ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಸೂಚನೆ ಮೇರೆಗೆ ಎನ್ಎಂಡಿಸಿ ಅದಿರು ಕಂಪನಿ ಸಿಎಸ್ಆರ್ ನಿಧಿಯಡಿ ₹5 ಕೋಟಿ ವೆಚ್ಚದ ಒಳಾಂಗಣ ಕ್ರೀಡಾ ಸಂಕೀರ್ಣ ನಿರ್ಮಿಸಿದೆ. ಇದರಲ್ಲಿ ಅಥ್ಲೆಟಿಕ್ಸ್, ಟೇಬಲ್ ಟೆನ್ನಿಸ್, ಸ್ನೋಕರ್, ಬ್ಯಾಡ್ಮಿಂಟನ್, ಹಾಕಿ, ಟೆನಿಸ್, ವಾಲಿಬಾಲ್ ಅಂಗಣ, ವಿಶ್ರಾಂತಿ ಗೃಹ ಮತ್ತು ಶೌಚಾಲಯ ಸೇರಿದಂತೆ ಸುವ್ಯವಸ್ಥಿತ ಕಟ್ಟಡ ಇದಾಗಿದೆ.
ಅಣ್ಣಿಗೇರಿ: ಸ್ಥಳೀಯ ಸರ್ಕಾರಿ ಶಾಸಕರ ಮಾದರಿ ಶಾಲೆ ಹತ್ತಿರ ಕ್ರೀಡಾ ಸಂಕೀರ್ಣ ನಿರ್ಮಾಣಗೊಂಡು ವರ್ಷ ಕಳೆದರೂ ಇನ್ನೂ ಉದ್ಘಾಟನೆ ಭಾಗ್ಯ ಕಂಡಿಲ್ಲ.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಸೂಚನೆ ಮೇರೆಗೆ ಎನ್ಎಂಡಿಸಿ ಅದಿರು ಕಂಪನಿ ಸಿಎಸ್ಆರ್ ನಿಧಿಯಡಿ ₹5 ಕೋಟಿ ವೆಚ್ಚದ ಒಳಾಂಗಣ ಕ್ರೀಡಾ ಸಂಕೀರ್ಣ ನಿರ್ಮಿಸಿದೆ. ಇದರಲ್ಲಿ ಅಥ್ಲೆಟಿಕ್ಸ್, ಟೇಬಲ್ ಟೆನ್ನಿಸ್, ಸ್ನೋಕರ್, ಬ್ಯಾಡ್ಮಿಂಟನ್, ಹಾಕಿ, ಟೆನಿಸ್, ವಾಲಿಬಾಲ್ ಅಂಗಣ, ವಿಶ್ರಾಂತಿ ಗೃಹ ಮತ್ತು ಶೌಚಾಲಯ ಸೇರಿದಂತೆ ಸುವ್ಯವಸ್ಥಿತ ಕಟ್ಟಡ ಇದಾಗಿದೆ. ಲೋಕೋಪಯೋಗಿ ಇಲಾಖೆ ನಿರ್ಮಿಸಿದ ಕಟ್ಟಡ ಕಾಮಗಾರಿ ಮುಗಿದಿದೆ. ಆದರೆ, ಸಂಕಿರ್ಣಕ್ಕೆ ಅಳವಡಿಸಿದ ಗ್ಲಾಸ್ಗಳೆಲ್ಲ ಒಡೆದಿವೆ. ಹೀಗಿದ್ದರೂ ಅಧಿಕಾರಿಗಳು ಗೊತ್ತಿದ್ದೂ ಗೊತ್ತಿಲ್ಲದವರಂತೆ ವರ್ತಿಸುತ್ತಿದ್ದಾರೆ ಎಂದು ಸಾರ್ವಜನಿಕರು ದೂರುತ್ತಾರೆ.
ಕ್ರೀಡಾಂಗಣ ನಿರ್ಮಾಣವಾಗಿ ಅದೆಷ್ಟೋ ದಿನಗಳಾಗಿವೆ. ಆದರೆ, ಇನ್ನೂ ಆರಂಭವಾಗಿಲ್ಲ. ಇದು ಯಾವಾಗ ಆರಂಭವಾಗುತ್ತದೆ ಎನ್ನುವುದೇ ಯಕ್ಷಪ್ರಶ್ನೆಯಾಗಿದೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಇಲ್ಲಿನ ವಾಲಿಬಾಲ್ ಅಸೋಸಿಯೇಷನ್ ಬಳಗದ ಸದಸ್ಯರು.
ಕ್ರೀಡಾಸಕ್ತರಿಗೆ ಅನುಕೂಲವಾಗಲಿ ಎಂದು ನಿರ್ಮಾಣಗೊಂಡ ಕ್ರೀಡಾ ಸಂಕೀರ್ಣ ಇನ್ನೂ ಪ್ರಾರಂಭಗೊಂಡಿಲ್ಲ. ಆದಷ್ಟು ಬೇಗ ಆರಂಭವಾಗಲಿ ಹವ್ಯಾಸಿ ವಾಲಿಬಾಲ್ ಬಳಗದ ಅಧ್ಯಕ್ಷ ಚಂದ್ರ ಶೇಖರ್ ಸುರಕೋಡ ಒತ್ತಾಯಿಸಿದ್ದಾರೆ.
ಈಗಾಗಲೇ ಲೋಕೋಪಯೋಗಿ ಇಲಾಖೆಯವರು ಕಾಮಗಾರಿ ಅಪೂರ್ಣ ಮಾಡಿ ಕಟ್ಟಡವನ್ನು ನಮ್ಮ ಇಲಾಖೆಗೆ ಒಪ್ಪಿಸಿದ್ದಾರೆ. ಕ್ರೀಡಾಸಂಕೀರ್ಣದ ಇಲೆಕ್ಟ್ರಿಕ್ ಕೆಲಸ ಬಾಕಿ ಇದೆ. ಅದನ್ನು ಸರಿಪಡಿಸುವುದಾಗಿ ಹೇಳಿದ್ದಾರೆ ಎಂದು ಧಾರವಾಡದ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್ ಸ್ವಾಮಿ ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.