ಡಂಬಳ: ಡಂಬಳ ಗ್ರಾಮದ ರೈತ ಗುರಪ್ಪ ಚಿಕರೆಡ್ಡಿ ಅವರ ಜಮೀನಿನಲ್ಲಿ ಕಾವೇರಿ ಸೀಡ್ಸ್ ಕಂಪನಿ ಲಿಮಿಟೆಡ್ ಗೋವಿನ ಜೋಳದ ಕ್ಷೇತ್ರೋತ್ಸವ ಜರುಗಿತು. ಅಯೋಧ್ಯೆಯಲ್ಲಿ ಜ. 22ರಂದು ರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಗೋವಿನಜೋಳದ ತೆನೆಯಿಂದ ರಾಮಮಂದಿರ ನಿರ್ಮಾಣ ಮಾಡಿ ಭಕ್ತಿಪೂರ್ವಕವಾಗಿ ನಮಿಸಲಾಯಿತು.
ಈ ಸಂದರ್ಭದಲ್ಲಿ ಕಾವೇರಿ ಸೀಡ್ಸ್ ಕಂಪನಿಯ ಆರ್ಬಿಎಂ ಅಧಿಕಾರಿ ಕೋಟೆಪ್ಪ ಭೀಮಪ್ಪನವರ ಶ್ರೀರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಪಣೆ ಮಾಡಿದರು.ಈ ವೇಳೆ ಮಾತನಾಡಿದ ಅವರು, ಕಾವೇರಿ ಕೆಎಮ್ಎಚ್ 8333 ಗೋವಿನ ಜೋಳದ ಬೀಜ ಹೆಚ್ಚು ಅಭಿವೃದ್ಧಿ ಪಡಿಸಿದ್ದು ಗೋವಿನ ಜೋಳದ ತೆನೆ ಕಾಳು ದೊಡ್ಡದಾಗಿದ್ದು, ಉತ್ತಮ ಗುಣಮಟ್ಟದ ಇಳುವರಿ ಹಾಗೂ ರೈತರಿಗೆ ಹೆಚ್ಚಿನ ಆದಾಯ ತಂದುಕೊಡುವಲ್ಲಿ ಫಲಕಾರಿಯಾಗಿದೆ ಎಂದರು.
ಜ. 22ರಂದು ಜರುಗುವ ಶ್ರೀರಾಮಮಂದಿರ ಹಿನ್ನೆಲೆಯಲ್ಲಿ ನಾವು ಕೂಡಾ ರೈತರ ಬೆಳೆಯಿಂದ ರಾಮಮಂದಿರವನ್ನು 4 ಸಾವಿರ ಜೋಳದ ತೆನೆಯಿಂದ ಮಾಡಿದ್ದೇವೆ ಎಂದರು.ರಾಜ್ಯಾದ್ಯಂತ ಕಾವೇರಿ ಸೀಡ್ಸ್ ಕಂಪನಿಯಿಂದ ಗೋವಿನ ಜೋಳದ ಬೀಜವನ್ನು ಮುಂಗಾರು ಮತ್ತು ಹಿಂಗಾರಿ ಸಾವಿರ ಟನ್ ಬೀಜವನ್ನು ರೈತರು ಖರೀದಿಸಿ ಬಿತ್ತುವುದರ ಮೂಲಕ ಉತ್ತಮ ಇಳುವರಿಯನ್ನು ಪಡೆದು ಆರ್ಥಿಕವಾಗಿ ರೈತರು ಮುಖ್ಯ ವಾಹಿನಿಗೆ ಬರಲು ಕಾರಣವಾಗಿದೆ. ಆ ಹಿನ್ನೆಲೆಯಲ್ಲಿ ಇನ್ನು ಹೆಚ್ಚು ರೈತರು ಗೋವಿನ ಜೋಳದ ಬೀಜದ ಸದುಪಯೋಗವನ್ನು ಪಡೆದುಕೊಳ್ಳಲು ಮುಂದಾಗಬೇಕೆಂದು ಹೇಳಿದರು.ರೈತ ಶ್ರೀಗುರಪ್ಪ ಚಿಕರೆಡ್ಡಿ ಮಾತನಾಡಿ, ಕಾವೇರಿ ಗೋವಿನ ಜೋಳದ ಬೀಜವನ್ನು 3 ವರ್ಷದಿಂದ ಬಿತ್ತನೆ ಮಾಡಿ ಉತ್ತಮ ಇಳುವರಿಯನ್ನು ಪಡೆದು ಉತ್ತಮ ಲಾಭವನ್ನು ಹೊಂದಲು ನಮಗೆ ಸಹಕಾರಿಯಾಗಿದೆ. ಇವತ್ತು ರಾಮ ಮಂದಿರ ನಿರ್ಮಿಸಿರುವುದು ಸಂತೋಷ ತಂದಿದೆ ಎಂದು ಹೇಳಿದರು.
ವಿತರಕ ಪ್ರವೀಣ ಇಡಗಲ್ಲ ಅವರು ಮಾತನಾಡಿ, ಗೋವಿನ ಜೋಳದ ಬೆಳೆಯಲ್ಲಿ ರೈತರು ಹೆಚ್ಚಿನ ಇಳುವರಿ ಹೊಂದುವ ಕುರಿತು. ಕೀಟ ನಿವಾರಣೆ, ಅಧಿಕ ಇಳುವರಿ ಪಡೆಯುವ ಬಗೆಯನ್ನು ರೈತರಿಗೆ ವಿವರಿಸಿದರು.4 ಸಾವಿರ ಮೆಕ್ಕೆಜೋಳವನ್ನು ಬಳಸಿ ಅಯೋಧ್ಯೆಯ ರಾಮಮಂದಿರದಂತೆಯೇ ಕಟ್ಟಿ ಸುತ್ತಮುತ್ತಲಿನ ಗ್ರಾಮಸ್ಥರನ್ನು ಕರೆಸಿ ಶ್ರೀರಾಮನ ದರ್ಶನ ಮಾಡಿಸಿದರು. ಮಹಿಳೆಯರು ತಂಡೋಪ ತಂಡವಾಗಿ ಬಂದು ವೀಕ್ಷಿಸಿದರು. ಅನ್ನಸಂತರ್ಪಣೆ ಜರುಗಿತು.
ಕಾರ್ಯಕ್ರಮದಲ್ಲಿ ಜಿ.ಪಂ. ಮಾಜಿ ಉಪಾಧ್ಯಕ್ಷ ಬೀರಪ್ಪ ಬಂಡಿ, ಕಾವೇರಿ ಬೀಜ ಕಂಪನಿಯ ಸೇಲ್ಸ್ ಅಧಿಕಾರಿ ಕಾಲೇಶ ಸೂಡಿ, ಸಿದ್ದನಗೌಡ್ರ ಕರಿಗೌಡ್ರ, ಮುತ್ತಣ್ಣ ಹೂಗಾರ, ಕಲಮೇಶ ಕಲ್ಲನಗೌಡರ, ಬಶೀರಹಮ್ಮದ ತಾಂಬೋಟಿ, ಅಶೋಕ ತಂಟ್ರಿ, ಬಸುರಾಜ ಹಾರೂಗೇರಿ, ಅಜ್ಜಪ್ಪ ಲಿಂಬಿಕಾಯಿ, ವೆಂಕಟೇಶ ತಳವಾರ ವರ್ತಕರು, ಸುತ್ತಮುತ್ತಲಿನ ಗ್ರಾಮದ ರೈತರು ಇದ್ದರು.