ಫಕೃದ್ದೀನ್ ಎಂ ಎನ್.
ನವಲಗುಂದ: ಬಡವರು, ಅಸಂಘಟಿತ ವಲಯದ ಕಾರ್ಮಿಕರು, ಬಡ ವಿದ್ಯಾರ್ಥಿಗಳಿಗೆ ಅಲ್ಪ ಮೊತ್ತದಲ್ಲಿ ಪೌಷ್ಟಿಕಾಂಶಯುತ ಆಹಾರ ಒದಗಿಸುವ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಇಂದಿರಾ ಕ್ಯಾಂಟೀನ್ ಹೊಟ್ಟೆ ತುಂಬಿಸುವ ಬದಲಿಗೆ ಅರ್ಧ ಉಪಾಹಾರ ಊಟ ನೀಡುತ್ತಿದೆ.ಪಟ್ಟಣದಲ್ಲಿ ಸ್ವಾತಂತ್ರ್ಯೋತ್ಸವದಂದು ಆರಂಭವಾದ ಇಂದಿರಾ ಕ್ಯಾಂಟೀನ್ ಹಸಿದವರ ಅನ್ನಕ್ಕೆ ಕನ್ನ ಹಾಕಲು ಮುಂದಾಗಿದೆ. ಸರ್ಕಾರ ಇಷ್ಟು ದರದಲ್ಲಿ ಇಷ್ಟೇ ತೂಕದಳತೆಯ ಊಟ-ಉಪಹಾರ ನೀಡಬೇಕೆಂಬ ನಿಯಮ ಮಾಡಿದೆ. ಅದಕ್ಕನುಗುಣವಾಗಿ ಇಂದಿರಾ ಕ್ಯಾಂಟೀನ್ ನಡೆಸುವವರಿಗೆ ಮೂರು ಪಟ್ಟು ಹಣವನ್ನೂ ನೀಡುತ್ತದೆ.
ಆರಂಭವಾದ ವಾರದಲ್ಲಿಯೇ ತನ್ನ ವರಸೆ ಆರಂಭಿಸಿದ ಇಂದಿರಾ ಕ್ಯಾಂಟೀನ್ ಬಡವರ ತಟ್ಟೆಯಲ್ಲಿನ ಅನ್ನವನ್ನು ಕಸಿಯುವ ಹೊಂಚು ನಡೆಸಿದ್ದಂತೂ ಮರಕು ಹುಟ್ಟಿಸುವಂತಾಗಿದೆ.ಇಲ್ಲಿ ₹5ಗೆ ಒಂದು ಪ್ಲೇಟ್ ಇಡ್ಲಿ (150) ಗ್ರಾಂ ಜತೆಗೆ 150 ಗ್ರಾಂ ಸಾಂಬಾರು ನೀಡಬೇಕು. ಆದರಲ್ಲಿ 90 ಗ್ರಾಂ ನೀಡಲಾಗುತ್ತಿದೆ. ಮಂಡಕ್ಕಿ ಬಜಿ (225) ಗ್ರಾಂ ಇರಬೇಕು. ಬದಲಾಗಿ 110 ಗ್ರಾಂ, ನೀಡಲಾಗುತ್ತಿದೆ. ಈ ಕುರಿತು ಸೋಮವಾರ ಕೆಲ ಗ್ರಾಹಕರು ತಕರಾರು ತೆಗೆದಾಗ ಪುರಸಭೆ ಅಧಿಕಾರಿಗಳು ಬಂದು ಊಟ- ಉಪಹಾರದ ತೂಕ ಮಾಡಿದಾಗ ವ್ಯತ್ಯಾಸ ಕಂಡು ಬಂದಿದ್ದು, ಇಂದಿರಾ ಕ್ಯಾಂಟೀನ್ ಗುತ್ತಿಗೆ ಪಡೆವರಿಗೆ ಸರ್ಕಾರದ ನಿಯಮಾನುಸಾರ ಅಳತೆಗೆ ತಕ್ಕ ಹಾಗೆ ಊಟ-ಉಪಹಾರ ನೀಡಬೇಕೆಂದು ಸೂಚಿಸಿದರು.
ಶಾಲಾ-ಕಾಲೇಜುಗಳು ಸೇರಿದಂತೆ ಇಂದಿರಾ ಕ್ಯಾಂಟೀನ್ ಎದುರಿಗೆ ಸರ್ಕಾರಿ ಆಸ್ಪತ್ರೆ ಇರುವುದರಿಂದ ರೋಗಿಗಳಿಗೂ ಅನುಕೂಲವಾಗಬಹುದಾದ ಇಂದಿರಾ ಕ್ಯಾಂಟೀನ್ ಆರಂಭದಲ್ಲಿಯೇ ಆಯ ತಪ್ಪಿರುವುದು ಬೇಸರವನ್ನುಂಟು ಮಾಡಿದೆ.ಆತುರದಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿದ ಶಾಸಕರು, ಈ ಕುರಿತು ಪರಿಶೀಲಿಸಿ, ಸರ್ಕಾರದ ಲೆಕ್ಕದಲ್ಲಿ ತೂಕದ ಅಳತೆಗೆ ಊಟ ತಿಂಡಿ ನೀಡಿ ಬಡವರ ಹೊಟ್ಟೆಗೆ ಹಿತವಾದ ಊಟ ದೊರಕಿಸುವರೋ ಕಾದು ನೋಡಬೇಕಿದೆ.
ಮನಿಯಾಗ ಎಲ್ಲರೂ ಹೆಸರು ಬಿಡಿಸಾಕ ಹೊಲಕ್ಕೆ ಹೊಕ್ಕಾರಿ. ಅದಕ ನಾಷ್ಟಾ ಮಾಡಾಕ ಇಲ್ಲಿಗೆ ಬಂದ್ರ ತಟಗ ತಟಗ ನಾಷ್ಟಾ ಕೊಡತಾರಿ. ಹೊಟ್ಟಿ ತುಂಬಂಗಿಲ್ಲ. ಇಲ್ಲಿ ನಾಷ್ಟಾ ಮಾಡಿ ಶಾಲೆಗೆ ಹೊಕ್ಕಿನಿ. ಶಾಲೆ ಊಟಕ್ಕೆ ಬಿಡುವ ಮುಂಚೆನೇ ಹೊಟ್ಟಿ ಹಸಿತೈತಿ ರಿ.. ಇಂದಿರಾ ಕ್ಯಾಂಟೀನ್ ಹೊಟ್ಟಿ ತುಂಬಸವಲ್ದು ಎನ್ ಮಾಡೋದ್ರಿ ಎಂದು ವಿದ್ಯಾರ್ಥಿ ವಿನೋದ ಮಾಳವಾಡ ಅಳಲು ತೋಡಿಕೊಂಡರು.ಇಂದಿರಾ ಕ್ಯಾಂಟೀನ್ ಊಟ-ಉಪಹಾರದ ತೂಕದ ವ್ಯತ್ಯಾಸವಾಗಿದ್ದು, ಈ ಕುರಿತು ಸಂಬಂಧಿಸಿದ ಗುತ್ತಿಗೆದಾರರಿಗೆ ಮಾತನಾಡಿ ಸರ್ಕಾರದ ನಿಯಮಾನುಸಾರ ನೀಡುವಂತೆ ಸೂಚಿಸಲಾಗಿದೆ ಎಂದು ನವಲಗುಂದ ಪುರಸಭೆ ಮುಖ್ಯಾಧಿಕಾರಿ ಎಸ್.ಪಿ. ಪೂಜಾರ ಹೇಳಿದರು.