ಸಾರ್ವಜನಿಕರು ಫುಟ್‌ಪಾತ್ ಬಳಸಿದರೆ ಅಪಘಾತ ನಿಯಂತ್ರಣ

KannadaprabhaNewsNetwork | Published : Feb 8, 2024 1:30 AM

ಸಾರಾಂಶ

ಚಳ್ಳಕೆರೆ ನಗರಸಭಾ ಕಾರ್ಯಾಲಯದಲ್ಲಿ ಏರ್ಪಡಿಸಿದ್ದ ಆಯವ್ಯಯ ಪೂರ್ವಸಿದ್ಧತಾ ಸಭೆಯಲ್ಲಿ ಪೌರಾಯುಕ್ತ ಸಿ.ಚಂದ್ರಪ್ಪ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ನಗರಸಭೆಯ ೨೦೨೪-೨೫ನೇ ಸಾಲಿನ ಬಜೆಟ್ ಮಂಡನೆ ಹಿನ್ನೆಲೆ 2ನೇ ಬಾರಿಗೆ ಸಾರ್ವಜನಿಕರೊಂದಿಗೆ ಸಮಾಲೋಚನಾ ಸಭೆಯು ಬುಧವಾರ ನಗರಸಭೆ ಸಭಾಂಗಣದಲ್ಲಿ ನಡೆದಿದ್ದು, ಪೌರಾಯುಕ್ತ ಸಿ.ಚಂದ್ರಪ್ಪ ಎಲ್ಲರನ್ನೂ ಸ್ವಾಗತಿಸಿ, ಬಜೆಟ್ ಮಂಡನೆ ಕುರಿತಂತೆ ಅಮೂಲ್ಯ ಸಲಹೆ ಸಹಕಾರ ಪಡೆದರು.

ನಗರಸಭೆ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಜೆ.ರಾಘವೇಂದ್ರ, ಸದಸ್ಯರಾದ ಜಯಲಕ್ಷ್ಮೀ, ಸುಮಾ ಭರಮಣ್ಣ, ಕೆ.ವೀರಭದ್ರಪ್ಪ ಮಾತನಾಡಿ, ನಗರದ ವಿಸ್ತರಣೆಗೊಂಡ ಎರಡೂ ಬದಿಯಲ್ಲಿ ಗ್ರಿಲ್ ಅಳವಡಿಸಿಬೇಕು. ಸಾರ್ವಜನಿಕರು ರಸ್ತೆ ಬಳಸದೆ ಪುಟ್‌ಪಾತ್ ಮೇಲೆ ಓಡಾಡುವಂತಾದರೆ ಅಪಘಾತ ನಿಯಂತ್ರಿಸಬಹುದು. ಪುಟ್‌ಪಾತ್‌ನಲ್ಲಿ ಸಂಚರಿಸುವುದು ನಾಗರಿಕರಿಗೆ ರಕ್ಷಣೆ ಒದಗಿಸಿದಂತಾಗುತ್ತದೆ. ಚಿತ್ರದುರ್ಗ ರಸ್ತೆ ಪುಟ್‌ಪಾತ್‌ಗಳು ಒತ್ತುವರಿಯಿಂದ ಕೂಡಿದ್ದು ಅಲ್ಲಿರುವ ಎಲ್ಲಾ ಅಂಗಡಿಗಳನ್ನು ತೆರವುಗೊಳಿಸಿ ಜನರ ಓಡಾಟಕ್ಕೆ ಅನುವು ಮಾಡಿಕೊಡುವಂತೆ ಮನವಿ ಮಾಡಿದರು.

ಪೌರಾಯುಕ್ತ ಸಿ.ಚಂದ್ರಪ್ಪ ಮಾಹಿತಿ ನೀಡಿ, ಕೊರೋನಾ ಸೇರಿ ಹಲವಾರು ಸಂದರ್ಭಗಳಲ್ಲೂ ನಗರಸಭೆ ತನ್ನ ಜವಾಬ್ಧಾರಿ ಪ್ರಾಮಾಣಿಕವಾಗಿ ನಿರ್ವಹಿಸಿದೆ. ವಿಶೇಷವಾಗಿ ತೆರಿಗೆ ವಸೂಲಿಯಲ್ಲಿ ತನ್ನದೇಯಾದ ವಿಶೇಷತೆ ಹೊಂದಿದೆ. ಸರ್ಕಾರ ಉತ್ತಮ ತೆರಿಗೆ ವಸೂಲಾತಿ ಹಿನ್ನೆಲೆ ಚಳ್ಳಕೆರೆ ನಗರಸಭೆ ಕಾರ್ಯ ಪ್ರಶಂಸಿಸಿ ಸುಮಾರು ₹೬ ಕೋಟಿ ಹಣವನ್ನು ಮಂಜೂರು ಮಾಡಿದ್ದು, ನಗರದ ವಿವಿಧ ವಾರ್ಡ್‌ಗಳ ತುರ್ತು ಕಾಮಗಾರಿ ನಿರ್ವಹಣೆಗೆ ಉಪಯೋಗಿಸಲಾಗುವುದು. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಸಾರ್ವಜನಿಕರು ಪ್ರತಿಯೊಂದು ಸಭೆಯಲ್ಲೂ ಸ್ಮಶಾನಗಳ ಸಂಖ್ಯೆ ಹೆಚ್ಚಿಸುವ ಬಗ್ಗೆ ಮನವಿ ಮಾಡಿಕೊಂಡ ಹಿನ್ನೆಲೆ ನಗರದ ೧೦ ಕಡೆಗಳಲ್ಲಿ ಸ್ಮಶಾನ ನಿರ್ಮಿಸಲು ಟೆಂಡರ್ ಕರೆಯಲಾಗಿದ್ದು ಉಳಿದ ಸ್ಮಶಾನಗಳಿಗೂ ನೀರು, ವಿದ್ಯುತ್ ಇನ್ನಿತರೆ ಸೌಲಭ್ಯ ಒದಗಿಸಲು ಯೋಜನೆ ರೂಪಿಸಲಾಗಿದೆ ಎಂದರು.

ವ್ಯವಸ್ಥಾಪಕ ಲಿಂಗರಾಜು, ಸಹಾಯಕ ಕಾರ್ಯಪಾಲಕ ಅಭಿಯಂತರ ಕೆ.ವಿನಯ್, ಆರೋಗ್ಯ ನಿರೀಕ್ಷಕ ಸುನೀಲ್, ಗಣೇಶ್, ಗೀತಾಕುಮಾರಿ, ಹಿರಿಯ ರೋಟೇರಿಯನ್ ಎಸ್.ಜಯಪ್ರಕಾಶ್ ಮುಂತಾದವರಿದ್ದರು.

Share this article