ಕನ್ನಡಪ್ರಭ ವಾರ್ತೆ ಶಿವಮೊಗ್ಗ ತಾಲೂಕಿನ ಸಕ್ರೆಬೈಲು ಆನೆ ಬಿಡಾರದಲ್ಲಿ ಪ್ರೀ ವೆಡ್ಡಿಂಗ್ ಶೂಟ್ ಮಾಡುವ ವೇಳೆ ಆನೆ ಮೇಲಿಂದ ಮಾಹುತ ಕೆಳಗೆ ಬಿದ್ದ ಘಟನೆ ನಡೆದಿದೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದ್ದು, ಘಟನೆ ಈಗ ಚರ್ಚೆಗೆ ಗ್ರಾಸವಾಗಿದೆ.
ಘಟನೆಯಲ್ಲಿ ಕೈಗೆ ಹಾಗೂ ತಲೆಗೆ ಬಲವಾದ ಪೆಟ್ಟುಬಿದ್ದು ಮಾವುತ ಶಂಷುದ್ದೀನ್ ಪ್ರಜ್ಞೆತಪ್ಪಿದ್ದಾನೆ. ಕೂಡಲೇ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ವನ್ಯಜೀವಿ ವಿಭಾಗದ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಮಾವುತನ ಆರೋಗ್ಯ ವಿಚಾರಿಸಿದ್ದಾರೆ.
ಮಾವುತ ಬೀಳುತ್ತಿದ್ದಂತೆ ಫೊಟೋ ಶೂಟ್ನಲ್ಲಿದ್ದ ಯುವಕ- ಯುವತಿ ಗಾಬರಿಯಿಂದ ಓಡಿದ್ದಾರೆ. ಈ ಘಟನೆಯಿಂದ ಬಿಡಾರದಲ್ಲಿ ಕೆಲಹೊತ್ತು ಗೊಂದಲ, ಭಯದ ವಾತಾವರಣ ನಿರ್ಮಾಣವಾಗಿತ್ತು.ತಿಂಗಳಿಗೂ ಹಿಂದೆ ಗರ್ಭಿಣಿ ಆನೆ ಭಾನುಮತಿ ಬಾಲ ತುಂಡಾಗುವಂಥ ಸ್ಥಿತಿಯಲ್ಲಿ ಪೆಟ್ಟುಬಿದ್ದಿತ್ತು. ದಸರಾ ಮೆರವಣಿಗೆ ಹಿಂದಿನ ದಿನ ಮೆರವಣಿಯಲ್ಲಿ ಭಾಗಿ ಆಗಬೇಕಿದ್ದ ಗೀತಾ ಆನೆ ಮರಿಹಾಕಿತ್ತು. ಈ ಎಲ್ಲ ಘಟನೆಗಳಿಂದ ಸಕ್ರೆಬೈಲು ಆನೆ ಬಿಡಾರ ಅಧಿಕಾರಿ-ಸಿಬ್ಬಂದಿ, ವೈದ್ಯರು ಟೀಕೆಗೆ ಗುರಿಯಾಗಿದ್ದರು. ಹೀಗಿರುವಾಗಲೇ ಈಗ ಪ್ರೀ ವೆಡ್ಡಿಂಗ್ ಚಿತ್ರೀಕರಣ ವೇಳೆ ಆನೆ ಮೇಲಿಂದ ಮಾವುತ ಕೆಳಗೆ ಬಿದ್ದು ಗಂಭೀರ ಗಾಯಗೊಂಡ ಅವಘಡ ಸಂಭವಿಸಿದೆ.
ಸಕ್ರೆಬೈಲು ಆನೆ ಬಿಡಾರದಲ್ಲಿ ಪ್ರೀ ವೆಡ್ಡಿಂಗ್ ಶೂಟಿಂಗ್ ವೇಳೆ ಆನೆಯಿಂದ ಕೆಳಗೆ ಬೀಳುತ್ತಿರುವ ಮಾವುತ ಶಂಷುದ್ದೀನ್.