‘ಅನ್ನ’ಕ್ಕಾಗಿ ಹಂಬಲಿಸಿದ ಜನಗಳ ದೃಶ್ಯಕಾವ್ಯ: ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ

KannadaprabhaNewsNetwork |  
Published : Sep 09, 2024, 01:37 AM IST
29 | Kannada Prabha

ಸಾರಾಂಶ

ಮೈಸೂರಿನ ಪ್ರತಿಭಾನ್ವಿತ ಯುವ ಕಲಾವಿದರು ಸೇರಿ ಬಹಳ ಶ್ರಮ ಮತ್ತು ಶ್ರದ್ಧೆಯಿಂದ ನಿರ್ಮಿಸಿರುವ ಈ ಚಿತ್ರವು ಆಶಯ ಮತ್ತು ಪ್ರಯೋಗಾತ್ಮಕ ನೆಲೆಯಿಂದ ಮಹತ್ವದ ಕೃತಿ. ಶೋಷಿತ ಜನಗಳು ಹಸಿವಿನ ವಿರುದ್ಧ ಹೋರಾಟ ಮಾಡಿದರು. ಜೋಳ, ರಾಗಿ, ಸೊಪ್ಪು ತಿಂದು ಬದುಕುಳಿದರು. ಹಬ್ಬಗಳಲ್ಲಿ ಮಾತ್ರ ಸಿಗುತ್ತಿದ್ದ ಅನ್ನ ಗಗನಕುಸುಮವಾಗಿತ್ತು.

ಕನ್ನಡಪ್ರಭ ವಾರ್ತೆ ಮೈಸೂರು

ಅನ್ನ ಚಲನಚಿತ್ರವು ಅನ್ನಕ್ಕಾಗಿ ಹಂಬಲಿಸಿದ ಜನಗಳ ದೃಶ್ಯಕಾವ್ಯ ಎಂದು ಗಾಂಧಿನಗರ ಉರಿಲಿಂಗಿಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಬಣ್ಣಿಸಿದರು.

ಅನ್ನ ಚಲನಚಿತ್ರ ವೀಕ್ಷಿಸಿದ ಬಳಿಕ ಮಾತನಾಡಿದ ಅವರು, ಈ ಚಿತ್ರವು ಭಾರತೀಯ ಚಿತ್ರರಂಗದ ಪರಂಪರೆಯಲ್ಲಿ ಐತಿಹಾಸಿಕ ದಾಖಲೆಯಾಗಿ ಉಳಿಯುತ್ತದೆ. 40 ವರ್ಷಗಳ ಹಿಂದೆ ಅನ್ನಕ್ಕಾಗಿ ಏನೆಲ್ಲಾ ಜರುಗಿತು ಮತ್ತು ಶೋಷಿತ ಸಮದಾಯ ಪಟ್ಟ ಬಗೆ ಬಗೆಯ ಸನ್ನಿವೇಶಗಳು ಚಿತ್ರದಲ್ಲಿ ಆರ್ದ್ರತೆಯಿಂದ ಚಿತ್ರೀಕರಿಸಲಾಗಿದೆ ಎಂದರು.

ಮೈಸೂರಿನ ಪ್ರತಿಭಾನ್ವಿತ ಯುವ ಕಲಾವಿದರು ಸೇರಿ ಬಹಳ ಶ್ರಮ ಮತ್ತು ಶ್ರದ್ಧೆಯಿಂದ ನಿರ್ಮಿಸಿರುವ ಈ ಚಿತ್ರವು ಆಶಯ ಮತ್ತು ಪ್ರಯೋಗಾತ್ಮಕ ನೆಲೆಯಿಂದ ಮಹತ್ವದ ಕೃತಿ. ಶೋಷಿತ ಜನಗಳು ಹಸಿವಿನ ವಿರುದ್ಧ ಹೋರಾಟ ಮಾಡಿದರು. ಜೋಳ, ರಾಗಿ, ಸೊಪ್ಪು ತಿಂದು ಬದುಕುಳಿದರು. ಹಬ್ಬಗಳಲ್ಲಿ ಮಾತ್ರ ಸಿಗುತ್ತಿದ್ದ ಅನ್ನ ಗಗನಕುಸುಮವಾಗಿತ್ತು ಎಂದು ಅವರು ಹೇಳಿದರು.

ಸರ್ವಕ್ಕೂ ಅನ್ನವೇ ಕಾರಣ ಅನ್ನುವ ಮಹಾದಾಸೆಯನ್ನು ಚಿತ್ರತಂಡ ಸುಂದರವಾಗಿ ರೋಚಕವಾಗಿ ಎಳೆ ಎಳೆಯಾಗಿ ನಿರೂಪಿಸಿದೆ. ಅನ್ನದಿಂದ ವಂಚಿತರಾದ ಶೋಷಿತರು ವಿದ್ಯಾಭ್ಯಾಸದ ವೇಳೆ ಹಸಿವು ನೀಗಿಸಿಕೊಳ್ಳಲು ಪಟ್ಟ ಪರಿಶ್ರಮ ಚಿತ್ರದಲ್ಲಿ ಹೊರಹೊಮ್ಮಿದೆ. ಗ್ರಾಮ್ಯ ಭಾಷೆ, ಕಲಾವಿದರ ಮನೋಜ್ಞ ಅಭಿನಯದಿಂದ ಈ ಚಿತ್ರವೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಈ ಚಿತ್ರವೂ ನೋಡುಗರ ಮನಕಲಕುತ್ತದೆ. ಅದ್ಭುತವಾದ ಯಶಸ್ಸು ಪಡೆಯಲೆ ಎಂದು ಅವರು ಶುಭ ಹಾರೈಸಿದರು.

ಶಾಸಕ ದರ್ಶನ್ ಧ್ರುವನಾರಾಯಣ ಮಾತನಾಡಿ, ಇವತ್ತು ಎಲ್ಲರಿಗೂ ಆಹಾರ ಭದ್ರತೆ ಇದೆ. ಯಾರೂ ಹಸಿವಿನಿಂದ ಇಲ್ಲ. ಆದರೆ, 1970- 80ರ ದಶಕದಲ್ಲಿ ಗ್ರಾಮಾಂತರ ಪ್ರದೇಶದಲ್ಲಿ ಅನ್ನಕ್ಕಾಗಿ ಜನರು ಪಟ್ಟ ಕಷ್ಟವನ್ನು ಅನ್ನ ಚಿತ್ರದಲ್ಲಿ ಪರಿಣಾಮಕಾರಿಯಾಗಿ ತೆರೆಯ ಮೇಲೆ ತಂದಿದ್ದಾರೆ. ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳ ಫಲಾನುಭವಿಗಳೆಲ್ಲ ಈ ಸಿನಿಮಾವನ್ನು ತಪ್ಪದೇ ನೋಡಬೇಕು ಎಂದರು.

ಚಿತ್ರದ ನಿರ್ಮಾಪಕ ಬಸವರಾಜು, ಕಥೆಗಾರ ಹನೂರು ಚನ್ನಪ್ಪ, ಸಂಭಾಷಣೆಕಾರ ಬಿ.ಎನ್. ಸಿದ್ದುಪ್ರಸನ್ನ, ನಟಿ ಪದ್ಮಶ್ರೀ, ಕಲಾ ನಿರ್ದೇಶಕ ಎನ್. ಮಹೇಶ್ವರ, ಸಹಾಯಕ ನಿರ್ದೇಶಕ ಮೊಹಮ್ಮದ್ ಸಿದ್ದಿಖ್ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಸಿಲಿನ ಹೊಡೆತಕ್ಕೆ ಸಾವಿರಾರು ಮೀನುಗಳ ಮಾರಣಹೋಮ
ನಿರಾಶ್ರಿತರ ಕಣ್ಣೀರು ಒರೆಸುವ ಕೆಲಸ