ಕೊಪ್ಪಳ: ನಮ್ಮ ಪೂರ್ವಜರು ತಮ್ಮ ಜ್ಞಾನ, ಆಲೋಚನೆಗಳನ್ನು, ಮಹತ್ವದ ದಾಖಲೆಗಳಾಗಬಹುದಾದ ಸಂಗತಿಗಳನ್ನು ತಾಳೆಗರಿಯಲ್ಲಿ ಬರೆದಿಟ್ಟುಕೊಳ್ಳುತ್ತಿದ್ದರು. ಕಾಲಾಂತರದಲ್ಲಿ ಅವರು ಬಿಟ್ಟುಹೋಗಿರುವ ಜ್ಞಾನದ ಭಂಡಾರವನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವಲ್ಲಿ ತಾಳೆಗರಿಗಳ ಪಾತ್ರ ಅನನ್ಯವಾದುದು ಎಂದು ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಹೇಳಿದರು.
ಡಿಜಿಟಲೀಕರಣದ ಅಗತ್ಯತೆ: ಕಾಲದ ಹೊಡೆತಕ್ಕೆ ಸಿಲುಕಿ ನಶಿಸಿ ಹೋಗುತ್ತಿರುವ ಇಂತಹ ಅಪೂರ್ವ ಹಸ್ತಪ್ರತಿಗಳನ್ನು ವೈಜ್ಞಾನಿಕವಾಗಿ ಸಂರಕ್ಷಿಸುವುದು ಮತ್ತು ಅವುಗಳನ್ನು ಡಿಜಿಟಲೀಕರಣಗೊಳಿಸಿ ಸಾರ್ವಜನಿಕರ ಹಾಗೂ ಸಂಶೋಧಕರ ಬಳಕೆಗೆ ಮುಕ್ತಗೊಳಿಸುವುದು ಇಂದಿನ ತುರ್ತು ಅಗತ್ಯವಾಗಿದೆ. ಸಾರ್ವಜನಿಕರ ಬಳಿ ಅಥವಾ ಖಾಸಗಿ ಸಂಗ್ರಹಗಳಲ್ಲಿ ಇಂತಹ ಅಮೂಲ್ಯವಾದ ತಾಳೆಗರಿಗಳು ಅಥವಾ ಇತರ ಪ್ರಾಚೀನ ದಾಖಲೆಗಳಿದ್ದರೆ, ಅವುಗಳನ್ನು ಜಿಲ್ಲಾಡಳಿತ, ಸರ್ಕಾರದ ಪುರಾತತ್ವ ಇಲಾಖೆ ಅಥವಾ ಸಂಬಂಧಪಟ್ಟ ಸಂಸ್ಥೆಗಳಿಗೆ ಹಸ್ತಾಂತರಿಸುವ ಮೂಲಕ ಇತಿಹಾಸ ರಕ್ಷಣೆಗೆ ಕೊಪ್ಪಳ ಜಿಲ್ಲೆಯ ಸಾರ್ವಜನಿಕರು ಕೈಜೋಡಿಸಬೇಕು ಎಂದು ಕರೆ ನೀಡಿದರು.
ಕೊಪ್ಪಳ ಜಿಲ್ಲೆಯಲ್ಲಿರುವ ಮಠ-ಮಾನ್ಯಗಳಲ್ಲಿ, ರಾಜವಂಶಸ್ಥರಲ್ಲಿ, ಸಾರ್ವಜನಿಕರಲ್ಲಿ, ವೈದ್ಯರಲ್ಲಿ, ಸಾಹಿತಿಗಳಲ್ಲಿ ವಿವಿಧ ಭಾಗಗಳ ಹಸ್ತಪ್ರತಿಗಳಿವೆ. ಈಗಾಗಲೇ ಜಿಲ್ಲಾಡಳಿತದಿಂದ ಎರಡು ಬಾರಿ ಸಭೆ ನಡೆಸಿ, ವಾರ್ತಾ ಇಲಾಖೆಯ ಮೂಲಕ ಅಗತ್ಯ ಪ್ರಚಾರ ಕೈಗೊಳ್ಳಲಾಗಿದೆ. ಆನೆಗೊಂದಿಯ ರಾಜವಂಶಸ್ಥರು, ತಮ್ಮ ಹತ್ತಿರ ಇರುವ ಪುರಾತನ ಹಸ್ತಪ್ರತಿಗಳ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಮಾಜಿ ಸಂಸದ ಕರಡಿ ಸಂಗಣ್ಣ ಮಾತನಾಡಿ, ತಾಳೆಗರಿಯ ಅಮೂಲ್ಯ ಹಸ್ತಪ್ರತಿಗಳನ್ನು ಜಿಲ್ಲಾಡಳಿತದ ಮೂಲಕ ಸಂಗ್ರಹಿಸಿ, ಸರ್ಕಾರಿ ದಾಖಲೆಗಳಾಗಿ ಸಂರಕ್ಷಿಸುತ್ತಿರುವುದು ಅತ್ಯಂತ ಶ್ಲಾಘನೀಯ ಕೆಲಸ. ಈ ತಾಳೆಗರಿಗಳನ್ನು ಡಿಜಿಟಲೀಕರಣ ಮಾಡಬೇಕು. ಇದರಿಂದ ಸಂಶೋಧಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು.
ಕೊಪ್ಪಳದ ಅಗಸ್ತ್ಯ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಸಂಸ್ಥೆಯ ಅಧ್ಯಕ್ಷ ಡಾ. ಸಂಗಮೇಶ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿ, ಭಾರತೀಯ ಜ್ಞಾನ ಪರಂಪರೆಯಲ್ಲಿ ಹಸ್ತಪ್ರತಿಗಳು ಪ್ರಮುಖ ಸ್ಥಾನ ಹೊಂದಿವೆ. ಈ ಹಸ್ತಪ್ರತಿಗಳು ವೈದ್ಯಕೀಯ, ತತ್ವಶಾಸ್ತ್ರ, ಸಂಸ್ಕೃತಿ, ಧರ್ಮ ಹಾಗೂ ವಿಜ್ಞಾನ ಕ್ಷೇತ್ರಗಳ ಅಮೂಲ್ಯ ಜ್ಞಾನ ಸಂಪತ್ತನ್ನು ಒಳಗೊಂಡಿವೆ. ಇಂತಹ ಅಪರೂಪದ ಹಾಗೂ ಐತಿಹಾಸಿಕ ಮಹತ್ವವುಳ್ಳ ಆಯುರ್ವೇದ ಹಸ್ತಪ್ರತಿಗಳನ್ನು ಸಂರಕ್ಷಿಸುವ ಉದ್ದೇಶದಿಂದ ಅಗಸ್ತ್ಯ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯು ಸಂಗ್ರಹಿಸಿ ಸಂರಕ್ಷಿಸಿದ್ದ ಹಸ್ತಪ್ರತಿಗಳನ್ನು ಪುರಾತತ್ವ ಇಲಾಖೆ, ಪ್ರಾಧಿಕಾರಕ್ಕೆ ಹಸ್ತಾಂತರಿಸುವ ಮಹತ್ವದ ಕಾರ್ಯ ಕೈಗೊಂಡಿದೆ ಎಂದರು.
ಉಪನ್ಯಾಸಕ ಶಿವನಗೌಡ ಪೊಲೀಸ್ಪಾಟೀಲ್ ಕಾರ್ಯಕ್ರಮ ನಿರೂಪಿಸಿದರು. ಡಾ. ಪ್ರಜ್ವಲ್ ಮತ್ತು ಶ್ರೀದೇವಿ ಪ್ರಾರ್ಥನೆಗೈದರು.