ಲೋಕಸಭೆ ಸಮರ: ನಾಳೆಯಿಂದ ನಾಮಪತ್ರ ಸ್ವೀಕಾರ

KannadaprabhaNewsNetwork | Updated : Apr 11 2024, 12:46 AM IST

ಸಾರಾಂಶ

ನಂಬರ್ 13-ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ದೇಶದ ಮೂರನೇ ಹಂತ, ರಾಜ್ಯದಲ್ಲಿ 2ನೇ ಹಂತದಲ್ಲಿ ಮೇ 7ರಂದು ಚುನಾವಣೆ ನಡೆಯಲಿದೆ. ಈ ಹಿನ್ನೆಲೆ ಏ.12ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ ಹೇಳಿದ್ದಾರೆ.

- ಏ.19 ನಾಮಪತ್ರ ಸಲ್ಲಿಕೆ ಕೊನೆ ದಿನ, 20ರಂದು ಪರಿಶೀಲನೆ । ಉಮೇದುವಾರಿಕೆ ಹಿಂಪಡೆಯಲು ಏ.22ರವರೆಗೆ ಗಡುವು: ಡಿಸಿ- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ನಂಬರ್ 13-ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ದೇಶದ ಮೂರನೇ ಹಂತ, ರಾಜ್ಯದಲ್ಲಿ 2ನೇ ಹಂತದಲ್ಲಿ ಮೇ 7ರಂದು ಚುನಾವಣೆ ನಡೆಯಲಿದೆ. ಈ ಹಿನ್ನೆಲೆ ಏ.12ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ ಹೇಳಿದರು.

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ದಾವಣಗೆರೆ ಕ್ಷೇತ್ರಕ್ಕೆ ಏ.12ರಂದು ಅಧಿಸೂಚನೆ ಹೊರಡಿಸಲಿದ್ದು, ಅಂದಿನಿಂದ ಏ.19ರವರೆಗೆ ನಾಮಪತ್ರ ಸ್ವೀಕರಿಸಲಾಗುವುದು. ಏ.20ರಂದು ನಾಮಪತ್ರಗಳ ಪರಿಶೀಲನೆ, ಏ.22 ಉಮೇದುವಾರಿಗೆ ಹಿಂಪಡೆಯಲು ಕಡೆಯ ದಿನವಾಗಿದೆ ಎಂದರು.

ಏ.12ರಿಂದ 19ರವರೆಗೆ ಡಿಸಿ ಕಾರ್ಯಾಲಯದ ಕೋರ್ಟ್ ಹಾಲ್‌ನಲ್ಲಿ ಬೆಳಗ್ಗೆ 11ರಿಂದ ಮಧ್ಯಾಹ್ನ 3 ಗಂಟೆವರೆಗೆ ನಾಮಪತ್ರ ಸ್ವೀಕರಿಸಲಾಗುವುದು. ಏ.13 ಮತ್ತು 14ರ ರಜಾ ದಿನಗಳಂದು ರಜೆ ಇರುವುದರಿಂದ ನಾಮಪತ್ರ ಸ್ವೀಕರಿಸುವುದಿಲ್ಲ. ಏ.22ರಂದು ಮಧ್ಯಾಹ್ನ 3 ಗಂಟೆಯೊಳಗೆ ಉಮೇದುವಾರಿಕೆ ಹಿಂಪಡೆಯಲು ಅವಕಾಶ ಇದೆ. ಮೇ 7ರಂದು ಚುನಾವಣೆ ನಡೆಯಲಿದೆ. ಜೂ.4ರಂದು ಬೆಳಗ್ಗೆ 8ರಿಂದ ದಾವಣಗೆರೆ ತಾಲೂಕಿನ ತೋಳಹುಣಸೆ ಬಳಿಯ ಶಿವಗಂಗೋತ್ರಿಯ ದಾವಣಗೆರೆ ವಿಶ್ವವಿದ್ಯಾನಿಲಯ ಆವರಣದಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಅವರು ಹೇಳಿದರು.

ಮತದಾನ-ಮತ ಎಣಿಕೆ:

ನಾಮಪತ್ರ ಪರಿಶೀಲನೆ ಏ.20ರಂದು ಬೆಳಗ್ಗೆ 11 ಗಂಟೆಯಿಂದ ಆರಂಭವಾಗಲಿದೆ. ಅಭ್ಯರ್ಥಿಗಳು ನಾಮಪತ್ರ ವಾಪಸ್‌ ಪಡೆಯಲು ಏ.22ರಂದು ಮಧ್ಯಾಹ್ನ 3 ಗಂಟೆವರೆಗೆ ಅವಕಾಶ ಇದೆ. ಅನಂತರ ಅಂತಿಮ ಕಣದಲ್ಲಿರುವ ಅಭ್ಯರ್ಥಿಗಳಿಗೆ ಚುನಾವಣಾ ಚಿಹ್ನೆ ನೀಡುವ ಮೂಲಕ ಅಂತಿಮ ಕಣದಲ್ಲಿರುವ ಅಭ್ಯರ್ಥಿಗಳ ವಿವರ ಪ್ರಕಟಿಸಲಾಗುವುದು. ಮೇ 7ರಂದು ಮತದಾನ ಮತ್ತು ಜೂ.4ರಂದು ಮತ ಎಣಿಕೆ ಇರುತ್ತದೆ ಎಂದು ವಿವರಿಸಿದರು.

ನಗದು ಮಾತ್ರ ಠೇವಣಿ:

ನಾಮಪತ್ರ ಸಲ್ಲಿಸಲು ರಾಷ್ಟ್ರೀಕೃತ, ಮಾನ್ಯತೆ ಪಡೆದ ಪಕ್ಷಗಳ ಅಭ್ಯರ್ಥಿಗಳು ಇದೇ ಕ್ಷೇತ್ರದ ಮತದಾರರಾದ ಒಬ್ಬರು ಸೂಚಕರಾಗಿರಬೇಕು. ಮಾನ್ಯತೆ ಪಡೆಯದ ಹಾಗೂ ಪಕ್ಷೇತರರಾಗಿ ನಾಮಪತ್ರ ಸಲ್ಲಿಸುವ ಅಭ್ಯರ್ಥಿಗಳು ಇದೇ ಕ್ಷೇತ್ರದ 10 ಮತದಾರರು ಸೂಚಕರಿರಬೇಕು. ಸಾಮಾನ್ಯ ವರ್ಗದವರು ₹25 ಸಾವಿರ, ಪರಿಶಿಷ್ಟ ಜಾತಿ-ಪಂಗಡದ ಅಭ್ಯರ್ಥಿಗಳು ₹12,500 ಅನ್ನು ನಗದಾಗಿ ಮಾತ್ರ ಠೇವಣಿ ಸಲ್ಲಿಸಬೇಕು. ಒಬ್ಬ ಅಭ್ಯರ್ಥಿ ಗರಿಷ್ಠ 4 ನಾಮಪತ್ರ ಮತ್ತು 2 ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಸಲು ಅವಕಾಶ ಇದೆ. ಚುನಾವಣಾ ಅಭ್ಯರ್ಥಿಯಾಗಲು ಕನಿಷ್ಠ 25 ವರ್ಷಗಳಾಗಿರಬೇಕು ಎಂದು ಅವರು ತಿಳಿಸಿದರು.

ಉಮೇದುವಾರಿಕೆ ಸಲ್ಲಿಸುವ ಅಭ್ಯರ್ಥಿಗೆ ಚುನಾವಣಾ ಕಚೇರಿಯ 100 ಮೀಟರ್ ವ್ಯಾಪ್ತಿಗೆ ಆಗಮಿಸಲು 3 ವಾಹನಗಳಿಗೆ ಅವಕಾಶ ಇದೆ. ನಾಮಪತ್ರ ಸಲ್ಲಿಸುವಾಗ 1 ಸಲಕ್ಕೆ ಅಭ್ಯರ್ಥಿ ಸೇರಿ, 5 ಜನರಿಗೆ ಮಾತ್ರ ಅ‍ವಕಾಶ. ನಮೂನೆ-26ರಲ್ಲಿ 4 ಪ್ರತಿಗಳಲ್ಲಿ ಘೋಷಣಾ ಪತ್ರವನ್ನು ಸಲ್ಲಿಸಬೇಕು. ಎಲ್ಲ ಅಂಕಣಗಳ ಮಾಹಿತಿ ನೀಡಬೇಕು. ನಾಮಪತ್ರ ಸಲ್ಲಿಸುವ ಒಂದು ದಿನ ಮೊದಲು ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಅಭ್ಯರ್ಥಿ ಅಥವಾ ಚುನಾವಣಾ ಏಜೆಂಟರ ಜಂಟಿಯಾಗಿ ಖಾತೆ ತೆರೆಯಬಹುದು. ಕುಟುಂಬಸ್ಥರ ಹೆಸರಿನೊಂದಿಗೆ ಜಂಟಿ ಖಾತೆ ಇರಬಾರದು. ಅಭ್ಯರ್ಥಿಗಳ ಮೇಲೆ ಕ್ರಿಮಿನಲ್ ಪ್ರಕರಣಗಳಿದ್ದಲ್ಲಿ ಮತದಾನಕ್ಕಿಂತ ಮೊದಲು ಮಾಧ್ಯಮಗಳಲ್ಲಿ ಮೂರು ಸಲ ಪ್ರಚುರಪಡಿಸಬೇಕು ಎಂದು ಅವರು ವಿವರಿಸಿದರು.

ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ, ಜಿಪಂ ಸಿಇಓ ಡಾ.ಸುರೇಶ ಬಿ.ಇಟ್ನಾಳ ಇತರರು ಇದ್ದರು.

- - - * ಜಿಲ್ಲಾಧಿಕಾರಿ ಹೇಳಿದ್ದು..

8 ವಿಧಾನಸಭಾ ಕ್ಷೇತ್ರಗಳ ಮತದಾರರು ದಾವಣಗೆರೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಹರಪನಹಳ್ಳಿ ಸೇರಿದಂತೆ 8 ವಿಧಾನಸಭಾ ಕ್ಷೇತ್ರ ಒಳಪಡಲಿವೆ. ಇಲ್ಲಿ ಸಹಾಯಕ ಚುನಾವಣಾಧಿಕಾರಿಗಳು ಕಾರ್ಯ ನಿರ್ವಹಿಸುವರು. ಜಗಳೂರು, ಹರಪನಹಳ್ಳಿ, ಹರಿಹರ, ದಾವಣಗೆರೆ ಉತ್ತರ, ದಾವಣಗೆರೆ ದಕ್ಷಿಣ, ಮಾಯಕೊಂಡ, ಚನ್ನಗಿರಿ, ಹೊನ್ನಾಳಿ ವಿಧಾನಸಭಾ ಕ್ಷೇತ್ರಗಳು ಸೇರಿವೆ. ಈ ಎಲ್ಲ ಕ್ಷೇತ್ರಗಳಲ್ಲಿ ಒಟ್ಟು 1946 ಮತಗಟ್ಟೆ ಸ್ಥಾಪಿಸಲಾಗಿದೆ. ಇಡೀ ಕ್ಷೇತ್ರದಲ್ಲಿ ಏ.10ರವರೆಗೆ 850393 ಪುರುಷ, 855079 ಮಹಿಳೆ, 135 ಇತರೆ, 562 ಸೇವಾ ಮತದಾರರು ಸೇರಿದಂತೆ ಒಟ್ಟು 17,06,169 ಮತದಾರರಿದ್ದಾರೆ. ಏ.9 ರವರೆಗೆ ನಮೂನೆ-6ರಲ್ಲಿ 42,664 ಅರ್ಜಿಗಳು ಸ್ವೀಕೃತವಾಗಿದ್ದು, ಪರಿಶೀಲನೆಯ ಹಂತದಲ್ಲಿವೆ.

- - - ಮಾದರಿ ನೀತಿ ಸಂಹಿತೆ ಜಾರಿಗೆ ಕ್ರಮ: ಡಿಸಿ ಚುನಾವಣಾ ದಿನಾಂಕ ಪ್ರಕಟವಾದ ದಿನದಿಂದ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಜಿಲ್ಲಾದ್ಯಂತ ಚೆಕ್ ಪೋಸ್ಟ್, ಫ್ಲೈಯಿಂಗ್ ಸ್ಕ್ವಾಡ್, ಅಬಕಾರಿ ಜಾಗೃತ ದಳ, ವಾಣಿಜ್ಯ ತೆರಿಗೆ ಇಲಾಖೆ ತಂಡ ಸೇರಿದಂತೆ ಪೊಲೀಸ್ ಅಧಿಕಾರಿಗಳು ಒಟ್ಟು ₹1,81,26,926 ಮೌಲ್ಯದ ನಗದು ಮತ್ತು ವಸ್ತು ವಶಪಡಿಸಿಕೊಂಡಿದ್ದಾರೆ. ಇದರಲ್ಲಿ ಎಫ್‍ಎಸ್‍ಟಿಯಿಂದ ₹75,62,100 ರು. ನಗದು, ₹91,39,836 ನಗದು ವಶ ಎಸ್‍ಎಸ್‍ಟಿಯಿಂದ, ಎಫ್.ಎಸ್.ಟಿ.ಯಿಂದ 400 ಟವರ್ ಫ್ಯಾನ್, 56.36 ಗ್ರಾಂ ಚಿನ್ನ, 579 ಸೀರೆ ವಶಪಡಿಸಿಕೊಂಡಿದ್ದು, ಇದರ ಮೌಲ್ಯ ₹8,26,530 ಗಳಾಗಿವೆ. ಚೆಕ್‍ ಪೋಸ್ಟ್‌ಗಳಲ್ಲಿ 17 ಮೊಬೈಲ್, 300 ಜೀನ್ಸ್ ಪ್ಯಾಂಟ್ ಸೇರಿ ₹1,57,000 ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಬಕಾರಿ ಇಲಾಖೆಯಿಂದ ₹2,94,432 ಮೌಲ್ಯದ 709.145 ಲೀ. ಅಕ್ರಮ ಮದ್ಯ ವಶಪಡಿಸಿಕೊಳ್ಳಲಾಗಿದೆ. ಪೊಲೀಸ್ ಇಲಾಖೆ ₹1,47,028 ಮೌಲ್ಯದ 372.184 ಲೀ. ಮದ್ಯ ವಶಪಡಿಸಿಕೊಂಡಿದ್ದು, ಈವರೆಗೆ 290 ಎಫ್‍ಐಆರ್ ದಾಖಲಿಸಲಾಗಿದೆ.

- - - ಮನೆಯಲ್ಲಿಯೇ ಮತದಾನ ಚುನಾವಣಾ ಆಯೋಗವು 85 ವರ್ಷಕ್ಕಿಂತ ಮೇಲ್ಪಟ್ಟವರು ಹಾಗೂ ವಿಶೇಷ ಚೇತನರಿಗೆ ಮನೆಯಲ್ಲಿಯೇ ಮತದಾನ ಮಾಡಲು ಅವಕಾಶ ನೀಡಿದೆ. ಅಂತಹವರಿಗೆ 12ಡಿ ವಿತರಣೆ ಮಾಡಲಾಗಿದ್ದು, 85 ವರ್ಷ ಮೇಲ್ಪಟ್ಟ 12845 ಮತದಾರರಲ್ಲಿ 1473 ಮತದಾರರು ಮನೆಯಲ್ಲಿಯೇ ಮತದಾನ ಮಾಡುತ್ತೇವೆಂದು 12 ಡಿ ನೀಡಿರುವರು. 22,922 ವಿಶೇಷಚೇತನ ಮತದಾರರಲ್ಲಿ 876 ಮತದಾರರು ಮನೆಯಲ್ಲಿ ಮತದಾನ ಮಾಡುತ್ತೇವೆ ಎಂದು ಘೋಷಣಾ ಪತ್ರ ನೀಡಿದ್ದಾರೆ.

- - - ಅಗತ್ಯ ಸೇವಾ ಇಲಾಖೆ ಅಗತ್ಯ ಸೇವಾ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಮತದಾನಕ್ಕೆ ಅನುಕೂಲ ಆಗುವಂತೆ ಅವಕಾಶ ಕಲ್ಪಿಸಲಾಗಿದೆ. ಜಿಲ್ಲೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಇಲ್ಲಿಯೇ ಮತದಾರರ ಪಟ್ಟಿಯಲ್ಲಿ ಹೆಸರಿರುವ 375 ಮತದಾರರು ಮತ್ತು ಇದೇ ಜಿಲ್ಲಾ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಬೇರೆ ಜಿಲ್ಲೆಯಲ್ಲಿ ಮತದಾನ ಮಾಡುತ್ತೇನೆಂದು 410 ಮತ್ತು ಇತರೆ ಬೇರೆ, ಬೇರೆ ಜಿಲ್ಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ದಾವಣಗೆರೆ ಜಿಲ್ಲಾ ಮತದಾರರಾಗಿರುವ 550 ಅಗತ್ಯ ಸೇವಾ ಇಲಾಖೆ ಮತದಾರರು 12ಡಿ ಸಲ್ಲಿಸಿದ್ದಾರೆ. ಅಲ್ಲದೇ, ಮತದಾನ ದಿನ ಕರ್ತವ್ಯನಿರತ ತಾಗುವ 2298 ಮತಗಟ್ಟೆ ಅಧ್ಯಕ್ಷಾಧಿಕಾರಿ, 2298 ಸಹಾಯಕ ಮತಗಟ್ಟೆ ಅಧ್ಯಕ್ಷಾಧಿಕಾರಿ, 4596 ಮತಗಟ್ಟೆ ಸಿಬ್ಬಂದಿ ಸೇರಿ ಒಟ್ಟು 9192 ಮತದಾನ ಸಿಬ್ಬಂದಿಯನ್ನು ಮತದಾನ ದಿನ ಚುನಾವಣಾ ಕರ್ತವ್ಯಕ್ಕೆ ನೇಮಕ ಮಾಡಲಾಗುತ್ತಿದೆ. ಪಿಆರ್‌ಒ, ಎಪಿಆರ್‌ಒಗಳಿಗೆ ಮೊದಲ ಹಂತದ ತರಬೇತಿ ನೀಡಲಾಗಿದೆ.

- - - ಸಿವಿಜಲ್ ಆ್ಯಪ್‌ನಡಿ 471 ದೂರು ಸಾರ್ವಜನಿಕರಿಂದ ದೂರು ಸ್ವೀಕರಿಸಲು ಸಿವಿಜಿಲ್, ಟೋಲ್‍ಫ್ರೀ; ಚುನಾವಣಾ ನೀತಿ ಸಂಹಿತೆ ಹಿನ್ನೆಲೆ ಎಂಸಿಸಿ ಉಲ್ಲಂಘನೆಗೆ ಸಂಬಂಧಿಸಿದಂತೆ ದೂರುಗಳನ್ನು ಸಿವಿಜಿಲ್‌ ಆ್ಯಪ್‌ ಮೂಲಕ 471 ದೂರುಗಳನ್ನು ಸ್ವೀಕರಿಸಲಾಗಿದೆ. ಇವುಗಳಲ್ಲಿ ಬಹುತೇಕ ನಾಮಫಲಕಗಳಲ್ಲಿ ಚುನಾಯಿತ ಪ್ರತಿನಿಧಿಗಳ ಹೆಸರಿದೆ ಎಂಬ ವಿಷಯಗಳಿವೆ. ಮತ್ತು 1950 ಉಚಿತ ಸಹಾಯವಾಣಿಗೆ 345 ಕರೆಗಳು ಬಂದಿದ್ದು, ಚುನಾವಣೆಗೆ ಸಂಬಂಧಿಸಿದ, ಮತದಾರರ ಪಟ್ಟಿ, ಹೆಸರು ಸೇರ್ಪಡೆಗೆ ಸಂಬಂಧಿಸಿ ಕರೆಗಳಾಗಿದ್ದು, ಕರೆ ಮಾಡಿದವರಿಗೆ ಮಾಹಿತಿ ನೀಡಲಾಗಿದೆ.

- - -

ಕೋಟ್‌-1 8 ರೌಡಿ ಶೀಟರ್‌ಗಳ ಗಡೀಪಾರು: ಎಸ್‌ಪಿ ದಾವಣಗೆರೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನ್ಯಾಯ ಸಮ್ಮತ ಚುನಾವಣೆ ನಡೆಸಲು ಕಾನೂನು ಬಾಹಿರವಾಗಿ ಬೆದರಿಕೆಯೊಡ್ಡಬಹುದಾದ ರೌಡಿ ಶೀಟರ್ಸ್‌ಗೆ 1300 ಬಾಂಡ್ ಓವರ್ ಮತ್ತು ಇನ್ನೂ 24 ಜನರನ್ನು ಗುರುತಿಸಿ, ಕ್ರಮ ಕೈಗೊಳ್ಳಲಾಗಿದೆ. 8 ಜನರನ್ನು ಗಡಿಪಾರು ಮಾಡಲಾಗಿದೆ. 698 ಆಯುಧ ಪರವಾನಗಿ ನೀಡಿದ್ದು, ಇದರಲ್ಲಿ 635 ವಾಪಾಸ್ ಪಡೆದು, ಠೇವಣಿ ಮಾಡಲಾಗಿದೆ. ಉಳಿದವರು ಭದ್ರತಾ ಕಾರಣಕ್ಕಾಗಿ ಅನುಮತಿ ಪಡೆದು, ಬಳಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷಭಾಷಣ ಸೇರಿದಂತೆ ಶಾಂತಿ ಕದಡುವ ಪೋಸ್ಟ್ ಹಾಕುವವರ ಮೇಲೆ ಸಂಪೂರ್ಣ ನಿಗಾ ವಹಿಸಲಾಗಿದೆ. ಚುನಾವಣಾ ನಾಮಪತ್ರ ಸಲ್ಲಿಕೆ ವೇಳೆ ಸಂಪೂರ್ಣ ಬಂದೋಬಸ್ತ್‌ಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ

- ಉಮಾ ಪ್ರಶಾಂತ, ಜಿಲ್ಲಾ ರಕ್ಷಣಾಧಿಕಾರಿ

- - - ಕೋಟ್‌-2 ನೀರು, ಶೌಚಾಲಯ ವ್ಯವಸ್ಥೆ

ಕಳೆದ ಲೋಕಸಭಾ ಚುನಾವಣೆಯಲ್ಲಿ ಶೇ.72.96 ಮತದಾನವಾಗಿತ್ತು. ಕಳೆದ ಬಾರಿ ಸರಾಸರಿಗಿಂತ ಶೇ.10ಕ್ಕಿಂತ ಕಡಿಮೆ ಮತದಾನವಾದ 135 ಮತಗಟ್ಟೆಗಳ ವ್ಯಾಪ್ತಿಯಲ್ಲಿ ಈ ಬಾರಿ ಹೆಚ್ಚಿನ ಮತದಾನ ಆಗುವಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಮತದಾನ ಕೇಂದ್ರಕ್ಕೆ ಆಗಮಿಸುವವರಿಗೆ ನೆರಳು, ಕುಡಿಯುವ ನೀರು, ವಿಶ್ರಾಂತಿ, ಶೌಚಾಲಯದ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಒಂದೇ ಕಟ್ಟಡದ ವ್ಯಾಪ್ತಿಯಲ್ಲಿ 3 ಮತ್ತು ಇದಕ್ಕಿಂತ ಹೆಚ್ಚು ಮತಗಟ್ಟೆಗಳಿದ್ದಲ್ಲಿ ಸಹಾಯಕ್ಕಾಗಿ ಸ್ವಯಂ ಸೇವಕರ ಪ್ರತ್ಯೇಕ ತಂಡ ರಚನೆ ಮಾಡಿ ಸಹಾಯ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ. ಈ ಭಾರಿಯ ಚುನಾವಣೆಯಲ್ಲಿ ಶೇ.85ಕ್ಕಿಂತ ಹೆಚ್ಚು ಮತದಾನವಾಗಲು ಹಲವಾರು ಸ್ವೀಪ್ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ನಟರಾದ ಶೃತಿ ಪ್ರಹ್ಲಾದ್ ಮತ್ತು ಪ್ರಥ್ವಿ ಶಾಮನೂರು ನೇತೃತ್ವದಲ್ಲಿ ವಿನೂತನ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗುತ್ತದೆ

- ಡಾ.ಸುರೇಶ ಬಿ. ಇಟ್ನಾಳ, ಸಿಇಒ, ಜಿಪಂ

- - - ಕೋಟ್‌-3 ನಕಲಿ ಮತದಾರರ ಬಗ್ಗೆ ದೂರು, ಪರಿಶೀಲನೆ

ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ 1.70 ಲಕ್ಷ ನಕಲಿ ಮತದಾರರು ಇದ್ದಾರೆ ಎಂಬುದಾಗಿ ಮತದಾರರ ಪಟ್ಟಿ ಸಮೇತ ಬಿಜೆಪಿಯವರು ದೂರು ನೀಡಿದ್ದಾರೆ. ಇದನ್ನು ಪರಿಶೀಲಿಸಿದಾಗ 550 ಜನ ಮತದಾರರ ಹೆಸರು ಪುನರಾವರ್ತನೆ ಆಗಿರುವುದು ಕಂಡುಬಂದಿದೆ. ಪಟ್ಟಿಯಲ್ಲಿ ಉಳಿದಿರುವುದು ನೈಜಮತದಾರರು ಎಂದು ಕಂಡುಬಂದಿದೆ. ಹರಪನಹಳ್ಳಿ ತಾಲೂಕಿನ ಗ್ರಾಮವೊಂದರಲ್ಲಿ ಚುನಾವಣಾ ಬಹಿಷ್ಕಾರ ಮಾಡುವುದಾಗಿ ಗ್ರಾಮಸ್ಥರು ಹೇಳಿದ್ದು, ಅವರ ಮನವೊಲಿಸುವ ಕೆಲಸವನ್ನು ವಿಜಯ ನಗರ ಜಿಲ್ಲಾಧಿಕಾರಿ ಮಾಡಲಿದ್ದಾರೆ

- ಡಾ. ಎಂ.ವಿ.ವೆಂಕಟೇಶ, ಜಿಲ್ಲಾಧಿಕಾರಿ

- - - -10ಕೆಡಿವಿಜಿ7:

ದಾವಣಗೆರೆ ಡಿಸಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಎಸ್ಪಿ ಉಮಾ ಪ್ರಶಾಂತ, ಜಿಪಂ ಸಿಇಓ ಸುರೇಶ ಬಿ.ಇಟ್ನಾಳ ಇತರರು ಇದ್ದರು.

Share this article