ಮಡಿಕೇರಿ: ಕೊಡಗು ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಹಿತಿ, ಕವಿ, ಕತೆಗಾರ ಅಬ್ದುಲ್ ರಶೀದ್ ಆಯ್ಕೆಯಾಗಿದ್ದಾರೆ.
ಅಬ್ದುಲ್ ರಶೀದ್ ಒಬ್ಬ ಕನ್ನಡದ ಬರಹಗಾರ, ಕವಿ, ಸಂಪಾದಕ ಮತ್ತು ಅನುವಾದಕ. ೨೦೦೪ರಲ್ಲಿ ಅವರು ಜೀವಮಾನ ಸಾಧನೆಗಾಗಿ ಸಾಹಿತ್ಯ ಅಕಾಡೆಮಿಯ ಸುವರ್ಣ ಮಹೋತ್ಸವ ಪ್ರಶಸ್ತಿ ಪುರಸ್ಕೃತರು. ಅವರು ಉತ್ತಮ ಅನುವಾದಕ, ಬ್ಲಾಗರ್, ಅಂಕಣಕಾರ ಮತ್ತು ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ನಿರ್ವಾಹಕರು.
ಅಬ್ದುಲ್ ರಶೀದ್ ಅವರು ೨೮ ಫೆಬ್ರವರಿ ೧೯೬೫ರಂದು ಕರ್ನಾಟಕದ ಕೊಡಗು ಜಿಲ್ಲೆಯ ಸುಂಟಿಕೊಪ್ಪದಲ್ಲಿ ಜನಿಸಿದರು ಮತ್ತು ತಮ್ಮ ಬಾಲ್ಯವನ್ನು ಕೊಡಗು ಜಿಲ್ಲೆಯಲ್ಲೇ ಕಳೆದರು. ಅವರು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮದಲ್ಲಿ ಪದವಿ ಮತ್ತು ಮೈಸೂರು ವಿವಿಯಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು.ರಶೀದ್ ಹಲವಾರು ವರ್ಷ ಅಕಾಶವಾಣಿಯಲ್ಲಿ ಕಾರ್ಯಕ್ರಮ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಅವರು ಮೈಸೂರು ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ದೇಶಕರಾಗಿದ್ದರು. 2025ರ ಫೆ. 28ರಂದು ಮೈಸೂರು ಆಕಾಶವಾಣಿಯಿಂದ ಸೇವಾ ನಿವೃತ್ತಿಯಾಗಿದ್ದಾರೆ. ಅವರು ಕನ್ನಡದ ಜನಪ್ರಿಯ ಆನ್ಲೈನ್ ನಿಯತಕಾಲಿಕೆಗಳಾದ ಓದುವ ‘‘ಕೆಂಡಸಂಪಿಗೆ” ಮತ್ತು ‘‘ಮೈಸೂರುಪೋಸ್ಟ್”ನ ಸಂಪಾದಕರಾಗಿದ್ದಾರೆ. ವಿದ್ಯಾಭೂಷಣರಂತಹ ಕನ್ನಡದ ಖ್ಯಾತ ಕಲಾವಿದರ ಜೀವನ ಗಾಥೆಯನ್ನು ತಮ್ಮ ಬ್ಲಾಗ್ಗಳಲ್ಲಿ ಬರೆದಿದ್ದಾರೆ.