ಶಿರಸಿ: ಮುಂಬರುವ ಲೋಕಸಭಾ ಚುನಾವಣೆಗೆ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿ, ಅರಣ್ಯವಾಸಿಗಳ ಸಮಸ್ಯೆ ಬಗೆಹರಿಸುವಲ್ಲಿ ಲೋಕಸಭೆಯಲ್ಲಿ ಧ್ವನಿಯಾಗಲು ಪ್ರಯತ್ನಿಸುವಂತೆ ಅರಣ್ಯ ಭೂಮಿ ಹಕ್ಕು ಹೋರಾಟಗಾರ ರವೀಂದ್ರ ನಾಯ್ಕ ಅವರಿಗೆ ಹಿರಿಯ ಸಾಮಾಜಿಕ ಚಿಂತಕ ಕಾಗೋಡ ತಿಮ್ಮಪ್ಪ ಸಲಹೆ ನೀಡಿದರು.
ಕೇಂದ್ರ ಸರ್ಕಾರ ಅರಣ್ಯ ಹಕ್ಕು ಕಾಯಿದೆ ಜಾರಿಗೆ ತಂದು 18 ವರ್ಷಗಳಾದರೂ ಅರಣ್ಯ ಭೂಮಿ ಹಕ್ಕು ಕಾಯಿದೆ ಅನುಷ್ಠಾನದಲ್ಲಿ ಇಂದಿಗೂ ಸ್ಪಷ್ಟತೆ ದೊರಕದೇ ಇರುವುದು ವಿಷಾದಕರ. ಕಾನೂನು ಅನುಷ್ಠಾನದಲ್ಲಿ ಇಂದಿನ ಸಂಸದರಲ್ಲಿ ಬದ್ಧತೆ ಇಲ್ಲದಿರುವುದು ಮತ್ತು ಕಾನೂನಿನ ಜ್ಞಾನದ ಕೊರತೆಯೇ ಇದಕ್ಕೆ ಕಾರಣ ಎಂದು ವಿಶ್ಲೇಷಿಸಿದರು.
ಅರಣ್ಯ ಹಕ್ಕು ಕಾಯಿದೆ ಅರಣ್ಯವಾಸಿಗಳ ಪರವಾಗಿದ್ದು, ಅರಣ್ಯವಾಸಿಗಳು ಅರಣ್ಯ ಭೂಮಿ ಹಕ್ಕಿನಿಂದ ವಂಚಿತರಾಗಿರುವುದು ದುರಾದೃಷ್ಟಕರ. ಅರಣ್ಯವಾಸಿಗಳ ಪರ ದೀರ್ಘ 33 ವರ್ಷ ಹೋರಾಟಗಾರರ ವೇದಿಕೆಯ ಕಾರ್ಯ ಶ್ಲಾಘನೀಯ ಎಂದು ಪ್ರಶಂಸಿಸಿದರು.ಅರಣ್ಯ ಭೂಮಿ ಹಕ್ಕಿನ ಸಮಸ್ಯೆ ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇದ್ದರೂ ಈ ಭಾಗದಿಂದ ಆರಿಸಿಹೋದ ಲೋಕಸಭಾ ಸದಸ್ಯರು ಮೌನವಾಗಿರುವುದು ಖೇದಕರ. ಈ ನ್ಯೂನತೆ ಸಮದೂಗಿಸುವಲ್ಲಿ ರಾಜಕೀಯ ಪ್ರಯತ್ನ ಮುಂದುವರಿಯಲಿ ಎಂದು ಕಾಗೋಡ ತಿಮ್ಮಪ್ಪ ಸೂಚನೆ ನೀಡಿದರೆಂದು ರವಿಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.