ಕನ್ನಡಪ್ರಭ ವಾರ್ತೆ ಬಸವಕಲ್ಯಾಣ
ಗವಿಮಠದಲ್ಲಿ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರ 19ನೇ ಪಟ್ಟಾಧಿಕಾರ ವರ್ಧಂತಿ ಮಹೋತ್ಸವ ಹಾಗೂ 38ನೇ ಜನ್ಮದಿನ ನಿಮಿತ್ತ ಆಯೋಜಿಸಿದ್ದ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿ, 14ನೇ ವಯಸ್ಸಿನಲ್ಲಿಯೇ ಅಭಿನವ ಶ್ರೀಗಳ ಪಟ್ಟಾಧಿಕಾರ ಜರುಗಿದಾಗ ಮಠದಲ್ಲಿ ಏನೂ ಇರಲಿಲ್ಲ. ಈಗ ಸಾಕಷ್ಟು ಪ್ರಗತಿಯಾಗಿದೆ. ಘಟದಿಂದ ಮಠವಾಗಿ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.
ನೇತೃತ್ವ ವಹಿಸಿದ ಗವಿ ಮಠದ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಮಾತನಾಡಿ, ಭಕ್ತರ ಕಲ್ಯಾಣವೇ ಗುರುಗಳ ಆಶಯವಾಗಿರುತ್ತದೆ. ಗುರು ತೋರುವ ಮಾರ್ಗದಲ್ಲಿ ಭಕ್ತರು ಜೀವನ ಸಾಗಿಸಿದಾಗ ಶಾಂತಿ, ನೆಮ್ಮದಿ, ಪ್ರಗತಿ ಕಾಣಲು ಸಾಧ್ಯ ಎಂದು ಹೇಳಿದರು. ಶಾಸಕ ಶರಣು ಸಲಗರ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿವರ್ಷ ಜನ್ಮದಿನೋತ್ಸವ ನಿಮಿತ್ತ ಪಾದಯಾತ್ರೆ ನಡೆಸಿ ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಿರುವ ಅಭಿನವ ಶ್ರೀಗಳ ಸಮಾಜಪರ ಕಾಳಜಿ ಮಹತ್ವದ್ದು ಎಂದರು.ಸಾಹಿತಿ ವೀರಶೆಟ್ಟಿ ಪಾಟೀಲ್ ಸಂಪಾದಿತ ಕವನ ಸಂಕಲನ, ಅಭಿನವ ಶ್ರೀಗಳ ಮೊಬೈಲ್ ಜಾಗೃತಿ ಪಾದಯಾತ್ರೆ ಗ್ರಂಥ ಲೋಕಾರ್ಪಣೆಗೊಳಿಸಿದ ಸಂಸದ ಸಾಗರ್ ಖಂಡ್ರೆ ಮಾತನಾಡಿ, ಸಮಾಜದ ಹಿತದೃಷ್ಟಿಯಿಂದ ಜನರಲ್ಲಿ ಜಾಗೃತಿ ಮೂಡಿಸುವ ಅಭಿನವ ಶ್ರೀಗಳ ಕಾರ್ಯಕ್ಕೆ ಬೆಂಬಲಿಸುವ ಮೂಲಕ ಎಲ್ಲರೂ ಕೈಜೋಡಿಸಬೇಕು ಎಂದು ಕೋರಿದರು.
ರಮೇಶ ರಾಜೋಳ ಸ್ವಾಗತಿಸಿದರು. ಮಲ್ಲಿಕಾರ್ಜುನ ಆಲಗೂಡ ನಿರೂಪಣೆ ಮಾಡಿದರು. ವಿವಿಧೆಡೆಯಿಂದ ಆಗಮಿಸಿದ ಮಠದ ಭಕ್ತರು ಡಾ.ಅಭಿನವ ಶ್ರೀಗಳನ್ನು ಸತ್ಕರಿಸಿ ಆಶೀರ್ವಾದ ಪಡೆದರು. ರವಿ ನಾವದಗೇಕರ, ಶ್ರೀಶೈಲ ವಾತಡ, ಶಿವಕುಮಾರ ಬಿರಾದಾರ, ಲೋಕೇಶ ಮೋಳಕೆರೆ, ಸಂಜುಕುಮಾರ ಜಾಧವ್, ಶ್ರೀನಿವಾಸ ಬಿರಾದಾರ ಅವರನ್ನು ಸನ್ಮಾನಿಸಲಾಯಿತು.