ಭೂ ಹೋರಾಟ ಶಮನಕ್ಕೆ ಪರಿಹಾರದ ಮದ್ದು

KannadaprabhaNewsNetwork |  
Published : Jun 21, 2026, 01:15 AM IST
20ಕೆಆರ್ ಎಂಎನ್ 1.ಜೆಪಿಜಿಸಾಂದರ್ಭಿಕ ಚಿತ್ರ | Kannada Prabha

ಸಾರಾಂಶ

ರಾಮನಗರ: ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ (ಬಿಡದಿ ಟೌನ್ ಶಿಪ್) ಯೋಜನೆ ವಿರುದ್ಧ ವಿರೋಧ ಪಕ್ಷಗಳು ಹಾಗೂ ರೈತ ಪರ ಸಂಘಟನೆಗಳು ತೀವ್ರಗೊಳಿಸಿರುವ ಹೋರಾಟವನ್ನು ತಣಿಸಲು ರಾಜ್ಯ ಸರ್ಕಾರ ಪರಿಹಾರ ಮದ್ದನ್ನು ಪ್ರಯೋಗಿಸುತ್ತಿದೆ

ರಾಮನಗರ: ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ (ಬಿಡದಿ ಟೌನ್ ಶಿಪ್) ಯೋಜನೆ ವಿರುದ್ಧ ವಿರೋಧ ಪಕ್ಷಗಳು ಹಾಗೂ ರೈತ ಪರ ಸಂಘಟನೆಗಳು ತೀವ್ರಗೊಳಿಸಿರುವ ಹೋರಾಟವನ್ನು ತಣಿಸಲು ರಾಜ್ಯ ಸರ್ಕಾರ ಪರಿಹಾರ ಮದ್ದನ್ನು ಪ್ರಯೋಗಿಸುತ್ತಿದೆ.

ಈಗಾಗಲೇ ಅಂತಿಮ ಅಧಿಸೂಚನೆ ಹೊರಡಿಸಿರುವ ಕೆಂಪಯ್ಯನಪಾಳ್ಯ, ಮಂಡಲಹಳ್ಳಿ ಹಾಗೂ ವಡೇರಹಳ್ಳಿ ಗ್ರಾಮಗಳಲ್ಲಿ ಭೂಮಿ ನೀಡಲು ಒಪ್ಪಿಗೆ ಸೂಚಿಸಿರುವ ಭೂ ಮಾಲೀಕರ ಪೈಕಿ 7 ರೈತರಿಗೆ ಪರಿಹಾರ ಹಣ ಮಾತ್ರವಲ್ಲದೆ ಹೆಚ್ಚುವರಿಯಾಗಿ 5 ಲಕ್ಷ ಇಡುಗಂಟು ನೀಡಲಾಗಿದೆ. ಆ ಮೂಲಕ ಯೋಜನೆ ವಿರೋಧಿ ಮಾಡುತ್ತಿರುವವರಿಗೆ ರಾಜ್ಯಸರ್ಕಾರ ತಿರುಗೇಟು ನೀಡಿದೆ.

ಟೌನ್ ಶಿಪ್ ಯೋಜನೆಗೆ ಭೂಮಿ ಕೊಡಲು ವಿರೋಧಿಸುತ್ತಿರುವ ರೈತರ ಹೋರಾಟ 471ನೇ ದಿನಕ್ಕೆ ಕಾಲಿಟ್ಟಿದೆ. ಇದರ ಜೊತೆಗೆ ವಿಪಕ್ಷಗಳಾದ ಜೆಡಿಎಸ್ ಮತ್ತು ಬಿಜೆಪಿ ಮಾತ್ರವಲ್ಲದೆ ರೈತ, ಕನ್ನಡ ಮತ್ತು ಕಾರ್ಮಿಕ ಸಂಘಟನೆಗಳು ಸಾಲು ಸಾಲು ಪ್ರತಿಭಟನೆಗಳನ್ನು ನಡೆಸಿ ರೈತ ಚಳವಳಿಗೆ ಶಕ್ತಿ ತುಂಬುತ್ತಿವೆ.

ಅಲ್ಲದೆ, ಜೆಡಿಎಸ್ ಜೂನ್ 21ರಂದು ನಮ್ಮ ಭೂಮಿ ನಮ್ಮ ಹಕ್ಕು ಘೋಷಣೆಯೊಂದಿಗೆ ಯೋಜನೆ ವ್ಯಾಪ್ತಿಯ ಗ್ರಾಮಗಳಲ್ಲಿ ಬೃಹತ್ ಪಾದಯಾತ್ರೆ ನಡೆಸುತ್ತಿದೆ. ಮರು ದಿನ ಜೂನ್ 22ರಂದು ರೈತಸಂಘ ಸೇರಿದಂತೆ ವಿವಿಧ ಸಂಘಟನೆಗಳು ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸಲು ಸಿದ್ಧತೆ ಮಾಡಿಕೊಂಡಿವೆ.

ಕನಿಷ್ಠ ಬದಲು ಗರಿಷ್ಠ ದರವೇ ವಿತರಣೆ :

ಇದೆಲ್ಲವನ್ನು ಸೂಕ್ಷ್ಮವಾಗಿ ಗಮನಿಸಿದ ರಾಜ್ಯ ಸರ್ಕಾರ ಭೂ ಮಾಲೀಕರು ವಿಚಲಿತರಾಗುವುದನ್ನು ತಡೆಯುವ ನಿಟ್ಟಿನಲ್ಲಿ ಪರಿಹಾರ ವಿತರಣೆಗೆ ವೇಗ ನೀಡಿದೆ. ಭೂ ಸ್ವಾಧೀನ ಪಾರದರ್ಶಕತೆ, ಸೂಕ್ತ ಪರಿಹಾರ ಹಕ್ಕು , ಪುನರ್ವಸತಿ ಮತ್ತು ಪುನರ್ ವ್ಯವಸ್ಥೆ ಹಕ್ಕು ನಿರ್ಮಾಣ ಕಾಯ್ದೆ - 2013ರ ಪ್ರಕಾರವೇ ಒಂದಷ್ಟು ಪರಿಹಾರ ಕ್ರಮಗಳನ್ನು ಹೆಚ್ಚಿಸಿಕೊಂಡಿದೆ.

ಭೂ ಸ್ವಾಧೀನಕ್ಕಾಗಿ ಅಂತಿಮ ಅಧಿಸೂಚನೆ ಹೊರಡಿಸಿದ ಎರಡು ವಾರದೊಳಗೆ ಭೂಸ್ವಾಧೀನಕ್ಕೆ ಒಪ್ಪಿಗೆ ನೀಡಿದ ರೈತರಿಗೆ ಒಂದು ಎಕರೆಗೆ 2,07,30,000 ಪರಿಹಾರ, ಇಡಗಂಟು - 5 ಲಕ್ಷ ಹಾಗೂ ಮರ ಮಾಲೀಕರಿಗೆ ಕನಿಷ್ಠ ಬದಲು ಗರಿಷ್ಠ ದರವನ್ನೇ ಪರಿಹಾರವಾಗಿ ನೀಡಲಾಗಿದೆ. ಇಷ್ಟೇ ಅಲ್ಲದೆ ವಾರ್ಷಿಕ ಭತ್ಯೆ ಹಾಗೂ ನಿವೇಶನ ರಹಿತರಿಗೆ ಒಂದು ನಿವೇಶನ ಕೊಡಲು ಸಹ ರಾಜ್ಯಸರ್ಕಾರ ಉದ್ದೇಶಿಸಿದೆ.

ರಾಜ್ಯಸರ್ಕಾರದ ಪರಿಹಾರ ಕ್ರಮ ಹಾಗೂ ವಿಪಕ್ಷಗಳ ಸಾಲು ಸಾಲು ಆರೋಪಗಳ ಕಾರಣದಿಂದಾಗಿ ಭೂ ಮಾಲೀಕರು ಏನು ಮಾಡಬೇಕೆಂದು ತೋಚದೆ ಗೊಂದಲದಲ್ಲಿ ಸಿಲುಕಿದ್ದರು. ರೈತರಲ್ಲಿಯೇ ಎರಡು ಮೂರು ಗುಂಪುಗಳಾಗಿ ಒಂದು ಗುಂಪು ಪರಿಹಾರಕ್ಕೆ ಒತ್ತಾಯಿಸಿದರೆ, ಮತ್ತೊಂದು ಗುಂಪು ಭೂಮಿಗಾಗಿ ಹೋರಾಟದ ಹಾದಿ ಹಿಡಿದಿತ್ತು. ಇನ್ನೊಂದು ಗುಂಪಿನ ರೈತರು ತಟಸ್ಥರಾಗಿದ್ದರು.

ಭೂ ಸ್ವಾಧೀನ ಮತ್ತು ಪರಿಹಾರ ಪ್ರಕ್ರಿಯೆ ಕುರಿತು ಭೂ ಮಾಲೀಕರಲ್ಲಿದ್ದ ಅನುಮಾನಗಳನ್ನು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳ ಮೂಲಕ ಪರಿಹರಿಸಿರುವ ರಾಜ್ಯಸರ್ಕಾರ, ಯೋಜನೆ ವಿರೋಧಿಸುತ್ತಿರುವ ಭೂ ಮಾಲೀಕರಿಗೂ ಪರಿಹಾರ ಮದ್ದು ನೀಡಲು ಕಾರ್ಯತಂತ್ರ ರೂಪಿಸಿದೆ.

ಬಾಕ್ಸ್ ................

ರೈತರಿಗೆ ವಾರ್ಷಿಕ ಭತ್ಯೆ: ನಿವೇಶನ ರಹಿತರಿಗೆ 1 ನಿವೇಶನ

ಬಿಡದಿ ಟೌನ್ ಶಿಪ್ ಯೋಜನೆಗೆ ಭೂಮಿ ಕೊಡಲು ಒಪ್ಪಿಗೆ ನೀಡಿದ ರೈತರಿಗೆ ಪರಿಹಾರ / ಅಭಿವೃದ್ಧಿ ಪಡಿಸಿದ ನಿವೇಶನ ರೈತರಿಗೆ ನೀಡುವವರೆಗೆ ಜೀವನೋಪಾಯ ಬೆಂಬಲಕ್ಕಾಗಿ ವಾರ್ಷಿಕ ಭತ್ಯೆ ನೀಡಲು ರಾಜ್ಯಸರ್ಕಾರ ನಿರ್ಧರಿಸಿದೆ.

ಪ್ರತಿ ಒಂದು ಎಕರೆ ಖುಷ್ಕಿ ಪ್ರದೇಶಕ್ಕೆ 30 ಸಾವಿರ, ಎಕರೆ ತರಿ ಪ್ರದೇಶಕ್ಕೆ 40 ಸಾವಿರ, ಬಾಗಾಯ್ತು - 50 ಸಾವಿರ ವಾರ್ಷಿಕ ಭತ್ಯೆ ನೀಡಲಾಗುತ್ತದೆ. ಅಲ್ಲದೆ ಯೋಜನಾ ಪ್ರದೇಶದಲ್ಲಿನ ನಿವೇಶನ ರಹಿತರಿಗೆ ಒಂದು ನಿವೇಶನ ಮಂಜೂರು ಮಾಡಲಾಗುತ್ತದೆ.

ಬಾಕ್ಸ್ ...................

ರೈತರಿಗೆ ಏನೆಲ್ಲ ಸಿಗಲಿದೆ ? :

*ಪ್ರತಿ ಎಕರೆಗೆ ಕನಿಷ್ಠ 2 ಕೋಟಿ 7 ಲಕ್ಷ ರು., ಇಡುಗಂಟು 5 ಲಕ್ಷ ರು., ಮರಮಾಲ್ಕಿಗಳಿಗೆ ಗರಿಷ್ಠ ದರ.

*ರೈತರಿಗೆ ಶೇಕಡ 50-50ರ ಅನುಪಾತದಲ್ಲಿ ಅಭಿವೃದ್ಧಿ ಪಡಿಸಿದ ವಸತಿ ನಿವೇಶನ. ಶೇಕಡ 45-55ರ ಅನುಪಾತದಲ್ಲಿ ವಾಣಿಜ್ಯ ನಿವೇಶನ

*ಮರಗಳ ಜೊತೆಗೆ ಮನೆಗಳು, ಬೋರ್ ವೆಲ್ ಗಳು, ಜಮೀನಿನಲ್ಲಿ ಅಳವಡಿಸಿರುವ ಪೈಪ್ ಲೈನ್ ಗಳು, ಪಂಪ್ ಹೌಸ್ ಗಳು, ರೇಷ್ಮೆ ಸಾಕಾಣಿಕೆ ಮನೆ, ಪ್ಯಾಕ್ ಹೌಸ್ ಗಳು ಹಾಗೂ ಇತರೆ ಯಾವುದೇ ಅಭಿವೃದ್ಧಿ ಕಾರ್ಯಗಳಿದ್ದಲ್ಲಿ ಪರಿಹಾರ

*ಯಾವುದೇ ಗ್ರಾಮಗಳನ್ನು ಸ್ಥಳಾಂತರಿಸುವುದಿಲ್ಲ. ಹಳ್ಳಿಯ ಸುತ್ತ ರಿಂಗ್ ರಸ್ತೆ, ಕೆಪಿಎಸ್ ಶಾಲೆ, ಆಸ್ಪತ್ರೆ, ಗ್ರಾಮಗಳಿಗೆ ಯುಜಿಡಿ, ಭೂಗತ ವಿದ್ಯುತ್ ಕೇಬಲ್ , ಆಟದ ಮೈದಾನ, ಉದ್ಯಾನ, ಧಾರ್ಮಿಕ ಸ್ಥಳಗಳ ಅಭಿವೃದ್ಧಿ, ಸಮುದಾಯ ಭವನ ಸೇರಿ ಇತರೆ ಸೌಲಭ್ಯ

ಬಾಕ್ಸ್ ..................

ಮರಮಾಲೀಕರ ಪರಿಹಾರ(ಗರಿಷ್ಠ ದರಗಳಲ್ಲಿ)

ತೆಂಗು40,446 ರು.

ಮಾವು62,000 ರು.

ಅಡಿಕೆ7,440 ರು.

ಹಲಸುಎಕರೆಗೆ - 42,750 ರು.

ಹುಣಸೆಎಕರೆಗೆ - 53,310 ರು.

ಪಪ್ಪಾಯಎಕರೆಗೆ - 12 ಲಕ್ಷ

ಸೀಬೆಎಕರೆಗೆ - 3,940 ರು.

ಸಪೋಟಎಕರೆಗೆ - 43,166 ರು.

ಬಾಳೆ ಎಕರೆಗೆ10.86 ಲಕ್ಷ

ರೇಷ್ಮೆ ಎಕರೆಗೆ14 ಲಕ್ಷ

20ಕೆಆರ್ ಎಂಎನ್ 1.ಜೆಪಿಜಿ

ಸಾಂದರ್ಭಿಕ ಚಿತ್ರ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿದ್ಯುತ್‌ ಖಾಸಗೀಕರಣ ವಿರೋಧಿಸಿ ಮಂಡ್ಯದಲ್ಲಿ ಪ್ರತಿಭಟನೆ
ಸಾರ್ವಜನಿಕ ಗ್ರಂಥಾಲಯಕ್ಕೆ ವಿದ್ಯುತ್ ಸಂಪರ್ಕವೇ ಇಲ್ಲ..!