ಕನ್ನಡಪ್ರಭ ವಾರ್ತೆ ಕುಂದಾಪುರ
ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ ಆತ್ಮತೃಪ್ತಿಯೇ ಶಿಕ್ಷಕನ ಬದುಕಿನಲ್ಲಿ ಬಹುದೊಡ್ಡ ಸಾಧನೆಯಾಗಿದೆ. ಇದರಿಂದಾಗಿಯೇ ಶಿಕ್ಷಕರನ್ನು ವಿದ್ಯಾರ್ಥಿಗಳು ಮತ್ತು ಸಮಾಜಪೂಜ್ಯ ಭಾವನೆಯಿಂದ ಗೌರವಿಸುತ್ತದೆ. ಇದು ಅತ್ಯಂತ ಪುಣ್ಯದ ಕೆಲಸವಾಗಿದ್ದು, ನಮ್ಮ ಮಕ್ಕಳ ಬದುಕಿಗೂ ಬೆಳಕಾಗುತ್ತದೆ ಎಂದು ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿ ಶಬಾನ ಅಂಜುಮ್ ಹೇಳಿದ್ದಾರೆ.ಇತ್ತೀಚೆಗೆ ವಯೋನಿವೃತ್ತಿ ಹೊಂದಿದ ಕಾರ್ಕಡ ಹೊಸ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಪ್ರಭಾಕರ ಕಾಮತ್ ಅವರನ್ನು ಶಾಲಾ ಆಡಳಿತ ಮಂಡಳಿಯ ವತಿಯಿಂದ ಅಭಿನಂದಿಸುವ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಬ್ರಹ್ಮಾವರ ಹೋಬಳಿ ಶಿಕ್ಷಣ ಸಂಯೋಜಕ ಪ್ರಕಾಶ್ ಬಿ.ಬಿ. ಮಾತನಾಡಿ, ನಿವೃತ್ತ ಕಾಮತ್ ಅವರು ತಮ್ಮ ಅಧಿಕಾರಾವಧಿಯಲ್ಲಿ ಶಾಲೆಗೆ ಸಲ್ಲಿಸಿದ ಸೇವೆ ಹಾಗೂ ಇಲಾಖೆಯ ಕಾರ್ಯಕ್ರಮಗಳಿಗೆ ನೀಡಿದ ಸಹಕಾರವನ್ನು ಸ್ಮರಿಸಿದರು.ಅಧ್ಯಕ್ಷತೆ ವಹಿಸಿದ್ದ ಆಡಳಿತ ಮಂಡಳಿಯ ಅಧ್ಯಕ್ಷ ವಿಶ್ವೇಶ್ವರ ಹೊಳ್ಳ ಅವರು, ಶಾಲೆಯ ವಿದ್ಯಾರ್ಥಿಯಾಗಿ ಅಧ್ಯಾಪಕರಾಗಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ಇದೀಗ ಸಂಚಾಲಕರಾಗಿ ಸೇವೆ ಸಲ್ಲಿಸಲಿರುವ ನಿವೃತ್ತರನ್ನು ಗೌರವಿಸಿ, ಮುಂದಿನ ದಿನಗಳಲ್ಲಿಯೂ ಶಾಲೆಗಾಗಿ ತಮ್ಮ ಸೇವೆಯನ್ನು ಮೀಸಲಿಡಬೇಕೆಂದು ಕೋರಿದರು.
ಕ್ಷೇತ್ರ ಸಂಪನ್ಮೂಲ ಅಧಿಕಾರಿ ಸವಿತಾ, ವಿದ್ಯಾರಥ ಸಮಿತಿ ಅಧ್ಯಕ್ಷ ವಿಶ್ವನಾಥ ಹೊಳ್ಳ, ಗೆಳೆಯರ ಬಳಗದ ಅಧ್ಯಕ್ಷ ತಾರಾನಾಥ ಹೊಳ್ಳ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶಂಭು ಭಟ್, ಹಿಂದಿನ ಅಧ್ಯಾಪಕರಾದ ರತ್ನಾಕರ ಶೆಟ್ಟಿ ಮತ್ತು ಶ್ರೀಮತಿ, ಅಧ್ಯಾಪಕಿ ಗೀತಾ ಮತ್ತು ಐಶ್ವರ್ಯ ನೆನಪುಗಳನ್ನು ತೆರೆದಿಟ್ಟರು.ಶಾಲಾಭಿವೃದ್ಧಿ ಸಮಿತಿ ಮತ್ತು ಅಧ್ಯಾಪಕರ ವತಿಯಿಂದ ನಿವೃತ್ತರನ್ನು ಗೌರವಿಸಲಾಯಿತು.
ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಗಿರಿಜಾ ಶೇಖರ ಪೂಜಾರಿ ಸದಸ್ಯರಾದ ಸಂಜೀವ ದೇವಾಡಿಗ ಅಚ್ಚುತ ಪೂಜಾರಿ, ಕೆಪಿ ಶೇಖರ್ ಮೊದಲಾದವರು ಇದ್ದರು. ಅಧ್ಯಾಪಕ ಸುಧೀರ್ ಕಾಮತ್ ನಿರೂಪಿಸಿದರು. ಶಿಕ್ಷಕಿ ಗೀತಾ ವಂದಿಸಿದರು.