ಗದಗ: ತಾಲೂಕಿನ ಲಕ್ಕುಂಡಿಯ ಗ್ರಾಮ ಚಾವಡಿಯ ಹತ್ತಿರ ಮನೆ ನಿರ್ಮಾಣ ಮಾಡಲು ತಳಪಾಯ ಹಾಕುವಾಗ ದೊರೆತ 470 ಗ್ರಾಂ ಬಂಗಾರವನ್ನು ಸರ್ಕಾರಕ್ಕೆ ನೀಡಿದ ಬಾಲಕ ಮತ್ತು ತಾಯಿಯ ಕಾರ್ಯವನ್ನು ಶ್ಲಾಘಿಸಿರುವ ಜಿಲ್ಲಾಡಳಿತ ಅವರನ್ನು ಸನ್ಮಾನಿಸಿತು.ಶನಿವಾರ ದೊರೆತ ಬಂಗಾರವನ್ನು ಪಂಚನಾಮೆ ಮಾಡಿದ ನಂತರ ಬಾಲಕ ಪ್ರಜ್ವಲ ಮತ್ತು ತಾಯಿ ಗಂಗವ್ವ ರಿತ್ತಿ ಅವರನ್ನು ಸನ್ಮಾನಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಡಾ. ದುರಗೇಶ ಹಾಗೂ ಎಸ್ಪಿ ರೋಹನ್ ಜಗದೀಶ ಅವರು, ಪ್ರಾಚೀನ ಕಾಲದ ಚಿನ್ನಾಭರಣಗಳು ತಮ್ಮ ಮನೆಯ ಅಡಿಪಾಯದಲ್ಲಿ ಸಿಕ್ಕಿದ್ದನ್ನು ಸರ್ಕಾರಕ್ಕೆ ತಲುಪಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಇಂತಹ ಬಾಲಕ ಪ್ರತಿ ಮನೆಯಲ್ಲಿ ಇರಬೇಕು. ಈ ಬಾಲಕ ಯುವಕರಿಗೆ ಮಾದರಿಯಾಗಿದ್ದು, ಆತ ನೀಡಿದ ಬಂಗಾರದ ವಸ್ತುಗಳನ್ನು ಸರ್ಕಾರದ ಖಜಾನೆಗೆ ಒಪ್ಪಿಸಲಾಗುವುದು ಎಂದರು.ಲಕ್ಕುಂಡಿ ಪ್ರಾದೇಶಿಕ ಅಭಿವೃದ್ಧಿ ರಾಜ್ಯ ಮಟ್ಟದ ಸದಸ್ಯ ಸಿದ್ದಲಿಂಗೇಶ್ವರ ಪಾಟೀಲ ಮಾತನಾಡಿ, ಗಂಗವ್ವ ರಿತ್ತಿ ಅವರ ಕುಟುಂಬವು ಬಡ ಕುಟುಂಬ ಆಗಿದ್ದು, ತಮ್ಮ ಮನೆ ನಿರ್ಮಾಣದ ಸಂದರ್ಭದಲ್ಲಿ ದೊರೆತ ಚಿನ್ನಾಭರಣಗಳನ್ನು ಪ್ರಾಮಾಣಿಕವಾಗಿ ಸರ್ಕಾರಕ್ಕೆ ತಲುಪಿಸಿದ್ದಾರೆ. ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲವರೊಂದಿಗೆ ಚರ್ಚಿಸಿ ಸೂಕ್ತ ಬಹುಮಾನವನ್ನು ಕೊಡಿಸಲಾಗುವುದು ಎಂದರು.
ಜಯಕುಮಾರ ಉಮಚಗಿ, ಚಂದ್ರು ಕಟಿಗ್ಗಾರ, ಬಸವರಾಜ ಬಿರಾದಾರ, ಈರಪ್ಪ ಕರಿಯಲ್ಲಪ್ಪನವರ, ಶಿವು ಇತರರು ಇದ್ದರು.