ್ಣೀರ ರಾತ್ರಿಗಳಿವೆ.

‘ಕಣ್ಣಲ್ಲಿ ಕಣ್ಣೀರು ಇಲ್ಲದೇ ಹೋಗಿದ್ದರೆ ಕಣ್ಣೇ ನೀನಾಗಿದ್ದ ಸತ್ಯ ತಿಳಿಯುತ್ತಿರಲಿಲ್ಲ ಮನದಲ್ಲಿ ನೋವು ಇಲ್ಲದಿದ್ದರೆ ಹೃದಯವೇ ನೀನೆಂಬ ವಾಸ್ತವ ಅರಿವಾಗುತ್ತಿರಲಿಲ್ಲ!

ಇದಕ್ಕೆ ಯಾವ ವ್ಯಾಖ್ಯಾನವೂ ಬೇಡ, ಅರ್ಥಗಳು ತಂತಾನೇ ಹರಡಿಕೊಳ್ಳುತ್ತವೆ.

ಭೂದೇವಿ ಎಂಬ ಕವನ ನೋಡಿ; ಕ್ಷಣ ನಾ ಬೇಸರಿಸಿಕೊಂಡರೂ ಅನುಕ್ಷಣವೂ ಮಿಡಿಯುತ್ತಿದ್ದೆ ನನಗಾಗಿ ತುಡಿಯುತ್ತಿದ್ದೆ ಚಡಪಡಿಸುತ್ತಿದ್ದೆ ಜತನದಿಂದ ಈ ಉಸಿರ ಕಾಯುತ್ತಿದ್ದೆ

ಭಾರವಾದ ಮನಸ ಭೂದೇವಿಯಂತೆ ಹೊರುತ್ತಿದ್ದೆ ಆವರಿಸಿದ ಮೌನದಲಿ ನಾದ ಹೊಮ್ಮಿಸುತ್ತಿದ್ದೆ ಕಣ್ಮುಚ್ಚಿದರೂ ಕಣ್ತೆರೆದರೂ ನೀನಿಲ್ಲದ ಸತ್ಯದ ಅಸಲಿಯತ್ತು ನೆನಪುಗಳ ನೆಪದಲ್ಲಿ ಅನುಕ್ಷಣವೂ ತಿವಿದು ನೋವ ಚಿತ್ರ ಬಿಡಿಸುತ್ತಿದೆ.

ಇಲ್ಲಿ ಈ ಕವನಗಳನ್ನು ಯಾವುದೇ ಪೂರ್ವಭಾವಿ ತಯಾರಿಯಿಲ್ಲದೆ, ತರಾತುರಿಯಿಲ್ಲದೆ ಓದಬಹುದು. ಪದಗಳ ಆಡಂಬರವಾಗಲಿ, ಪ್ರತಿಮೆ ರೂಪಕಗಳ ಹಂಗಾಗಲಿ ಇಲ್ಲಿಲ್ಲ. ತನ್ನ ಸತಿಯ ಬಗೆಗೆ ಅನಿಸಿದ್ದನ್ನು ತನ್ನ ಅಂತರಂಗದ ಮಾತುಗಳನ್ನು ಕವಿ ಅಕ್ಷರದಲ್ಲಿ ಮೂಡಿಸಿದ್ದಾರೆ.

ಸಂಕಲನದ ಪ್ರತಿ ಅಕ್ಷರವೂ, ರಘು ಅವರಿಗೆ ಅಗಲಿ ಹೋದ ತನ್ನ ಮಡದಿ ನಿರ್ಮಲಾ ಅವರ ಮೇಲಿನ ಪ್ರೀತಿಯನ್ನು ಪ್ರಚುರ ಪಡಿಸುತ್ತದೆಯೇ ಹೊರತು, ಕವನಗಳನ್ನು ಹೆಣೆಯಲು ಪ್ರಯತ್ನಿಸಿಲ್ಲ. ನಾಲ್ಕು ಜನ ಓದುವುದು ನಂತರದ ವಿಷಯ, ಆದರೆ ತನ್ನ ಭಾವೋದ್ವೇಗವನ್ನು, ಕದಡಿದ ಮನಃಸ್ಥಿತಿಯನ್ನು ಶಮನ ಮಾಡಿಕೊಳ್ಳುವ ಬಗೆ ಅನನ್ಯವಾಗಿದೆ. ಆದರೆ ಇಲ್ಲೊಂದು ವೈರುಧ್ಯ, ವ್ಯಂಗ್ಯವೆಂದರೆ ಕವನಗಳನ್ನು ಬರೆಯುತ್ತಾ ಬರೆಯುತ್ತಾಾ ಕವಿ ತನ್ನ ಸತಿಯಲ್ಲಿ, ಆಕೆಯ ನೆನಪಲ್ಲಿ ಲೀನವಾಗುವ, ಮತ್ತೂ ದುಃಖದಲ್ಲೇ, ಒಂಟಿತನದಲ್ಲೇ ಮುಳುಗಿಹೋಗುವ ಪರಿ, ಓದುಗನಿಗೆ ಸ್ಪಷ್ಟವಾಗಿ ಗೋಚರವಾಗುತ್ತದೆ. ಕವನಗಳು ಆಪ್ತವೆನಿಸುತ್ತವೆ. ಮನ ಕಲಕುತ್ತವೆ. ಪುಟ್ಟ ಕವನದಲ್ಲಿ ಅಗಾಧವಾದುದನ್ನು ಹೇಳುವ ರೀತಿ ಮೆಚ್ಚುವಂತಹುದು.

ವರ್ಷ ತುಂಬುವುದರೊಳಗೇ ವಿಚ್ಛೇದಿತರಾಗುವ ಗಂಡ ಹೆಂಡತಿಯರ ಈ ಕಾಲದಲ್ಲಿ , ಇಂತಹ ಸತಿಪತಿ ಸಮಾಜಕ್ಕೆ ಆದರ್ಶಪ್ರಾಾಯರಾಗಬಲ್ಲರು. ಇವರು ಪ್ರಯತ್ನ ಪಟ್ಟರೆ, ಅದ್ಭುತವಾದ ಕವನಗಳನ್ನು ಕಾವ್ಯಲೋಕಕ್ಕೆ ಕಾಣಿಕೆಯಾಗಿ ನೀಡಬಲ್ಲರು. ಬರೆಯದೆ ಉಳಿದ ಭಾವಗಳು, ಆಡದೆ ಉಳಿದ ಮತ್ತಷ್ಟು ಮನಸಿನ ಮಾತುಗಳು, ಕವನಗಳಾಗಿ ಹರಿದು ಹೊತ್ತಗೆಯಾಗಿ, ಓದುಗನ ಕೈಸೇರಲಿ.

-ಬಿ.ಕೆ.ಮೀನಾಕ್ಷಿ, ಮೈಸೂರು