ಗಜೇಂದ್ರಗಡ: ಹೋಳಿ ಹಬ್ಬದ ಪ್ರಯುಕ್ತ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಪ್ರತಿಷ್ಠಾಪಿಸಲ್ಪಟ್ಟ ರತಿ-ಕಾಮಣ್ಣರಿಗೆ ವಿವಿಧ ಪೂಜೆ ಪುನಸ್ಕಾರಗಳೊಂದಿಗೆ ಶನಿವಾರ ಅದ್ಧೂರಿ ಮೆರವಣಿಗೆ ಹಾಗೂ ಬಣ್ಣದೋಕುಳಿ ಸಂಭ್ರಮದಿಂದ ನಡೆಯಿತು.ಸಂಸ್ಕೃತಿ, ಸಂಪ್ರದಾಯಗಳ ಪ್ರತೀಕವಾಗಿರುವ ಹೋಳಿ ಹಬ್ಬವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸುವ ಮೂಲಕ ಹೋಳಿ ಬಣ್ಣದ ಹಬ್ಬ ವಿಶೇಷ ಮೆರಗು ನೀಡಿತು. ಯುವಕರು ಹಾಗೂ ಮಹಿಳೆಯರು ರಂಗದೋಕುಳಿಯನ್ನು ಸಂಭ್ರಮದಿಂದ ಆಚರಿಸಿದರು. ಪರಸ್ಪರ ಬಣ್ಣ ಎರಚಿ, ಒಬ್ಬರ ಮುಖ ಇನ್ನೊಬ್ಬರಿಗೆ ಗುರುತಿಸಲಾಗದಷ್ಟು ಬಣ್ಣದಲ್ಲಿ ಮಿಂದೆದ್ದ ಯುವತಿಯರ ಮೋಜಿನಾಟ ಗಮನ ಸೆಳೆಯಿತು.ಕೆಲವರು ಸ್ವಇಚ್ಛೆಯಿಂದ ಬಣ್ಣದೋಕುಳಿಯಲ್ಲಿ ಭಾಗವಹಿಸಿದ್ದರೆ, ಬಣ್ಣದಿಂದ ದೂರ ಇರಬಯಸಿದವರಿಗೆ ಗೆಳತಿಯರು, ಬಂಧು-ಬಾಂಧವರು ಒತ್ತಾಯದಿಂದ ಬಣ್ಣ ಹಾಕಿದರು. ಯುವತಿಯರು, ಮಕ್ಕಳು ಪರಸ್ಪರ ಬಣ್ಣ ಎರಚಿ, ಹಲಗೆ ಬಾರಿಸುವ ಮೂಲಕ ಸಂತಸಪಟ್ಟರು. ಸೌಹಾರ್ದತೆಗೆ ಹೆಸರಾದ ಬಣ್ಣದ ರಂಗುರಂಗಿನ ಹೋಳಿಯಲ್ಲಿ ಹಿಂದು, ಮುಸ್ಲಿಂ, ಸರ್ವ ಸಮಾಜ ಬಾಂಧವರು ಪಾಲ್ಗೊಂಡಿದ್ದು ವಿಶೇಷವಾಗಿತ್ತು.ರತಿ ಕಾಮಣ್ಣನಿಗೆ ವಿಶೇಷ ಉಡಿಗೆ ತೊಡಿಗೆ ಮೂಲಕ ಅಲಂಕರಿಸಿ ಭಕ್ತರು ತಮ್ಮ ಬೇಡಿಕೆಗಳನ್ನು ಸಲ್ಲಿಸುವ ಮೂಲಕ ಜೋಡೆತ್ತಿನ ಬಂಡಿಗಳಲ್ಲಿ ಕುಳ್ಳರಿಸಿ, ಒಂದು ಜೋಡೆತ್ತಿನ ಬಂಡಿಯಲ್ಲಿ ರತಿ ಮನ್ಮಥರನ್ನು ಇನ್ನೊಂದು ಬಂಡಿಯಲ್ಲಿ ರತಿ ಕಾಮಣ್ಣರ ವೇಷಧರಿಸಿದ ಗಂಡು ಮಕ್ಕಳು, ಮತ್ತೊಂದು ಬಂಡಿಯಲ್ಲಿ ಗೂಟಕ್ಕೆ ಬಡಿದ ಕೃತಕ ಶವದ ಮುಂದೆ ಬೊಬ್ಬೆ ಹಾಕಿ ಅತ್ತು, ಬಾಯಿ ಬಡಿದುಕೊಂಡು ಮನರಂಜಿಸುವ ದೃಶ್ಯ ಸಾಮಾನ್ಯವಾಗಿತ್ತು. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ರತಿ ಮನ್ಮಥರನ್ನು ಮೆರವಣಿಗೆ ನಡೆಸಿ, ನಂತರ ಕಾಮ ದಹನ ನಡೆಸಿದರು.
ಇಲ್ಲಿನ ಕೊಳ್ಳಿಯವರ ಕತ್ರಿ, ಡೊಳ್ಳಿನವರ ಓಣಿ, ವಾಣಿಪೇಟೆ, ಕಾಗಿಯವರ ಓಣಿ ಮುಂತಾದ ಕಡೆಯಲ್ಲಿ ಪ್ರತಿಷ್ಠಾಪಿಸಿದ ರತಿ ಮನ್ಮಥರನ್ನು ಮೆರವಣಿಗೆ ನಡೆಸುವ ಮೂಲಕ ಹೋಳಿ ಹಬ್ಬಕ್ಕೆ ವಿದಾಯ ಹೇಳಿದರು.