ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಪಟ್ಟಣದ ನಾಗೂರ ರಸ್ತೆಯಲ್ಲಿರುವ ಇಂದುಮತಿ ಲಮಾಣಿ ತೋಟದ ಮನೆಯಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತು ಮತ್ತು ಗೋರ್ಬಾಯಿ ಟೋಳಿ ಮಹಿಳಾ ಸಮೂಹ ಸಂಸ್ಥೆಯ ಸಹಯೋಗದಲ್ಲಿ ನಡೆದ ದಿ.ಶಂಕರ ದಾಖಪ್ಪ ಲಮಾಣಿ ದತ್ತಿ ಉಪನ್ಯಾಸ ಹಾಗೂ ಶಂಕರಶ್ರೀ ದತ್ತಿನಿಧಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಈ ನಿಟ್ಟಿನಲ್ಲಿ ಇಂದುಮತಿ ಲಮಾಣಿ ಅವರು ತಮ್ಮ ಜೀವನದಲ್ಲಿ ಕಂಡುಂಡ ಅನುಭವಗಳನ್ನು ಸಾಹಿತ್ಯದ ಮೂಲಕ ವಿಶಾಲ ಮನಸ್ಸಿನಿಂದ ಕಾವ್ಯ ಕವನಗಳು ಕಥೆಗಳು, ಶರಣರ ಜೀವನ ಚರಿತ್ರೆ ಕುರಿತು 25 ಕೃತಿಗಳನ್ನು ಸಮಾಜಕ್ಕೆ ಪರಿಚಯ ಮಾಡಿಕೊಟ್ಟು ಒಳ್ಳೆಯ ಸಾಹಿತಿಗಳು ಎನಿಸಿಕೊಂಡಿದ್ದಾರೆ ಎಂದರು. ಕಾಯಕದಲ್ಲಿ ಕೈಲಾಸ ಕಂಡವರು ಬಂಜಾರ ಸಮುದಾಯದವರು. ಅವರು ಯಾವತ್ತೂ ಕೂಲಿ ಕಾರ್ಮಿಕರಾಗಿ ದುಡಿದು ಪರಿಶ್ರಮ ಪಟ್ಟು ಇವತ್ತು ಪ್ರತಿಯೊಂದು ರಂಗದಲ್ಲಿ ಉನ್ನತ ಸ್ಥಾನವನ್ನು ಅಲಂಕರಿಸಿದ್ದಾರೆ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಲ್ಲಿಕಾರ್ಜುನ ನಾಯಕ ಕಾರ್ಯಕ್ರಮ ಉದ್ಘಾಟಿಸಿ, ಶರಣ ಸಾಹಿತ್ಯದ ಮೂಲಕ ಬಸವಾದಿ ಪ್ರಥಮರ ವಿಚಾರ ಧಾರೆಗಳನ್ನು ಇಂದಿನ ಯುವ ಜನಾಂಗಕ್ಕೆ ಪ್ರಚುರಪಡಿಸುವುದು ಅತಿ ಅವಶ್ಯವಾಗಿದೆ ಎಂದರು.ಇಂದುಮತಿ ಲಮಾಣಿ ರಚಿಸಿರುವ ಸಂತ ಸೇವಾಲಾಲ್ ಜೀವನ ಚರಿತ್ರೆ ಹಾಗೂ ಧಮನಿಗಳ ಧ್ವನಿ ಕೃತಿಗಳನ್ನು ಬಿಡುಗಡೆಗೊಳಿಸಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜಂಬುನಾಥ್ ಕಂಚಾಣಿ ಮಾತನಾಡಿ, ಸಾಹಿತ್ಯದ ವಿವಿಧ ರೂಪಗಳಲ್ಲಿ ಕೃತಿಗಳನ್ನು ರಚಿಸಿ ಆ ಕೃತಿಗಳ ಮೂಲಕ ತಮ್ಮ ಜೀವನದ ಭಾವನೆಗಳನ್ನು ವ್ಯಕ್ತಪಡಿಸಿರುತ್ತಾರೆ. ಅವರ ಎರಡು ಕೃತಿಗಳಲ್ಲಿ ಅವರ ಜೀವನದ ಮೌಲ್ಯಗಳನ್ನು ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ. ಇವತ್ತು ಅವರ ವಿಚಾರಗಳು ಸಮಾಜಕ್ಕೆ ಒಳ್ಳೆಯ ಮೌಲ್ಯಗಳಾಗಿವೆ ಎಂದರು.
ಇಂದುಮತಿ ಲಮಾಣಿ ಅವರು ತಮ್ಮ ಪತಿ ನೆನಪಿಗಾಗಿ ಕೂಡಮಾಡುವ ಶಂಕರ ಶ್ರೀ ಪ್ರಶಸ್ತಿಯನ್ನು ಪ್ರೊ.ಶಿರಗನಹಳ್ಳಿಶಾಂತ ನಾಯಕಗೆ ಪ್ರಶಸ್ತಿ ಫಲಕ ಹಾಗೂ ₹10 ಸಾವಿರ ನಗದು ನೀಡಿ ಗೌರವಿಸಿದರು. ಪ್ರಶಸ್ತಿ ಸ್ವೀಕರಿಸಿ ಪ್ರೊ.ಶಿರಗನಹಳ್ಳಿಶಾಂತ ನಾಯಕ ಮಾತನಾಡಿ, ಬಂಜಾರ ಸಮುದಾಯದವರು ಅತಿ ಹಿಂದುಳಿದಿದೆ. ಸಾಹಿತ್ಯ, ಬರವಣಿಗೆಗಳ ಮೂಲಕ ಅವರನ್ನು ಇವತ್ತು ಸಮುದಾಯದ ಉನ್ನತ ಸ್ಥಾನಕ್ಕೆ ತರಬೇಕಾಗಿರೋದು ಬಂಜಾರ ಸಮುದಾಯದ ಮುಖ್ಯ ಉದ್ದೇಶವಾಗಿದೆ ಎಂದರು.ಸಾನ್ನಿಧ್ಯ ವಹಿಸಿದ ಸಿದ್ದಲಿಂಗ ಸ್ವಾಮೀಜಿ, ನರಸಲಗಿ ಶ್ರೀಕಾಂತ ಗುರೂಜಿ, ಸಾಹಿತಿ ಎನ್.ಆರ್.ಕುಲಕರ್ಣಿ, ಶರಣ ಸಾಹಿತ್ಯ ಪರಿಷತ್ನ ತಾಲೂಕು ಅಧ್ಯಕ್ಷ ವೀರಣ್ಣ ಮರ್ತುರ, ಸಾಹಿತಿ ಇಂದುಮತಿ ಲಮಾಣಿ ಮಾತನಾಡಿದರು. ವೇದಿಕೆಯಲ್ಲಿ ಮುಖಂಡರಾದ ಜಗದೀಶ ಕೊಟ್ರಶೆಟ್ಟಿ, ನಾರಾಯಣ ರಾಠೋಡ, ಕಾವೇರಿ ರಾಠೋಡ ಇತರರು ಇದ್ದರು. ಜ್ಯೋತಿ ನಾಯ್ಕ ಪ್ರಾರ್ಥಿಸಿ,ಸ್ವಾಗತಿಸಿದರು. ಗುರುರಾಜ ಕನ್ನೂರ ನಿರೂಪಿಸಿ, ವಂದಿಸಿದರು. ಸಮಾಜದ ವಿವಿದ ರಂಗಗಳಲ್ಲಿ ಸೇವೆ ಸಲ್ಲಿಸಿದ ಸಾಧಕರನ್ನು ಸನ್ಮಾನಿಸಲಾಯಿತು.