ಸಾಲಬಾಧೆ ತಾಳದೇ ನೇಕಾರನೊಬ್ಬ ಮಗ್ಗದ ಪಕ್ಕದಲ್ಲಿಯೇ ಆತ್ಮಹತ್ಯೆಗೆ ಶರಣಾದ ಘಟನೆ ಬನಹಟ್ಟಿಯ ಭಾನುವಾರ ರಾತ್ರಿ ನಡೆದಿದೆ.
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಸಾಲಬಾಧೆ ತಾಳದೇ ನೇಕಾರನೊಬ್ಬ ಮಗ್ಗದ ಪಕ್ಕದಲ್ಲಿಯೇ ಆತ್ಮಹತ್ಯೆಗೆ ಶರಣಾದ ಘಟನೆ ಬನಹಟ್ಟಿಯ ಭಾನುವಾರ ರಾತ್ರಿ ನಡೆದಿದೆ. ಅಶೋಕ ಕಾಲೋನಿ ನಿವಾಸಿ, ಪವರ್ ಲೂಮ್ ನೇಕಾರ ಸಂಗಮೇಶ ದೇವೇಂದ್ರಪ್ಪ ಮುರಗೋಡ (೪೫) ಆತ್ಮಹತ್ಯೆಗೆ ಶರಣಾದ ನೇಕಾರ. ಕೆಲ ಸಹಕಾರಿ ಸಂಘಗಳು ಮತ್ತು ಖಾಸಗಿ ವ್ಯಕ್ತಿಗಳಿಂದ ಸಾಲ ಮಾಡಿಕೊಂಡಿದ್ದ. ಸರಿಯಾಗಿ ಕೆಲಸವಿಲ್ಲದ ಕಾರಣ ಕುಡಿತದ ಚಟಕ್ಕೆ ಅಂಟಿಕೊಂಡಿದ್ದ ಸಂಗಮೇಶ ಭಾನುವಾರ ಸಂಜೆ ಪತ್ನಿ, ಮಕ್ಕಳು ಮಾರುಕಟ್ಟೆಗೆ ತೆರಳಿದ್ದಾಗ ಶೆಡ್ನಲ್ಲಿ ನೇಣಿಗೆ ಶರಣಾಗಿದ್ದಾನೆ. ಮನೆಯಲ್ಲಿದ್ದ ಮಗ ಮೋಹನನಿಗೆ ಕೆಲ ಹೊತ್ತಿನ ನಂತರ ವಿಷಯ ತಿಳಿದು ತಾಯಿಯನ್ನು ಕರೆಸಿ ಬಾಗಿಲು ಮುರಿದು ಒಳ ಬಂದಾಗ ನೇಣು ಬಿಗಿದ ಸ್ಥಿತಿ ಕಂಡಿದ್ದಾನೆ. ಈ ಕುರಿತು ಬನಹಟ್ಟಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೇಕಾರನ ಆತ್ಮಹತ್ಯೆ ಬೇಸರ ತಂದಿದೆ. ಪ್ರಕರಣದ ಕುರಿತು ತನಿಖೆ ನಡೆಸಲಾಗುತ್ತಿದ್ದು, ಸೂಕ್ತ ಕ್ರಮ ವಹಿಸಲಾಗುತ್ತದೆ. ಸರ್ಕಾರದಿಂದಲೂ ಪರಿಹಾರ ನೀಡಲಾಗುವುದು. ಉದ್ಯಮದಲ್ಲಿ ಏರು-ಇಳಿಕೆ ಸಾಮಾನ್ಯವಾಗಿದ್ದು, ಯಾವುದೇ ನೇಕಾರರು ಇಂತಹ ಕೆಟ್ಟ ಪ್ರಸಂಗಗಳಿಗೆ ಕೈ ಹಾಕಬಾರದು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.