ನಲ್ಲಗುಟ್ಲಪಲ್ಲಿ ಮಹರ್ಷಿ ವಾಲ್ಮೀಕಿ ಆಶ್ರಮ ಶಾಲೆಯಲ್ಲಿ ವಾರ್ಡನ್ ದರ್ಶನ ಅಪರೂಪ

KannadaprabhaNewsNetwork |  
Published : Jan 12, 2026, 02:15 AM IST
ನಲ್ಲಗುಟ್ಲಪಲ್ಲಿ ಮಹರ್ಷಿ ವಾಲ್ಮೀಕಿ ಆಶ್ರಮ ಶಾಲೆ | Kannada Prabha

ಸಾರಾಂಶ

ಅಡುಗೆಯವರು ಶಿಕ್ಷಕಿಯಾಗಿ ಸಹಿ ಮಾಡುತ್ತಿರುವ ಹಗರಣ ಹಾಗೂ ಮೂಲಭೂತ ಸೌಕರ್ಯಗಳ ಕೊರತೆಯ ಹಿಂದೆ ಶಾಲೆಯ ವಾರ್ಡನ್ ಅವರ ಕರ್ತವ್ಯ ಲೋಪವೇ ಎದ್ದು ಕಾಣುತ್ತಿದೆ ಎಂದು ಸ್ಥಳೀಯ ನಾಗರಿಕರು ಆರೋಪಿಸಿದ್ದಾರೆ.

ಡಿವಿ ರಮೇಶ್ ಕುಮಾರ್

ಕನ್ನಡಪ್ರಭ ವಾರ್ತೆ ಚೇಳೂರು ತಾಲೂಕಿನ ನಲ್ಲಗುಟ್ಲಪಲ್ಲಿ ಮಹರ್ಷಿ ವಾಲ್ಮೀಕಿ ಆಶ್ರಮ ಶಾಲೆಯಲ್ಲಿ ಅಕ್ರಮಗಳ ಸರಣಿ ಮುಂದುವರಿಯುತ್ತಲೇ ಇರುವುದು ಸಾರ್ವಜನಿಕರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಅಡುಗೆಯವರು ಶಿಕ್ಷಕಿಯಾಗಿ ಸಹಿ ಮಾಡುತ್ತಿರುವ ಹಗರಣ ಹಾಗೂ ಮೂಲಭೂತ ಸೌಕರ್ಯಗಳ ಕೊರತೆಯ ಹಿಂದೆ ಶಾಲೆಯ ವಾರ್ಡನ್ ಅವರ ಕರ್ತವ್ಯ ಲೋಪವೇ ಎದ್ದು ಕಾಣುತ್ತಿದೆ ಎಂದು ಸ್ಥಳೀಯ ನಾಗರಿಕರು ಆರೋಪಿಸಿದ್ದಾರೆ.ವಾರ್ಡನ್ ಶಾಲೆಗೆ ಬರುವುದು ಅಪರೂಪ:

ನಿಯಮದ ಪ್ರಕಾರ ವಾರ್ಡನ್ ಅವರು ಪ್ರತಿದಿನ ಶಾಲೆಯಲ್ಲಿ ಹಾಜರಿದ್ದು, ಮಕ್ಕಳ ಊಟ, ವಸತಿ ಮತ್ತು ಶಿಕ್ಷಣದ ಮೇಲ್ವಿಚಾರಣೆ ಮಾಡಬೇಕು. ಆದರೆ ನಲ್ಲಗುಟ್ಲಪಲ್ಲಿ ಶಾಲೆಯ ವಾರ್ಡನ್ ಅವರು ಶಾಲೆಗೆ ಬರುವುದು ಅತ್ಯಂತ ವಿರಳ ಎಂಬುದು ಸ್ಥಳೀಯರ ದೂರು. ವಾರಕ್ಕೊಮ್ಮೆ ಅಥವಾ ಹದಿನೈದು ದಿನಕ್ಕೊಮ್ಮೆ ಬಂದು ಹಾಜರಾತಿ ಪುಸ್ತಕದಲ್ಲಿ ಹಿಂದಿನ ದಿನಾಂಕಗಳಿಗೆ ಏಕಕಾಲಕ್ಕೆ ಸಹಿ ಮಾಡಿ ಹೋಗುವ ಸಂಸ್ಕೃತಿ ಇಲ್ಲಿ ಮನೆ ಮಾಡಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ವಾರ್ಡನ್ ಅವರ ಈ ಅನುಪಸ್ಥಿತಿಯ ಲಾಭವನ್ನೇ ಬಳಸಿಕೊಂಡು ಅಡುಗೆಯವರು ಶಿಕ್ಷಕಿಯ ಅವತಾರ ಎತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.ಮಕ್ಕಳ ಗೋಳು ಕೇಳುವವರೇ ಇಲ್ಲ:

ವಾರ್ಡನ್ ಶಾಲೆಯಲ್ಲಿ ಇಲ್ಲದ ಕಾರಣ, ಮಕ್ಕಳಿಗೆ ಏನಾದರೂ ಅನಾರೋಗ್ಯ ಉಂಟಾದರೆ ಅಥವಾ ರಾತ್ರಿ ವೇಳೆ ತುರ್ತು ತೊಂದರೆಯಾದರೆ ಜವಾಬ್ದಾರಿ ತೆಗೆದುಕೊಳ್ಳುವವರೇ ಇಲ್ಲದಂತಾಗಿದೆ. ಅಡುಗೆ ಕೆಲಸ ಮಾಡಬೇಕಾದವರೇ ಪಾಠ ಮಾಡುತ್ತಿರುವುದರಿಂದ, ಮಕ್ಕಳಿಗೆ ಸರಿಯಾದ ಸಮಯಕ್ಕೆ ಊಟ ಸಿಗುತ್ತಿಲ್ಲ ಎಂದು ಪೋಷಕರು ಅಳಲು ತೋಡಿಕೊಂಡಿದ್ದಾರೆ. ಅಧಿಕಾರಿಗಳ ಮೌನದ ವಿರುದ್ಧ ಆಕ್ರೋಶ:

ಇಷ್ಟೆಲ್ಲಾ ಅವ್ಯವಸ್ಥೆಗಳ ಬಗ್ಗೆ ಪತ್ರಿಕೆಗಳು ವರದಿ ಮಾಡುತ್ತಿದ್ದರೂ, ತಾಲೂಕು ಅಧಿಕಾರಿಗಳು ಮತ್ತು ಬಿಇಓ ಅವರು ಕ್ರಮ ಕೈಗೊಳ್ಳದೆ ಮೌನ ವಹಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಹಿರಿಯ ಅಧಿಕಾರಿಗಳ ಈ ಮೌನವೇ ವಾರ್ಡನ್ ಅವರ ಗೈರು ಹಾಜರಿಗೆ ಕುಮ್ಮಕ್ಕು ನೀಡಿದಂತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೋಟ್...ಸರ್ಕಾರಿ ಆಶ್ರಮ ಶಾಲೆ ಎಂದರೆ ಅದು ಅನಾಥ ಮಕ್ಕಳ ಮನೆ ಇದ್ದಂತೆ. ಆದರೆ ಇಲ್ಲಿ ವಾರ್ಡನ್ ಅವರೇ ಅತಿಥಿಯಂತೆ ಬಂದು ಹೋಗುತ್ತಿರುವುದು ದುರಂತ. ಅಡುಗೆಯವರು ಪಾಠ ಮಾಡುತ್ತಿರುವುದು ಗೊತ್ತಿದ್ದರೂ ವಾರ್ಡನ್ ಸುಮ್ಮನಿರುವುದು ನೋಡಿದರೆ ಇಲ್ಲಿ ವ್ಯವಸ್ಥಿತ ಅಕ್ರಮ ನಡೆಯುತ್ತಿದೆ ಎನ್ನುವುದು ಸ್ಪಷ್ಟವಾಗುತ್ತದೆ. ಕೂಡಲೇ ಜಿಲ್ಲಾಧಿಕಾರಿಗಳು ತನಿಖೆ ನಡೆಸಬೇಕು.

- ಸ್ಥಳೀಯ ನಿವಾಸಿಗಳು, ನಲ್ಲಗುಟ್ಲಪಲ್ಲಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ