-ಕರಣಿಗಿ ಭಾಗ್ಯವಂತಿ ದೇವಿ ಜಾತ್ರಾ ಮಹೋತ್ಸವ: ಕೈ ಕುಸ್ತಿ, ಭಾರ ಎತ್ತುವ ಸ್ಪರ್ಧೆಗೆ ಚಾಲನೆ
ಕೈ ಕುಸ್ತಿ ಮತ್ತು ಭಾರ ಎತ್ತುವುದು ಇವು ಪ್ರಮುಖ ಗ್ರಾಮೀಣ ಸ್ಪರ್ಧೆಗಳಾಗಿವೆ. ಈ ಸ್ಪರ್ಧೆಗಳಲ್ಲಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು ಎಂದು ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಸಾಮಾಜಿಕ ಹೋರಾಟಗಾರ ಉಮೇಶ್ ಕೆ. ಮುದ್ನಾಳ ಹೇಳಿದರು.
ತಾಲೂಕಿನ ಕರಣಿಗಿ ಗ್ರಾಮದಲ್ಲಿ ಭಾಗ್ಯವಂತಿ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಕೈ ಕುಸ್ತಿ ಮತ್ತು ಭಾರ ಎತ್ತುವ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಯುವಕರು ದುಶ್ಚಟಗಳಿಂದ ಅರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದು, ಆದಷ್ಟು ದುಶ್ಚಟಗಳಿಂದ ದೂರವಿದ್ದು, ಇಂಥ ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದು ತಿಳಿಸಿದರು.ಗ್ರಾಮೀಣ ಭಾಗದ ಕ್ರೀಡೆಗಳು ನಶಿಸಿ ಹೋಗುತ್ತಿದ್ದು, ಯುವಕರು ದುಶ್ಚಟಗಳಿಗೆ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಪ್ರತಿ ಜಾತ್ರೆ ಸಂದರ್ಭಗಳಲ್ಲಿ ಇಂಥಹ ಗ್ರಾಮೀಣ ಕ್ರೀಡೆಗಳನ್ನು ಆಯೋಜಿಸಿದರೆ, ಕ್ರೀಡಾಪಟುಗಳಿಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ ಮತ್ತು ದುಶ್ಚಟಗಳಿಂದ ಯುವಕರಿಗೆ ದೂರವಿರಲು ದೇವರ ಭಕ್ತಿಯಿಂದ ಸಹಾಯವಾಗುತ್ತದೆ ಎಂದರು.
ದೇವಸ್ಥಾನದ ಕಮಿಟಿಯ ಅಧ್ಯಕ್ಷ ಭಾಗಣ್ಣ ಪೂಜಾರಿ, ಭೀಮಣ್ಣಗೌಡ ಮಾಲಿ ಪಾಟೀಲ್, ಭಾಗಣ್ಣ ಪೂಜಾರಿ, ಶರಣಗೌಡ ದೊಡಮನಿ, ದೇವರೆಡ್ಡಿ ಹುಂಡೇಕಲ್, ಮಲ್ಲಣ್ಣ ಬಡಿಗೇರ, ಶರಣಪ್ಪ ಗೌಡೂರ, ಶರಬಣ್ಣ ಬಂದಳ್ಳಿ, ದೇವರಾಜ, ಭಾಗಣ್ಣ ಬಂದಳ್ಳಿ, ಈಶಪ್ಪ ಹಂಪಳ್ಳಿ, ದೇವೇಂದ್ರಪ್ಪ ಬಂದಳ್ಳಿ, ಸಿದ್ದು ಹಂಪಳ್ಳಿ, ಭಾಗಣ್ಣ ಗೌಡೂರ, ಅಂಬ್ರೇಶ ಹಂಪಳ್ಳಿ, ಮಲ್ಲಣ್ಣ ಬಂದಳ್ಳಿ, ಮಲ್ಲಣ್ಣ ಯಾದಗಿರಿ ಇತರರಿದ್ದರು.
ಸ್ಪರ್ಧೆಗಳು:ಭಾರ ಎತ್ತುವ ಸ್ಪರ್ಧೆಯಲ್ಲಿ 82 ಸೇರು ಉಸುಕಿನ ಚೀಲ ಎತ್ತುವ ಮೂಲಕ ಸಿದ್ದಪ್ಪ ದ್ಯಾವಪೂರ ಅವರು ನಾಲ್ಕು ತೊಲಿ ಬೆಳ್ಳಿ, ಕೈ ಕಡಗ ಬಹುಮಾನ ಪಡೆದರು. ಕೈ ಕುಸ್ತಿಯಲ್ಲಿ ಮಾನಪ್ಪ ಯಾದಗಿರಿ ಅವರು ನಾಲ್ಕು ಜನರನ್ನು ಮೀರಿಸಿ ನಾಲ್ಕು ತೊಲಿ ಬೆಳ್ಳಿ, ಕೈ ಕಡಗ ಗೆದ್ದರು.
-6ವೈಡಿಆರ್6: ಶಹಾಪುರ ತಾಲೂಕಿನ ಕರಣಿಗಿ ಗ್ರಾಮದಲ್ಲಿ ಭಾಗ್ಯವಂತಿ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಕೈ ಕುಸ್ತಿ ಮತ್ತು ಭಾರ ಎತ್ತುವ ಸ್ಪರ್ಧೆಗೆ ಚಾಲನೆ ನೀಡಲಾಯಿತು.