ಶಿವಾನಂದ ಪಿ.ಮಹಾಬಲಶೆಟ್ಟಿ
ರಬಕವಿ-ಬನಹಟ್ಟಿ, ರಾಮಪುರ ಮತ್ತು ಹೊಸೂರ ಪ್ರದೇಶಗಳು ಸೇರಿದಂತೆ ನೆರೆಯ ತೇರದಾಳ, ಮಹಾಲಿಂಗಪುರ, ಗೋಕಾಕ ಪ್ರದೇಶಗಳಲ್ಲೂ ಯಾವುದೇ ಗೋವುಗಳಿಗೆ ಸೇವೆಯ ಅಗತ್ಯವಿದ್ದರೇ ರಬಕವಿಯ ಸಂತೋಷ ಆಲಗೂರ ನೇತೃತ್ವದ 36 ಸದಸ್ಯರ ಗೋ ಸೇವಾ ಟೀಂ ಯಾವುದೇ ಪ್ರತಿಫಲವಿಲ್ಲದೇ ರಕ್ಷಣೆ, ಸೇವೆಗಳನ್ನು ಮಾಡುವ ಮೂಲಕ ಜನಪ್ರಿಯತೆ ಗಳಿಸಿಕೊಂಡಿದೆ.
ಅವಳಿ ನಗರದ ಯಾವುದೇ ಪ್ರದೇಶದಲ್ಲಿ ದೇವರಿಗೆ ಹರಕೆಯಾಗಿ ಬಿಟ್ಟ ಹಸುಗಳ ಪ್ರಸವ ವೇದನೆ, ಗಾಯಗಳಿಗೆ ಚಿಕಿತ್ಸೆ, ಚರಂಡಿಗಳಲ್ಲಿ ಬಿದ್ದ ಹಸುಗಳ ಮೇಲೆತ್ತುವುದು ಸೇರಿದಂತೆ ಎಲ್ಲ ವಿಧದ ಪ್ರಾಣಿಗಳ ಆರೈಕೆಗೆ ಟೊಂಕ ಕಟ್ಟಿ ನಿಂತಿದೆ ರಬಕವಿಯ ಟೀ ಗೋ ಸೇವೆ. ನಗರಸಭೆಯ ನೀರು ಪೂರೈಕೆ ವಿಭಾಗದಲ್ಲಿ ಗುತ್ತಿಗೆ ಕಾರ್ಮಿಕನಾಗಿರುವ ಸಂತೋಷ ಆಲಗೂರ ತಮ್ಮ ಸಮಾನ ಮನಸ್ಕರ ಯುವಕರ ತಂಡದೊಡನೆ ಹಗಲಿರುಳೆನ್ನದೇ ಗೋ ಸೇವೆ ಮಾಡುವುದರಲ್ಲೇ ತೃಪ್ತಿ ಕಾಣುವ ಯುವಕ. ಮೃತ ಆಕಳು, ಕರುಗಳ ಮತ್ತು ಬಸವರ ಮೃತ ದೇಹಗಳಿಗೆ ಅಂತಿಮ ಸಂಸ್ಕಾರ ನಡೆಸುತ್ತಾರೆ.
ರಬಕವಿ-ಬನಹಟ್ಟಿ, ರಾಮಪುರ ಮತ್ತು ಹೊಸೂರ ಪ್ರದೇಶಗಳಲ್ಲಿ ದೇವರಿಗೆ ಬಿಟ್ಟ(ಬಿಡಾಡಿ) ದನಗಳ ಹಾವಳಿ ಹೆಚ್ಚಿದೆಯೆಂಬ ಗೊಣಗಾಟವಿದ್ದರೂ ಅವುಗಳಿಗೆ ಇದುವರೆಗೆ ಕನಿಷ್ಠ ಸೌಲಭ್ಯಗಳುಳ್ಳ ಗೋಶಾಲೆ ಇಲ್ಲದಿರುವುದು ಸರ್ಕಾರ ಮತ್ತು ಆಡಳಿತ ವೀರರ ಬದ್ಧತೆಗೆ ಹಿಡಿದ ಕೈಗನ್ನಡಿಯಾಗಿದೆ. ಸ್ಥಳೀಯ ನಗರಸಭೆ ಬಿಜೆಪಿ ಸದಸ್ಯರಿಂದಲೇ ತುಂಬಿದ್ದರೂ, ಗೋ ಪ್ರೇಮದ ಬಗ್ಗೆ ಪುಂಕಾನುಪುಂಕವಾಗಿ ಮಾತನಾಡುವ ದೇಶಭಕ್ತರು ಗೋ ಶಾಲೆಗೆ ಇದುವರೆಗೆ ನಿಗದಿತ ಜಾಗ ನೀಡಿಲ್ಲ. ಅನುದಾನ ಕಲ್ಪಿಸಬೇಕಿದ್ದ ಬಿಜೆಪಿ ಶಾಸಕ ಸಿದ್ದು ಸವದಿ ಮುಂದಾಗದಿರುವುದರಿಂದ ಗೋ ಸಂತತಿ ಎಲ್ಲೆಂದರಲ್ಲಿ ತಿರುಗುತ್ತವೆ. ರಾಮಪುರ ಸೇತುವೆಯಿಂದ ಕಾಳಗದಲ್ಲಿ ಜಾರಿ ಬಿದ್ದು ಕಾಲು ಮುರಿದುಕೊಂಡ ಬಸವನ ಕಂಡು ಮಮ್ಮಲ ಮರುಗಿದ ಕಾಂಗ್ರೆಸ್ ಧುರೀಣ ಸಿದ್ದು ಕೊಣ್ಣೂರ ಗೋ ಶಾಲೆ ನಿರ್ಮಾಣಕ್ಕೆ ನೆರವಾಗುವ ಭರವಸೆ ನೀಡಿದ್ದಾರೆ.ರಬಕವಿಯ ವಿದ್ಯಾನಗರ ಪ್ರದೇಶದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಬಳಿಯ ಜಾಗದಲ್ಲಿ ಗೋ ಶಾಲೆ ನಿರ್ಮಾಣಗೊಂಡರೆ ಅವಳಿ ನಗರದ ಗೋವುಗಳಿಗೆ ಒಂದೇ ಸೂರಿನಡಿ ವ್ಯವಸ್ಥೆಗೊಳಿಸಲು ಸಾಧ್ಯವಾಗುತ್ತದೆ. ನಮ್ಮ ಜೊತೆಗೆ ಸರ್ಕಾರಿ ಪಶು ವೈದ್ಯಾಧಿಕಾರಿಗಳಾದ ಡಾ.ಬಸವರಾಜ ಗೌಡರ ಮತ್ತು ಡಾ.ಚೇತನ ಶಿರೋಳ ತಂಡದ ಸಕಾಲಿಕ ವೈದ್ಯಕೀಯ ನೆರವು, ಸಲಹೆ ನಮ್ಮ ತಂಡಕ್ಕೆ ಪ್ರೇರಣೆಯಾಗಿದೆ.
-ಸಿದ್ದು ಸವದಿ. ಶಾಸಕರು, ತೇರದಾಳ ಮತಕ್ಷೇತ್ರ.
ರಬಕವಿ ಬನಹಟ್ಟಿ, ರಾಮಪುರ ಮತ್ತು ಹೊಸೂರ್ ನಗರ ಪ್ರದೇಶಗಳು ಸೇರಿದಂತೆ ಗ್ರಾಮೀಣ ಭಾಗದ ದೇವರಿಗೆ ಬಿಟ್ಟ ಹಸು ಮತ್ತು ಗೂಳಿಗಳ ಆರೈಕೆಗೆ, ಆಶ್ರಯಕ್ಕೆ ಗೋಶಾಲೆಯ ಅಗತ್ಯತೆ ಹೆಚ್ಚಿದೆ. ದೇಶಪ್ರೇಮ ಮತ್ತು ಗೋಪ್ರೇಮದ ಪೇಟೆಂಟ್ ಪಡೆದಿರುವ ಪಕ್ಷದ ಶಾಸಕರೇ ನಾಲ್ಕು ಅವಧಿಕಾಲ ಜನಪ್ರತಿನಿಧಿಯಾಗಿದ್ದರು ಕೂಡ ಗೋಶಾಲೆ ನಿರ್ಮಾಣ ಮಾಡಿಲ್ಲ. ಅಗತ್ಯವಿದ್ದ ಜಾಗ ಬಿಟ್ಟು ಬೇರೆ ಗೋ ಶಾಲೆ ನಿರ್ಮಾಣಕ್ಕೆ ಮುಂದಾಗುವುದು ವ್ಯರ್ಥ. ಕಾಳಗದಲ್ಲಿ ಪ್ರಪಾತಕ್ಕೆ ಬಿದ್ದು ಕಾಲು ಮುರಿದುಕೊಂಡ ಬಸವನ ಭೇಟಿ ಮಾಡಿ ಗೋ ಟೀಮ್ ಗೋ ಸೇವಾ ತಂಡದ ಸದಸ್ಯರಿಗೆ ಎಲ್ಲ ವಿಧದ ಸಹಾಯ ನೀಡುವ ಮತ್ತು ಗೋಶಾಲೆ ನಿರ್ಮಾಣಕ್ಕೆ ನಾನೇ ಖುದ್ದಾಗಿ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಿ ಜಾಗ ಮತ್ತು ಅಗತ್ಯ ಅನುದಾನ ಕಲ್ಪಿಸುತ್ತೇನೆ.