ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಸಪ್ತ ವ್ಯಸನಗಳಲ್ಲಿ ಮದ್ಯಪಾನವೇ ಮೊದಲ ಮೆಟ್ಟಿಲು. ಇದರಲ್ಲಿ ಜಾರಿದರೆ ನಮ್ಮ ಬದುಕಿನ ಯಶಸ್ಸಿನ ಗುರಿ ಮುಟ್ಟವ ಬದಲು ಎಲ್ಲದರಲ್ಲೂ ನಾವು ಜಾರಿ ಬೀಳುತ್ತೇವೆ. ಕಷ್ಟ ಮರೆಯಲು ಕುಡಿತದ ಚಟಕ್ಕೆ ಒಳಗಾದರೆ ನಮ್ಮ ಕುಟುಂಬಕ್ಕೆ ಮತ್ತು ಸಮಾಜಕ್ಕೆ ಕಷ್ಟ ಬರುತ್ತದೆ ಎಂದರು.
ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಧರ್ಮಸ್ಥಳ ಸಂಸ್ಥೆ ನಿರಂತರ ಶ್ರಮಿಸುತ್ತಿದೆ. ರಾಜ್ಯದ ಉದ್ದಗಲಕ್ಕೂ ಮದ್ಯ ವರ್ಜನ ಶಿಬಿರ ಆಯೋಜಿಸಿ ಕುಡಿತದ ಚಟಕ್ಕೆ ಒಳಗಾದ ವ್ಯಕ್ತಿಗಳನ್ನು ಚಟ ಮುಕ್ತಗೊಳಿಸಿ ಸಮಾಜದ ಮುಖ್ಯ ವಾಹಿನಿಗೆ ತಂದು ನಿಲ್ಲಿಸುವ ಕೆಲಸ ಮಾಡುತ್ತಿದೆ ಎಂದರು.ರಾಜ್ಯದಲ್ಲಿ ಇದುವರೆಗೆ 1.20 ಲಕ್ಷ ಜನ ನಮ್ಮ ಶಿಬಿರದ ಮೂಲಕ ಕುಡಿತದ ಚಟದಿಂದ ಬಿಡುಗಡೆಯಾಗಿ ಸುಂದರ ಬದುಕು ಸಾಗಿಸುತ್ತಿದ್ದಾರೆ. ಹಿಂದಿನ ಶಿಬಿರಗಳಲ್ಲಿ ಕುಡಿತದ ಚಟದಿಂದ ಮುಕ್ತಿ ಪಡೆದವರು ಇಂದಿನ ಶಿಬಿರಗಳಲ್ಲಿ ಸ್ವಯಂ ಸೇವಕರಂತೆ ಕೆಲಸ ಮಾಡುತ್ತಿದ್ದು ಸಮಾಜದ ಮತ್ತು ಕುಟುಂಬದ ಪ್ರೀತಿ ವಿಶ್ವಾಸಕ್ಕೆ ಭಾಜನರಾಗಿದ್ದಾರೆ ಎಂದರು.
ಕುಡಿತ ಬಿಟ್ಟ ನಂತರ ನಿಮ್ಮ ಬೆವರಿನ ಫಲ ನಿಮ್ಮ ಕುಟುಂಬಕ್ಕೆ ಮೀಸಲಾಗಿರಲಿ. ಜೀವನ ಸಾಗಿಸಲು ದುಡಿಮೆ ಇದ್ದರೆ ನಮ್ಮ ಮನಸ್ಸು ಪ್ರಗತಿಯತ್ತ ಯೋಚಿಸುತ್ತದೆ. ನೀವು ಮನೆಗೆ ಒಳ್ಳೆಯ ಮಗನಾಗಿ, ಸಮಾಜಕ್ಕೆ ಉತ್ತಮ ವ್ಯಕ್ತಿಗಳಾಗಿ ಮಕ್ಕಳಿಗೆ ಆದರ್ಶವಾಗಬೇಕು ಎಂದರು.
ತಾಲೂಕು ಕಸಾಪ ಮಾಜಿ ಅಧ್ಯಕ್ಷ ಎಂ.ಕೆ.ಹರಿಚರಣತಿಲಕ್ ವಿಶೇಷ ಉಪನ್ಯಾಸ ನೀಡಿದರು. ಬೂಕನಕೆರೆ ಗ್ರಾಪಂ ಅಧ್ಯಕ್ಷ ಬಿ.ಆರ್.ಶ್ಯಾಮ್ ಪ್ರಸಾದ್ ಮಾತನಾಡಿದರು. ಸರ್ಕಾರಿ ಪ್ರೌಢಶಾಲೆ ಎಸ್.ಡಿ.ಎಂ.ಸಿ ಅಧ್ಯಕ್ಷ ಮಲ್ಲಿಕಾರ್ಜುನ್, ಗ್ರಾಮದ ಮುಖಂಡ ಮಹೇಶ್, ಪ್ರಾದೇಶಿಕ ಜನಜಾಗೃತಿ ವಿಭಾಗದ ಯೋಜನಾಧಿಕಾರಿ ಮಾಧವ ನಾಯಕ್ ಮೇಲ್ವಿಚಾರಕ ಪ್ರಕಾಶ್ ಆಚಾರ್ಯ ಸೇರಿದಂತೆ ಹಲವರಿದ್ದರು.