ಕನ್ನಡಪ್ರಭ ವಾರ್ತೆ ಅರಸೀಕೆರೆಜಗಜ್ಯೋತಿ ಬಸವೇಶ್ವರರ ಪ್ರತಿಮೆ ನಿರ್ಮಾಣಕ್ಕಾಗಿ ಸರ್ಕಾರದಿಂದ ಮಂಜೂರಾಗಿದ್ದ ಅನುದಾನವನ್ನು ಬೇರೆ ಕಾಮಗಾರಿಗೆ ಬಳಸಲು ಜಿಲ್ಲಾಡಳಿತ ಮುಂದಾಗಿರುವುದನ್ನು ಖಂಡಿಸಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಹಾಗೂ ತಾಲೂಕು ಘಟಕದ ಪದಾಧಿಕಾರಿಗಳು ಸೋಮವಾರ ತಹಸೀಲ್ದಾರ್ ಎಂ.ಜಿ. ಸಂತೋಷ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಅಧ್ಯಕ್ಷ ಶೇಖರ್ ಸಂಕೋಡನಹಳ್ಳಿ, ಬಸವೇಶ್ವರರ ಪ್ರತಿಮೆ ಪ್ರತಿಷ್ಠಾಪನೆಗೆ ರಾಜ್ಯ ಸರ್ಕಾರದ ವತಿಯಿಂದ ಈ ಹಿಂದೆ ಶಂಕುಸ್ಥಾಪನೆ ನೆರವೇರಿಸಲಾಗಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 40 ಲಕ್ಷ ರು. ಅನುದಾನ ಮಂಜೂರಾಗಿತ್ತು. ಆದರೆ ಈಗ ಆ ಅನುದಾನವನ್ನು ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ವರ್ಗಾಯಿಸುವ ಸಂಬಂಧ ಜಿಲ್ಲಾಧಿಕಾರಿಗಳಿಂದ ಆದೇಶ ಹೊರಡಿಸಿರುವ ಮಾಹಿತಿ ಲಭ್ಯವಾಗಿದೆ ಎಂದು ಆರೋಪಿಸಿದರು.ಬಸವೇಶ್ವರರು ಸಮಾಜ ಸುಧಾರಣೆಗೆ ನೀಡಿದ ಕೊಡುಗೆ ಅಪಾರವಾಗಿದ್ದು, ಅವರ ಪ್ರತಿಮೆ ನಿರ್ಮಾಣ ಕಾರ್ಯಕ್ಕೆ ಮೀಸಲಾದ ಅನುದಾನವನ್ನು ಬೇರೆ ಉದ್ದೇಶಕ್ಕೆ ಬಳಸುವುದು ಸಮಂಜಸವಲ್ಲ. ಹೀಗಾಗಿ ಜಿಲ್ಲಾಡಳಿತ ಕೂಡಲೇ ಆದೇಶವನ್ನು ಪರಿಷ್ಕರಿಸಿ ಮೂಲ ಉದ್ದೇಶಕ್ಕೇ ಅನುದಾನ ಬಳಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಮನವಿ ಸಲ್ಲಿಸುವ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಎ.ಬಿ. ಗುರುಸಿದ್ದೇಶ್, ಮಹಿಳಾ ಘಟಕದ ಅನುರಾಧ ಕುಮಾರಸ್ವಾಮಿ, ಎಸ್. ಎಂ. ಎಸ್ ಕುಮಾರ್, ಆರ್. ಜಿ. ರಾಘವೇಂದ್ರ, ಆನಂದ್, ಚಂದ್ರಶೇಖರ್, ಶಶಿಧರ್, ಪವನ್ ಎ.ಪಿ., ಜಗದೀಶ್, ವಿರೂಪಾಕ್ಷಪ್ಪ, ಭರತೇಶ್, ಲೋಕೇಶ್ ನೀರಗುಂದ, ಓಂಕಾರಮೂರ್ತಿ, ಮಲ್ಲೇಶ್, ಹೇಮಾವತಿ, ಗೌರಮ್ಮ, ಸರೋಜಾ, ಪ್ರೇಮಾ ಗಿರೀಶ್, ಎ.ಎಲ್. ಮೋಹನ್ ಕುಮಾರ್, ಪಂಚಾಕ್ಷರಿ, ಗಗನ್, ನಂಜುಂಡಸ್ವಾಮಿ, ಲಿಂಗರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.