ದಾಬಸ್ಪೇಟೆ: ಟ್ರ್ಯಾಕ್ಟರ್ ಹಾಗೂ ಬೈಕ್ ನಡುವಿನ ಅಪಘಾತದಲ್ಲಿ ಕರ್ತವ್ಯ ನಿರತ ಮುಖ್ಯಪೇದೆಯೊಬ್ಬರು ಮೃತಪಟ್ಟಿದ್ದಾರೆ.
ಶುಕ್ರವಾರ ಸಂಜೆ ಕರ್ತವ್ಯದ ಮೇಲೆ ನರಸೀಪುರಕ್ಕೆ ಹೋಗಿ ವಾಪಸ್ ಠಾಣೆಗೆ ಬರುವಾಗ ಮಾದೇನಹಳ್ಳಿ ಗ್ರಾಮದ ಟ್ರ್ಯಾಕ್ಟರ್ ಚಾಲಕ ಸಡನ್ ಬ್ರೇಕ್ ಹಾಕಿದ್ದರಿಂದ ಹಿಂದೆಯೇ ಹೊಗುತ್ತಿದ್ದ ಬಸವರಾಜು ಬೈಕ್ ಡಿಕ್ಕಿ ಹೊಡೆದಿದೆ.
ತಕ್ಷಣ ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರಿನ ಸಿದ್ದಗಂಗಾ ಆಸ್ಪತ್ರೆಯಲ್ಲಿ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಪಟ್ಟಣ ಠಾಣೆಯಲ್ಲಿ 10 ವರ್ಷಗಳಿಂದ ಸೇವೆ ಸಲ್ಲಿಸಿದ್ದ ಬಸವರಾಜು ತಾಲೂಕಿನ ಜನಮನ್ನಣೆ ಗಳಿಸಿದ್ದರು.ಬೆಂಗಳೂರು ಗ್ರಾಮಾಂತರ ಎಎಸ್ಪಿ ನಾಗೇಶ್, ಡಿವೈಎಸ್ಪಿ ಜಗದೀಶ್, ಇನ್ಸ್ಪೆಕ್ಟರ್ಗಳಾದ ರಾಜು, ರವಿ, ಪಿಎಸ್ಐ ವಿಜಯಕುಮಾರಿ ಸೇರಿದಂತೆ ಕಾಂಗ್ರೆಸ್ ಮುಖಂಡ ಅಗಳಕುಪ್ಪೆ ಗೋವಿಂದರಾಜು, ಜೆಡಿಎಸ್ ಹೋಬಳಿ ಅಧ್ಯಕ್ಷ ಮೋಹನ್ ಕುಮಾರ್, ಗ್ರಾಪಂ ಅಧ್ಯಕ್ಷ ಆನಂದ್ ಕುಮಾರ್ ಅಂತಿಮ ದರ್ಶನ ಪಡೆದರು. ಮೃತರು, ತಂದೆ, ತಾಯಿ, ಸಹೋದರ, ಪತ್ನಿ, ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಮೃತರ ಅಂತ್ಯ ಸಂಸ್ಕಾರ ಮೃತರ ಸ್ವಗ್ರಾಮದಲ್ಲಿ ಪೊಲೀಸ್ ಇಲಾಖೆಯ ಸಕಲ ಗೌರವವೊಂದಿಗೆ ನೆರವೇರಿತು.