ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನೆ । ಕ್ರಿಮಿನಾಶಕ ಬಳಸಿ ಹತ್ಯೆ ಆರೋಪ । ನ್ಯಾಯಾಲಯದ ಆದೇಶದಂತೆ ಪೊಲೀಸ್ ಕ್ರಮ
ತಾಲೂಕಿನ ಅರೇಹಳ್ಳಿ ಹೋಬಳಿ ಮಲ್ಲಾಪುರ ಗ್ರಾಮದಲ್ಲಿ ಅನುಮಾನಸ್ಪದವಾಗಿ ಸಾವನ್ನಪ್ಪಿದ ಮಹಿಳೆ ಶವವನ್ನು ಹೊರತೆಗೆದು ಹೆಚ್ಚಿನ ಪರೀಕ್ಷೆಗಾಗಿ ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಯಿತು.
ಗ್ರಾಮದ ಲಕ್ಷ್ಮಮ್ಮ (೫೫) ಮಹಿಳೆ ಕಳೆದ ನ.25 ರಂದು ತನ್ನ ಹಿರಿಯ ಮಗ ಸುರೇಶ್ ಎಂಬುವವರ ಮನೆಯಲ್ಲಿ ವಾಸವಿದ್ದ ಸಂದರ್ಭದಲ್ಲಿ ಅನುಮಾನಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದರು. ಅದರಂತೆ ಎರಡನೇ ಮಗ ಪ್ರೇಮಕುಮಾರ್ ಹಾಗೂ ಆತನ ಪತ್ನಿ ಮಮತಾ ಅವರು ನೀಡಿದ ದೂರಿನಲ್ಲಿ ಲಕ್ಷ್ಮಮ್ಮ ಅವರದು ಸಾವು ಸಹಜ ಸಾವಲ್ಲ. ಇದು ಕೊಲೆ ಎಂದು ದೂರು ನೀಡಿದ ಹಿನ್ನೆಲೆಯಲ್ಲಿ ಅಂದು ಮರಣೊತ್ತರ ಪರೀಕ್ಷೆ ನಡೆಸಿ ಅಂತ್ಯ ಸಂಸ್ಕಾರ ನಡೆಸಲಾಗಿತ್ತು.ಮರಣೊತ್ತರ ಪರೀಕ್ಷೆ ವರದಿ ಬಂದ ನಂತರ ಅದರ ಬಗ್ಗೆ ಅನುಮಾನ ವ್ಯಕ್ತಪಡಿಸಿ ತನ್ನ ತಾಯಿಯ ಸಹಜ ಸಾವಲ್ಲ, ಇದು ಕೊಲೆ ಇದನ್ನು ತಮ್ಮ ಅಣ್ಣ ಸುರೇಶ್ ಅತ್ತಿಗೆಯಾದ ಯುವರಾಣಿ (ಕಾವ್ಯ) ತಮ್ಮ ತಾಯಿಯ ಮೇಲೆಹಲ್ಲೆ ನಡೆಸಿ ಕ್ರಿಮಿನಾಶಕ ಬಾಯಿಗೆ ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಬಿಂಬಿಸುಂತೆ ನಾಟಕವಾಡಿದ್ದಾರೆ ಎಂದು ದೂರಿನ ಹಿನ್ನೆಲೆ ಮತ್ತೊಮ್ಮೆ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ ಬಳಿಕೆ ಸೂಕ್ತ ತನಿಖೆ ನಡೆಸಬೇಕು ಎಂದು ದೂರು ನೀಡಿದ್ದರು. ನ್ಯಾಯಾಲಯದಿಂದ ಮತ್ತೊಮ್ಮೆ ಶವವನ್ನು ಹೊರತೆಗೆದು ತಮಗೆ ಶವ ಪರೀಕ್ಷೆ ನಡೆಸಲು ಅನುಮತಿ ನೀಡುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ನಂತರ ಮಾತನಾಡಿದ ಸಕಲೇಶಪುರ ಉಪವಿಭಾಗದ ಅಧಿಕಾರಿ ಶೃತಿ, ‘ಈ ಹಿಂದೆ ಮಲ್ಲಾಪುರ ಗ್ರಾಮದ ಲಕ್ಷ್ಮಮ್ಮ ಎಂಬುವವರು ೬ ತಿಂಗಳ ಹಿಂದೆ ಸಾವನ್ನಪ್ಪಿದ್ದರು. ಈಗಾಗಲೇ ಇದು ತನಿಖೆ ಹಂತದಲ್ಲಿ ಇದ್ದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಹಿಂದೆ ಕುಟುಂಬಸ್ಥರು ಮರಣೊತ್ತರ ಪರೀಕ್ಷೆಯಲ್ಲಿ ಅನುಮಾನವಿದ್ದು ನ್ಯಾಯಕೊಡಿಸಿ ಎಂದು ನ್ಯಾಯಾಲಯದ ಮೊರೆಹೋಗಿದ್ದರು. ನ್ಯಾಯಾಲಯದಿಂದ ನಮಗೆ ಮತ್ತೊಮ್ಮೆ ಶವಪರೀಕ್ಷೆ ನಡೆಸಲು ಆದೇಶ ನೀಡಿದ ಹಿನ್ನೆಲೆ ಮಂಗಳವಾರ ಕುಟುಂಬಸ್ಥರ ಸಮಕ್ಷಮದಲ್ಲಿ ಎಲ್ಲಾ ಅಧಿಕಾರಿಗಳ ನೇತೃತ್ವದಲ್ಲಿ ಶವವನ್ನು ಮತ್ತೊಮ್ಮೆ ಹೊರ ತೆಗೆದು ಮರಣೊತ್ತರ ಪರೀಕ್ಷೆಗಾಗಿ ವಿಧಿವಿಜ್ಞಾನ ಪ್ರಯೋಗ ಶಾಲೆಗೆ ಕಳುಹಿಸಿಕೊಡಲಾಗುತ್ತಿದೆ. ಅಲ್ಲದೆ ನಮಗೆ ಅಲ್ಲಿಂದ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಿದ್ದೇವೆ’ ಎಂದು ತಿಳಿಸಿದರು.
‘ಮತ್ತೊಮ್ಮೆ ಶವ ಪರೀಕ್ಷೆ ಮಾಡಲು ನ್ಯಾಯಾಲಯ ಆದೇಶ ನೀಡಿದೆ. ಈ ಆದೇಶದಂತೆ ನಮಗೆ ನ್ಯಾಯ ದೊರಕಲಿದೆ ಎಂಬ ಕಾರಣದಿಂದ ಮತ್ತೊಮ್ಮೆ ಶವ ಪರೀಕ್ಷೆ ಮಾಡಿಸುತ್ತಿದ್ದು ಇದರಲ್ಲಿ ಸತ್ಯ ಬಯಲಿಗೆ ಬಂದು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು. ತನ್ನ ತಾಯಿಯ ಸಾವು ಸಹಜ ಸಾವಲ್ಲ ಆಸ್ತಿಯ ವಿಚಾರಕ್ಕಾಗಿ ತನ್ನ ತಾಯಿಯನ್ನು ಕೊಲೆ ಮಾಡಿ ಇದನ್ನು ಸಹಜ ಸಾವೆಂದು ಬಿಂಬಿಸಲು ಹೊರಟಿರುವ ನನ್ನ ಅಣ್ಣ ಸುರೇಶ್ ಹಾಗೂ ಕಾವ್ಯ ಇವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಸೂಕ್ತ ತನಿಖೆ ನಡೆಸಿ ನಮ್ಮ ತಾಯಿಯ ಸಾವಿಗೆ ನ್ಯಾಯ ದೊರಕಿಸಿಕೊಡಬೇಕು’ ಎಂದು ಪ್ರೇಮರ್ಮಾರ್ ಒತ್ತಾಯಿಸಿದರು.