- ಹೊಳೆ ಸಿರಿಗೆರೆಯಲ್ಲಿ ಎ.ಬಿ.ಮಂಜಮ್ಮ ಅವರ ರತ್ನಮಂಜರಿ, ಪೂರ್ಣಪ್ರಭೆ ಕೃತಿಗಳ ಬಿಡುಗಡೆ- - -
ಸಾಧನೆಗೆ ಪುಸ್ತಕಗಳೆಂಬ ಸಾಧನಗಳೇ ಆಯುಧವಾಗಿದ್ದು, ಇಂದು ದೇಶಕ್ಕೆ ಅಂಟಿರುವ ಕಂಟಕ ದೂರವಾಗಲು ಸಾಹಿತ್ಯ ಓದಬೇಕು ಎಂದು ಯಲವಟ್ಟಿ ಸಿದ್ದಾರೂಢ ಆಶ್ರಮದ ಯೋಗಾನಂದ ಸ್ವಾಮೀಜಿ ನುಡಿದರು.
ಇಲ್ಲಿಗೆ ಸಮೀಪದ ಹೊಳೆಸಿರಿಗೆರೆ ಗ್ರಾಮದಲ್ಲಿ ಗ್ರಾಮೀಣ ಸಾಹಿತ್ಯ ಸಂಘಟನೆ, ಚಿಂತನ ಪ್ರಕಾಶನ, ಮತ್ತು ಹೊಂಗಿರಣ ಪತ್ರಿಕೆಯ ಬಳಗ ಸಂಘಟಿಸಿದ್ದ ಸಾಹಿತಿ ಎ.ಬಿ. ಮಂಜಮ್ಮ ವಿರಚಿತ ರತ್ನಮಂಜರಿ, ಪೂರ್ಣಪ್ರಭೆ ಕೃತಿಗಳ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಈ ಹಿಂದೆ ಋಷಿಮುನಿಗಳಿಗೆ, ಸಾಹಿತಿಗಳ ಸಾಧನೆಗಳಿಗೆ ಪುಸ್ತಕಗಳೇ ಅಸ್ತ್ರವಾಗಿದ್ದವು. ಪ್ರಸ್ತುತ ಮಹಿಳೆ ತನ್ನ ಪತಿ, ಮಕ್ಕಳ ಸೇವೆ, ಅಡುಗೆಗೆ ಸೀಮಿತವಾಗದೇ ಸಾಹಿತಿಗಳಾಗಿ ಹೊರಹೊಮ್ಮುತ್ತಿರುವುದು ಸಂತಸದ ವಿಚಾರವಾಗಿದೆ. ಮಾನವ ಜನ್ಮ ಹಾಳಾಗದೇ ಸಮಾಜಕ್ಕೆ ಉಪಯೋಗವಾಗಲು ಗ್ರಂಥಗಳನ್ನು ಓದಿ, ಸತ್ಸಂಗದಲ್ಲಿ ಭಾಗವಹಿಸಬೇಕು. ಸಾಹಿತ್ಯ ರಚನೆಯಲ್ಲಿ ಎಲ್ಲರೂ ತೊಡಗಬೇಕು. ಆಗ ಮನಸ್ಸು ಪರಿಶುದ್ಧವಾಗಲಿದೆ. ಮನುಷ್ಯ ಜನ್ಮ ಶ್ರೇಷ್ಠವಾಗಿದ್ದು, ಆಧುನಿಕತೆಯ ಮನರಂಜನೆಗೆ ಮಾರುಹೋಗುವ ಮನುಷ್ಯನಲ್ಲಿ ಕಲೆ ಸಾಹಿತ್ಯ ಕಡಿಮೆಯಾಗುತ್ತಿರುವುದು ವಿಷಾದನೀಯ ಎಂದರು.
ಪುಣ್ಯಕೋಟಿ ಮಠದ ಬಾಲಯೋಗಿ ಜಗದೀಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಮಠಗಳಿಗೆ ಶಿಷ್ಯರು ಹೇಗೋ, ಓದುಗರಿಗೆ ಪುಸ್ತಕಗಳು ಅಗತ್ಯವಾಗಿದೆ. ಇಂದು ಬಿಡುಗಡೆಯಾದ ಕೃತಿಯಲ್ಲಿನ ಒಂದೊಂದು ಶಬ್ದವೂ ಜನರ ಜೀವನವನ್ನು ಬದಲಾಯಿಸುವ ಶಕ್ತಿ ಹೊಂದಿದೆ. ಇಂಥ ಮನಸ್ಸು ಅರಳಿಸುವ ಪುಸ್ತಕಗಳು ಅನೇಕ ಬರಲಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರತ್ನಮಂಜರಿ, ಪೂರ್ಣಪ್ರಭೆ ಕೃತಿಗಳ ಕುರಿತು ಉಪನ್ಯಾಸಕ ಕಮಲಾಪುರ ಕೊಟ್ರೇಶ್ ಮತ್ತು ಮಾರುತಿ ಅನಿಸಿಕೆ ಹಂಚಿಕೊಂಡರು. ಉಪನ್ಯಾಸಕ ತಿಪ್ಪೇಸ್ವಾಮಿ ಚಕ್ಕಡಿ ಪ್ರಾಸ್ತವಿಕವಾಗಿ ಮಾತನಾಡಿದರು. ಮಧ್ಯಾಹ್ನ ಜಿಲ್ಲಾಮಟ್ಟದ ಕವಿಗೋಷ್ಠಿ ನಡೆಯಿತು.
-ಚಿತ್ರ-೧: ಹೊಳೆಸಿರಿಗೆರೆಯಲ್ಲಿ ರತ್ನಮಂಜರಿ, ಪೂರ್ಣಪ್ರಭೆ ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು.