ಬ್ಯಾಡಗಿ: ದಾನಿಗಳ ಸಹಕಾರದಿಂದ ಸುಸಜ್ಜಿತವಾದ ಸಮುದಾಯ ಭವನ ನಿರ್ಮಿಸುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವುದಾಗಿ ಮಾಜಿ ಶಾಸಕ ಹಾಗೂ ರ್ವತಕರ ಸಂಘದ ಅಧ್ಯಕ್ಷ ಸುರೇಶಗೌಡ ಪಾಟೀಲ ಭರವಸೆ ನೀಡಿದರು.
ಮದುವೆ ಸೇರಿದಂತೆ ಇನ್ನಿತರ ಸಮಾರಂಭಗಳನ್ನು ನೆರವೇರಿಸಲು ಪಟ್ಟಣದ ಸಾರ್ವಜನಿಕರು ಬೇರೆಡೆಗೆ ಹೋಗುವ ಸ್ಥಿತಿಯಿತ್ತು, ಹೀಗಾಗಿ, ನಮ್ಮೂರಿಗೊಂದು ಸುಸಜ್ಜಿತವಾದ ಭವನ ನಿರ್ಮಾಣಗೊಂಡಲ್ಲಿ ಬರುವ ದಿನಗಳಲ್ಲಿ ವರ್ತಕರು ಸೇರಿದಂತೆ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದರು.
ಸದ್ಯಕ್ಕೆ ₹4 ಕೋಟಿ ವ್ಯಯಿಲು ನಿರ್ಧರಿಸಿದ್ದೇವೆ. ಬರುವ ದಿನಗಳಲ್ಲಿ ಅಂದಾಜು ಮೊತ್ತದಲ್ಲಿ ಬದಲಾವಣೆ ಆದರೂ ಯಾವುದೇ ಸರ್ಕಾರಗಳ ಮೊರೆ ಹೋಗದಂತೆ ಸಾರ್ವಜನಿಕರ ಮತ್ತು ದಾನಿಗಳ ಸಹಕಾರದಿಂದಲೇ ಸಮುದಾಯ ಭವನವನ್ನು ನಿರ್ಮಾಣ ಮಾಡಲಿದ್ದೇವೆ, ಈ ಮೊದಲು ಶ್ರೀ ಸಿದ್ದೇಶ್ವರ ಕಲ್ಯಾಣ ಮಂಟಪ, ವೀರಶೈವ ಮುಕ್ತಿಧಾಮ ಸಹ ಕೇವಲ ವ್ಯಾಪಾರಸ್ಥರ ಸಹಕಾರದಿಂದ ನಿರ್ಮಿಸಲಾಗಿದೆ ಎಂದರು.ವರ್ತಕರ ಸಂಘ ಸಮಾಜಮುಖಿ:ಗೌರವ ಕಾರ್ಯದರ್ಶಿ ರಾಜು ಮೋರಗೇರಿ ಮಾತನಾಡಿ, ವರ್ತಕರ ಸಂಘ ವ್ಯಾಪಾರಸ್ಥರ ಶ್ರಮದ ಹಣದಿಂದ ಆರ್ಥಿಕವಾಗಿ ಸಶಕ್ತವಾಗಿದೆ, ಹೀಗಾಗಿ, ನಮ್ಮೆಲ್ಲರ ಶ್ರಮದ ಹಣ ಸದ್ವಿನಿಯೋಗ ಆಗಬೇಕೆಂಬ ನಿಟ್ಟನಲ್ಲಿಯೇ ಚಿಂತನೆಗಳನ್ನು ನಡೆಸುತ್ತ ಬಂದಿದೆ. ಹೀಗಾಗಿ, ಬ್ಯಾಡಗಿ ವರ್ತಕರ ಸಂಘ ಸಮಾಜಮುಖಿಯಾದ ಇಂತಹ ಬೃಹತ್ ಯೋಜನೆಗಳನ್ನು ಹಾಕಿಕೊಳ್ಳುತ್ತ ಬಂದಿದೆ ಎಂದರು.