ಹಳಬರ ಕೈಬಿಟ್ಟು ಹೊಸಬರಿಗೆ ಮಣೆಹಾಕಿ: ಉಗ್ರಪ್ಪ

KannadaprabhaNewsNetwork |  
Published : Jul 13, 2026, 01:15 AM IST
ವಿ.ಎಸ್. ಉಗ್ರಪ್ಪ | Kannada Prabha

ಸಾರಾಂಶ

ಸಚಿವ ಸ್ಥಾನ ನೀಡುವಾಗ ಕೇವಲ ಜಾತಿ ಹಾಗೂ ಧರ್ಮಕ್ಕೆ ಪ್ರಾಶಸ್ತ್ಯ ನೀಡಬಾರದು, ಮಂತ್ರಿಗಿರಿ ಎಂಬುದು ಯಾರಪ್ಪನ ಆಸ್ತಿಯೂ ಅಲ್ಲ.

ಕನ್ನಡಪ್ರಭ ವಾರ್ತೆ ಕಾರವಾರ

ಸಚಿವ ಸ್ಥಾನ ನೀಡುವಾಗ ಕೇವಲ ಜಾತಿ ಹಾಗೂ ಧರ್ಮಕ್ಕೆ ಪ್ರಾಶಸ್ತ್ಯ ನೀಡಬಾರದು, ಮಂತ್ರಿಗಿರಿ ಎಂಬುದು ಯಾರಪ್ಪನ ಆಸ್ತಿಯೂ ಅಲ್ಲ ಎಂದು ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಹಾಗೂ ವಿರೋಧ ಪಕ್ಷದ ಮಾಜಿ ನಾಯಕ ವಿ.ಎಸ್. ಉಗ್ರಪ್ಪ ಕಾರವಾಗಿ ನುಡಿದಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಾತಿ ಆಧಾರದ ಮೇಲೆ ಕೆಲಸಕ್ಕೆ ಬಾರದವರಿಗೆ ಸಚಿವ ಸ್ಥಾನ ನೀಡಬಾರದು. 100 ಜನ ಅಯೋಗ್ಯರು, ಅಪ್ರಾಮಾಣಿಕರು, ಕ್ರಿಮಿನಲ್‌ಗಳು ಹಾಗೂ ಭ್ರಷ್ಟರು ಮಂತ್ರಿಗಳಾಗುವ ಬದಲು, 4 ಜನ ವಿದ್ಯಾವಂತರು, ದೇಶಪ್ರೇಮಿಗಳು ಹಾಗೂ ವಿಚಾರವಂತರು ಮಂತ್ರಿಗಳಾದರೆ ದೇಶ ಉದ್ಧಾರವಾಗುತ್ತದೆ ಎಂದರು.

ಅಧಿಕಾರ ಎಂಬುದು ಪಕ್ಷ, ಕಾರ್ಯಕರ್ತರು ಹಾಗೂ ಜನಸಾಮಾನ್ಯರ ಆಸ್ತಿಯಾಗಿದ್ದು, ರಾಜ್ಯವನ್ನು ಉಳಿಸುವ ತಾಕತ್ತು, ಗತ್ತು ಮತ್ತು ಬದ್ಧತೆ ಇರುವವರನ್ನು ಗುರುತಿಸಿ ಮಂತ್ರಿ ಮಾಡುವ ಜವಾಬ್ದಾರಿ ಡಿ.ಕೆ. ಶಿವಕುಮಾರ್ ಅವರಿಗೆ ಇದೆ ಎಂದು ಹೇಳಿದರು.

ಕಳೆದ 10ರಿಂದ 15 ವರ್ಷಗಳ ಕಾಲ ಸಚಿವ ಸ್ಥಾನವನ್ನು ಅನುಭವಿಸಿದವರನ್ನು ಕೈಬಿಟ್ಟು, ಪ್ರಮುಖ ನಾಯಕರನ್ನು ಹೊರತುಪಡಿಸಿ ಉಳಿದವರನ್ನು ಪಕ್ಷದ ಸಂಘಟನಾ ಕಾರ್ಯಕ್ಕೆ ಕಳುಹಿಸಬೇಕು. ಯಾರು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೋ ಅಂತಹ ಯುವಕರು ಹಾಗೂ ಅನುಭವಸ್ಥರಿಗೆ ಮಣೆಹಾಕಿದರೆ ಪಕ್ಷದ ವರ್ಚಸ್ಸು ಮತ್ತಷ್ಟು ಎತ್ತರಕ್ಕೆ ಬೆಳೆಯುತ್ತದೆ ಎಂದು ಸ್ವಪಕ್ಷೀಯ ನಾಯಕರಿಗೆ ಕಿವಿಮಾತು ಹೇಳಿದರು.

ರಾಜ್ಯದಲ್ಲಿ ಬಾಂಗ್ಲಾದೇಶಿಯರಿಗೆ ಕಾಂಗ್ರೆಸ್ ಮಣೆ ಹಾಕುತ್ತಿದೆ ಎಂಬ ಬಿಜೆಪಿ ಆರೋಪಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅವರು, ಭಾರತದ ಪೌರತ್ವ ಹೊಂದಿಲ್ಲದವರಿಗೆ ಯಾವುದೇ ಕಾರಣಕ್ಕೂ ನಮ್ಮ ದೇಶದಲ್ಲಿ ಅವಕಾಶವಿಲ್ಲ ಎಂಬುದು ಕಾಂಗ್ರೆಸ್ ಸ್ಪಷ್ಟ ನಿಲುವಾಗಿದೆ. ಒಂದು ವೇಳೆ ಬಾಂಗ್ಲಾದೇಶದಿಂದ ಅಕ್ರಮ ವಲಸಿಗರು ಪಶ್ಚಿಮ ಬಂಗಾಳ ಹಾಗೂ ಅಸ್ಸಾಂಗೆ ನುಸುಳಿದ್ದರೆ, ಅದಕ್ಕೆ ನೇರವಾಗಿ ಕೇಂದ್ರ ಸರ್ಕಾರವೇ ಹೊಣೆಯಾಗುತ್ತದೆ ಎಂದು ವಾಗ್ದಾಳಿ ನಡೆಸಿದರು. ಮೋದಿ, ಶಾ, ಯೋಗಿ ರಾಜೀನಾಮೆ ನೀಡಲಿ

ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನಲ್ಲಿ ನಡೆದಿದೆ ಎನ್ನಲಾದ ಕೋಟ್ಯಂತರ ರುಪಾಯಿ ಭ್ರಷ್ಟಾಚಾರದ ಆರೋಪದ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೈತಿಕ ಹೊಣೆ ಹೊತ್ತು ತಕ್ಷಣವೇ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು ಎಂದು ವಿ.ಎಸ್. ಉಗ್ರಪ್ಪ ಆಗ್ರಹಿಸಿದರು.

ಇಷ್ಟೆಲ್ಲಾ ಬೆಳವಣಿಗೆಗಳು ನಡೆಯುತ್ತಿದ್ದರೂ ಪ್ರಧಾನಿ ಮೋದಿ, ಅಮಿತ್ ಶಾ ಹಾಗೂ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮೌನ ವಹಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ಪ್ರಕರಣದ ಕುರಿತು ಉನ್ನತ ಮಟ್ಟದ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸಾಕ್ಷಾತ್ ರಾಮನೇ ಭ್ರಷ್ಟಾಚಾರದ ವಿರುದ್ಧ ಸಂದೇಶ ಸಾರಿದ್ದರೂ, ಆತನ ಹೆಸರಿನಲ್ಲಿ ನಿರ್ಮಾಣವಾಗಿರುವ ದೇವಸ್ಥಾನದಲ್ಲೇ ಭ್ರಷ್ಟಾಚಾರ ನಡೆದಿರುವುದು ಅತ್ಯಂತ ಗಂಭೀರ ಹಾಗೂ ಖಂಡನೀಯ ವಿಚಾರ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಹಾನಗರ ಪಾಲಿಕೆಯ ಆರಂಭ ಶೂರತ್ವ; ಮತ್ತೆ ಫುಟ್‌ಪಾತ್ ಅತಿಕ್ರಮಣ ಮಾಡಿದ ವ್ಯಾಪಾರಿಗಳು
ವರ್ತಮಾನದ ಅರಿವಿನಿಂದ ವ್ಯಕ್ತಿತ್ವ ವಿಕಸನ: ಯಮುನಾ ಶ್ರೀನಿಧಿ