ಬ್ಯಾಡಗಿ: ಕಾಗಿನೆಲೆಯ ಶ್ರೀ ಕನಕ ಗುರುಪೀಠದಲ್ಲಿ ಬ್ರಹ್ಮಲೀನ ಜಗದ್ಗುರು ಶ್ರೀ ಬಿಲೇರೇಂದ್ರ ಕೇಶವ ಕಾರ್ತಿಕಾನಂದಪುರಿ ಮಹಾಸ್ವಾಮೀಜಿ ಅವರ 20ನೇ ಪುಣ್ಯಾರಾಧನೆ ಹಾಗೂ ಗುರುಪೂಜಾ ಮಹೋತ್ಸವ ಶ್ರೀಮಠದ ಜಗದ್ಗುರು ಶ್ರೀ ನಿರಂಜನಾನಂದ ಪುರಿ ಮಹಾಸ್ವಾಮೀಜಿ ಸಾನ್ನಿಧ್ಯದಲ್ಲಿ ಜರುಗಿತು.
ಗುರುವಂದನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀ ನಿರಂಜನಾನಂದ ಪುರಿ ಮಹಾಸ್ವಾಮೀಜಿ, ತಂದೆ-ತಾಯಿ ಹಾಗೂ ಗುರುಗಳಿಗೆ ಸಮಾನ ಗೌರವ ನೀಡಬೇಕು. ಕನಕದಾಸರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜಕ್ಕೆ ಉಪಯುಕ್ತವಾಗಿ ಬದುಕಬೇಕು ಎಂದು ಕರೆ ನೀಡಿದರು.
ತಂದೆ-ತಾಯಿ ನಮಗೆ ಜನ್ಮ ನೀಡಿ, ಬೆಳೆಸಿ, ಬದುಕಿನ ದಾರಿಯನ್ನು ತೋರಿಸುತ್ತಾರೆ. ಅವರ ಋಣವನ್ನು ತೀರಿಸಲು ಸಾಧ್ಯವಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ತಂದೆ-ತಾಯಿಯನ್ನು ಗೌರವದಿಂದ ಕಾಣಬೇಕು. ಗುರುಗಳು ಜ್ಞಾನ ಮತ್ತು ಮಾರ್ಗದರ್ಶನ ನೀಡುವ ಮೂಲಕ ನಮ್ಮ ಬದುಕಿಗೆ ದಾರಿದೀಪವಾಗುತ್ತಾರೆ. ಗುರುಪೂರ್ಣಿಮೆಯಂದು ಗುರುಗಳನ್ನು ಆರಾಧಿಸುವ ಜತೆಗೆ ತಂದೆ-ತಾಯಿಯರನ್ನೂ ಗೌರವಿಸಬೇಕು ಎಂದು ಹೇಳಿದರು.ಕನಕದಾಸರು ಕೇವಲ ಭಕ್ತರಾಗಿರಲಿಲ್ಲ. ಸಮಾಜದಲ್ಲಿನ ಅಸಮಾನತೆ, ಅಜ್ಞಾನ ಹಾಗೂ ಮೌಢ್ಯಗಳ ವಿರುದ್ಧ ತಮ್ಮ ಸಾಹಿತ್ಯದ ಮೂಲಕ ಧ್ವನಿ ಎತ್ತಿದ ಮಹಾನ್ ಸಂತ ಹಾಗೂ ದಾರ್ಶನಿಕರಾಗಿದ್ದರು. ಅವರ ಕೀರ್ತನೆಗಳು ಇಂದಿಗೂ ಸಮಾಜಕ್ಕೆ ದಾರಿ ತೋರಿಸುತ್ತಿವೆ ಎಂದು ಹೇಳಿದರು.
ಸಂಜೆ ಸಾಮೂಹಿಕ ಇಷ್ಟಲಿಂಗ ಪೂಜೆ ಹಾಗೂ ಧಾರ್ಮಿಕ ವಿಧಿ-ವಿಧಾನಗಳು ನೆರವೇರಿದವು. ಶ್ರೀ ರೇವಣಸಿದ್ಧೇಶ್ವರ, ಶ್ರೀ ಬೀರಲಿಂಗೇಶ್ವರ, ಶ್ರೀ ಮೈಲಾರಲಿಂಗೇಶ್ವರ ಹಾಗೂ ಶ್ರೀ ಮಹಾನಂದೇಶ್ವರ ಸೇರಿದಂತೆ ವಿವಿಧ ದೇವರುಗಳ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.