ಕನ್ನಡಪ್ರಭ ವಾರ್ತೆ ವಿಜಯಪುರ: ಸಂವಿಧಾನವನ್ನೇ ಬದಲಾವಣೆ ಮಾಡಲು ಹೊರಟಿರುವ ಮೋದಿ ಹಾಗೂ ಬಿಜೆಪಿ ನಾಯಕರಿಗೆ ಈ ಲೋಕಸಭಾ ಚುನಾವಣೆಯಲ್ಲಿ ಜನ ಸರಿಯಾಗಿ ಪಾಠ ಕಲಿಸುತ್ತಾರೆ. ಮೀನುಗಾರರು ಹಾಗೂ ಮೀನುಗಾರ ಸಮುದಾಯ ಇವತ್ತು ಕಾಂಗ್ರೆಸ್ ಪಕ್ಷದ ಕೊಡುಗೆಯನ್ನು ಎಂದೂ ಮರೆಯೋದಿಲ್ಲ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಂಪೂರ್ಣವಾಗಿ ಬೆಂಬಲ ನೀಡಲಾಗುವುದು ಎಂದು ಕೆಪಿಸಿಸಿ ಮೀನುಗಾರ ವಿಭಾಗದ ಅಧ್ಯಕ್ಷ ಮಂಜುನಾಥ ಸುಣಗಾರ ಪ್ರಕಟಿಸಿದರು.
ವಿಜಯಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜು ಅಲಗೂರ ಪರವಾಗಿ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲ ಗಂಗಾಮತಸ್ಥ ಸಮುದಾಯ, ಬೆಸ್ತ ಜನಾಂಗ ಮತಯಾಚನೆಗೆ ಆಗಮಿಸಿದ್ದು, ಒಬ್ಬ ಉತ್ತಮ ಅಭ್ಯರ್ಥಿಗೆ ಈ ಬಾರಿ ಕಾಂಗ್ರೆಸ್ ಅವಕಾಶ ಕಲ್ಪಿಸಿಕೊಟ್ಟಿದೆ ಎಂದರು.
ದೇಶದಲ್ಲಿ ಕಾಂಗ್ರೆಸ್ ಸ್ವಾತಂತ್ರ್ಯ ಪೂರ್ವದಲ್ಲಿ ಹಾಗೂ ಸ್ವಾತಂತ್ರ್ಯ ನಂತರದಲ್ಲಿ ತನ್ನದೇ ಆದ ಚಾಪನ್ನು ಮೂಡಿಸುತ್ತ ಬಂದಿದೆ. ಅದು, ಕಾಂಗ್ರೆಸ್ ಸಾಧನೆ. ಕಾಂಗ್ರೆಸ್ ಮಾಡಿರುವ ಕೆಲಸ, ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಚಹಾ ಮಾರಿ ಪ್ರಧಾನಿಯಾಗಿದ್ದೇನೆ ಎಂದು ಹೇಳುತ್ತಾರೆ. ದೇಶದ ಪ್ರಧಾನಿ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣದಲ್ಲಿ ಚಹಾ ಮಾರಲು ಬಸ್ ನಿಲ್ದಾಣ ಮತ್ತು ರೈಲು ನಿಲ್ದಾಣ ನಿರ್ಮಾಣ ಮಾಡಿ ಅವರು ಪ್ರಧಾನಮಂತ್ರಿ ಯಾಗಲು ಅವಕಾಶ ಕಲ್ಪಿಸಿದ್ದೆ ಕಾಂಗ್ರೆಸ್ ಎಂದು ಹೇಳಿದರು.ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಾಜೇಶ ಕುಂದೂರ ಮಾತನಾಡಿ, ಜನರಿಗೆ ಅತಿ ಹೆಚ್ಚು ಸುಳ್ಳು ಹೇಳಿದ ಪ್ರಧಾನಿ ಯಾರಾದರೂ ಇದ್ದರೆ ಅದು ನರೇಂದ್ರ ಮೋದಿಯವರು. ಇಂದು ಪ್ರತಿಯೊಬ್ಬ ನಾಗರಿಕನ ಖಾತೆಗೆ ₹15 ಲಕ್ಷ ಹಣ ಹಾಕುವ ಭರವಸೆ ನಿಡಿ ಹತ್ತು ವರ್ಷಗಳು ಕಳೆದರೂ, ಯಾವ ನಾಗರಿಕನಿಗೂ ಹತ್ತು ರೂಪಾಯಿ ಸಹ ಖಾತೆಗೆ ಬಂದಿಲ್ಲ. ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುವ ಭರವಸೆ ನೀಡಿದ್ದರು. ದೇಶದ ಸರ್ಕಾರಿ ಸ್ವಾಮ್ಯದ ಅನೇಕ ಸಂಸ್ಥೆಗಳ ಸಮಸ್ಯೆ ಬಗೆಹರಿಸೋ ಬದಲಾಗಿ ಅಲ್ಲಿರುವ ಉದ್ಯೋಗಿಗಳನ್ನು ಹೊರಹಾಕಿ ಸಂಸ್ಥೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡಿ ನಿರುದ್ಯೋಗಿಗಳನ್ನಾಗಿ ಮಾಡಿದರು. ಜೊತೆಗೆ ಅವರ ಇಡೀ ಕುಟುಂಬ ಬೀದಿಗೆ ಬರುವಂತೆ ಮೋದಿಯವರು ಮಾಡಿದ್ದಾರೆ ಎಂದು ಆರೋಪಿಸಿದರು.