ಕನ್ನಡಪ್ರಭ ವಾರ್ತೆ ಮೈಸೂರು
ಇತ್ತೀಚಿನ ದಿನಗಳಲ್ಲಿ ಮಧುಮೇಹದ ಬಗ್ಗೆ ಅತಿ ಹೆಚ್ಚು ನಾವು ಕೇಳುತ್ತಿದ್ದೇವೆ, ಅದಕ್ಕಾಗಿ ಜನರಲ್ಲಿ ಜಾಗೃತಿ ಮೂಡಿಸಲು ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಿಂದ ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ಸನ್ನಿಧಿಗೆ ಪಾದಯಾತ್ರೆ ಹೊರಟಿರುವುದಾಗಿ ಕಿರಿಯ ಶ್ರೀಗಳಾದ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ತಿಳಿಸಿದರು.ನಮ್ಮ ನಡಿಗೆ ಆರೋಗ್ಯವಂತ ವಿಶ್ವದೆಡೆಗೆ ಎಂಬ ಘೋಷವಾಖ್ಯದಡಿ ನಗರದ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಿಂದ ನಂಜನಗೂಡು ಶ್ರೀಕಂಠೇಶ್ವರಸ್ವಾಮಿ ಸನ್ನಿಧಿಗೆ ಶ್ರೀಗಳು ಸೋಮವಾರ ಬೆಳಿಗ್ಗೆ ಪಾದಯಾತ್ರೆ ಕೈಗೊಂಡಿದ್ದು, ಈ ವೇಳೆ ಭಕ್ತರನ್ನುದ್ದೇಶಿಸಿ ಮಾತನಾಡಿದರು.
ಮಧುಮೇಹದ ಬಗ್ಗೆ ಜನರಲ್ಲಿ ಜಾಗೃತಿ ಅತ್ಯವಶ್ಯಕವಾಗಿದೆ. ಹಾಗಾಗಿ ಪ್ರತಿದಿನ ಎಲ್ಲರೂ ಯಾವುದಾದರೂ ಒಂದು ವ್ಯಾಯಾಮವನ್ನು ಮಾಡಬೇಕು. ಉತ್ತಮ ಸಮಾಜಕ್ಕಾಗಿ ನಾವೆಲ್ಲ ಕೃಷಿ ಮಾಡಬೇಕು. ಜನರಲ್ಲಿ ತಿಳವಳಿಕೆ ಮೂಡಿಸಲು ಈ ಪಾದಯಾತ್ರೆ ಕೈಗೊಂಡಿದ್ದೇವೆ. ನಮ್ಮ ಜೊತೆ ಭಕ್ತರು ಸೇರಿ ನಡಿಗೆಯಲ್ಲಿ ಪಾಲ್ಗೊಂಡಿದ್ದಾರೆ ಎಂದರು.ಧರ್ಮ ಮಾರ್ಗದಲ್ಲಿ ನಡೆಯಲು ಬೇಕಾದ ಆರೋಗ್ಯ ದಯಪಾಲಿಸು, ನಮಗೆ ಬೇಕಾದ ಉತ್ತಮ ಬುದ್ಧಿ, ಒಳ್ಳೆಯ ಆರೋಗ್ಯ ಅನುಗ್ರಹಿಸು ಎಂದು ಸ್ವಾಮಿ ಶ್ರೀಕಂಠೇಶ್ವರನಲ್ಲಿ ಪ್ರಾರ್ಥಿಸಿ ಈ ಪಾದಯಾತ್ರೆ ಕೈಗೊಂಡಿದ್ದೇವೆ ಎಂದು ಅವರು ಹೇಳಿದರು.
ಪ್ರತಿ ದಿನ ಜನರು ತಾವಿರುವ ಜಾಗದಲ್ಲೇ ಯಾವುದಾದರೂ ಆಶ್ರಮ ಅಥವಾ ದೇವಸ್ಥಾನಗಳಿಗೆ ತೆರಳಿ ದೇವರ ದರ್ಶನ ಮಾಡಿ ಪ್ರದಕ್ಷಿಣೆ ಹಾಕಬೇಕು. ಇದರಿಂದ ಭಕ್ತಿ ಹೆಚ್ಚಾಗುತ್ತದೆ ಮತ್ತು ಉತ್ತಮ ಆರೋಗ್ಯವನ್ನು ಪಡೆಯಬಹುದು. ದೇವರ ದರ್ಶನ ಮಾಡುವುದು ಪ್ರದಕ್ಷಿಣೆ ಹಾಕುವುದು ನಮ್ಮ ಸನಾತನ ಧರ್ಮದ ಸಂಪ್ರದಾಯವೂ ಆಗಿದೆ. ಹೀಗಾಗಿ, ಮಕ್ಕಳಿಗೂ ಪ್ರದಕ್ಷಿಣೆ ಮಾಡುವುದನ್ನು ಕಲಿಸಬೇಕು ಎಂದು ಅವರು ಸಲಹೆ ನೀಡಿದರು.ಪ್ರತಿಯೊಬ್ಬ ಮನುಷ್ಯನ ಉತ್ತಮ ಆರೋಗ್ಯಕ್ಕೆ ಕಾಲ್ನಡಿಗೆ ಅತ್ಯುತ್ತಮ ವ್ಯಾಯಾಮ ಎಂಬ ಕುರಿತು ವಿಶ್ವ ಜನ ಜಾಗೃತಿ ಮೂಡಿಸುವ ಸಲಯವಾಗಿ ಈ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶ್ರೀಗಳೊಂದಿಗೆ ನೂರಾರು ಭಕ್ತರು ಕೂಡ ಪಾದಯಾತ್ರೆಯಲ್ಲಿ ಸಾಗಿದರು.
ಶ್ರೀಕಂಠೇಶ್ವರ ಸ್ವಾಮಿ ಸನ್ನಿಧಿಯನ್ನು ತಲುಪಿದ ಕೂಡಲೇ ಸ್ವಾಮಿಗೆ ಅಭಿಷೇಕ, ವಿಶೇಷ ಪೂಜೆಯನ್ನು ಶ್ರೀಗಳು ನೆರವೇರಿಸಿ ನಂತರ ಮಹಾಮಂಗಳಾರತಿ ಸ್ವೀಕರಿಸಿದರು.