ಉಳ್ಳಾಲ: ಹಿರಿಯರ ಆಚರಣೆಗಳೆಲ್ಲ ಮೂಢನಂಬಿಕೆಗಳಲ್ಲ. ಆಟಿ ಅಮವಾಸ್ಯೆ ದಿವಸ ಕುಡಿಯುವ ಪಾಲೆ ಕೆತ್ತೆ ಕಷಾಯದಲ್ಲಿ ಸುಮಾರು 1000 ಔಷಧೀಯ ಗುಣ ಹೊಂದಿದೆ ಎಂದು ಸಾಬೀತಾಗಿರುವುದೇ ಇದಕ್ಕೆ ಸಾಕ್ಷಿ ಎಂದು ಉಳ್ಳಾಲ ಬಂಟರ ಸಂಘದ ಅಧ್ಯಕ್ಷ ರವೀಂದ್ರ ರೈ ಕಲ್ಲಿಮಾರು ಹೇಳಿದ್ದಾರೆ.ಮುಡಿಪು ಶ್ರೀ ಭಾರತೀ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಶ್ರೀ ಭಾರತೀ ಹಳೆ ವಿದ್ಯಾರ್ಥಿ ಸಂಘ ಆಶ್ರಯದಲ್ಲಿ ಭಾನುವಾರ ಶಾಲೆಯಲ್ಲಿ ನಡೆದ ಆಟಿದ ನೆಂಪು ಹಾಗೂ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಅವರು ಆಟಿಯ ಮಹತ್ವ ಕುರಿತು ಉಪನ್ಯಾಸ ನೀಡಿದರು.
ಶಿಕ್ಷಕರ ದಿನಾಚರಣೆ ಕುರಿತು ಮಾತನಾಡಿದ ನಿವೃತ್ತ ಮುಖ್ಯ ಶಿಕ್ಷಕಿ ಶಾರದಾ ಬಿ. ಅವರು, ಶಿಕ್ಷಣ ಎಂದರೆ ಶಿಕ್ಷೆ ಕೊಡುವುದಲ್ಲ. ಗೌರವಯುತವಾಗಿ ಕಲಿಸಬೇಕು. ಮಕ್ಕಳಲ್ಲಿ ಸಚ್ಚಾರಿತ್ರ್ಯ ಮೂಡಿಸುವಲ್ಲಿ ಹೆತ್ತವರ ಜವಾಬ್ದಾರಿ ಹೆಚ್ಚಿನದ್ದಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಹಾಪ್ಕಾಮ್ಸ್ ಅಧ್ಯಕ್ಷ, ಉದ್ಯಮಿ ಪ್ರಶಾಂತ್ ಗಟ್ಟಿ ಅಮ್ಮೆಂಬಳ ಮಾತನಾಡಿ, ನಮ್ಮ ಬಾಲ್ಯದಲ್ಲಿ ತುಳುನಾಡಿನಲ್ಲಿ ಪತ್ತನಾಜೆಯಿಂದಲೇ ಆಟಿಯ ಸಿದ್ಧತೆ ಶುರುವಾಗುತ್ತಿತ್ತು. ಹಿಂದೆಯ ಆಟಿ ತಿಂಗಳ ರಭಸದ ಮಳೆ ಈಗ ತೆಳುವಾಗಿದೆ ಎಂದು ನೆನಪಿಸಿದರು.ಉದ್ಯಮಿ ಸುಜಿತ್ ಶೆಟ್ಟಿ ಕಂಬಳಪದವು ಮುಖ್ಯ ಅತಿಥಿಯಾಗಿದ್ದರು. ಶ್ರೀ ಭಾರತೀ ಎಜುಕೇಶನ್ ಟ್ರಸ್ಟ್ ಸಂಚಾಲಕ ಕೆ.ಸುಬ್ರಹ್ಮಣ್ಯ ಭಟ್, ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷರಾಗಿದ್ದ ಶಂಕರನಾರಾಯಣ ಭಟ್ ಮತ್ತಿತರರು ಗೌರವ ಉಪಸ್ಥಿತರಿದ್ದರು. ಶ್ರೀ ಭಾರತೀ ಶಾಲೆ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಧಾಕೃಷ್ಣ ರೈ ಉಮಿಯ ಅಧ್ಯಕ್ಷತೆ ವಹಿಸಿದ್ದರು.
ಶ್ರೀ ಭಾರತೀ ಕನ್ನಡ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ವಿಜಯಲಕ್ಷ್ಮೀ ಸ್ವಾಗತಿಸಿದರು. ಜಯಂತಿ ಶೇಟ್ ಪ್ರಾರ್ಥಿಸಿದರು. ಹಳೆ ವಿದ್ಯಾರ್ಥಿ ನರಸಿಂಹ ಭಟ್ ವಂದಿಸಿದರು. ಹಿರಿಯ ಶಿಕ್ಷಕ ಹರೀಶ್ ಕುಮಾರ್ ನಿರೂಪಿಸಿದರು.
ಆಟಿ ತಿಂಗಳ ಸಾಂಪ್ರದಾಯಿಕ ಆಹಾರಗಳನ್ನು ಮಧ್ಯಾಹ್ನದ ಸಹಭೋಜನಲ್ಲಿ ವಿತರಿಸಲಾಯಿತು.