ಬಂಧಿಸುವಾಗ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲೆತ್ನಿಸಿದ ಆರೋಪಿ ಕಾಲಿಗೆ ಗುಂಡೇಟು

KannadaprabhaNewsNetwork |  
Published : Aug 23, 2025, 02:00 AM IST
22ಕೆಎಂಎನ್ ಡಿ24,25,26 | Kannada Prabha

ಸಾರಾಂಶ

ಆರೋಪಿ ಕಿರಣ್ ನನ್ನು ಬಂಧಿಸುವ ವೇಳೆ ಕಿರುಗಾವಲು ಪೊಲೀಸ್ ಠಾಣೆ ಕಾನ್ ಸ್ಟೆಬಲ್ ಎಚ್.ವಿ.ಶ್ರೀನಿವಾಸ್ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ಗಾಯಗೊಳಿಸಿದ್ದಲ್ಲದೆ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಪೊಲೀಸರು ತಮ್ಮ ಪ್ರಾಣ ರಕ್ಷಣೆ, ಆರೋಪಿ ಬಂಧನಕ್ಕಾಗಿ ಸಿಪಿಐ ಶ್ರೀಧರ್ ಕಿರಣ್ ಕಾಲಿಗೆ ಫೈರಿಂಗ್ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ತಾಲೂಕಿನ ಕಿರುಗಾವಲು ಗ್ರಾಮದ ಮಹಾಲಕ್ಷ್ಮೀ ಜ್ಯುವೆಲರ್ಸ್ ಆ್ಯಂಡ್ ಬ್ಯಾಂಕರ್ಸ್ ನಲ್ಲಿ ಆ.17ರಂದು ನಡೆದಿದ್ದ ಚಿನ್ನಾಭರಣ ದರೋಡೆ ಮತ್ತು ಹೋಟೆಲ್ ಮಾಲೀಕನ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸುವ ವೇಳೆ ಪೊಲೀಸರು ತಮ್ಮ ಪ್ರಾಣ ರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆ.

ಮಂಡ್ಯ ತಾಲೂಕಿನ ಈಚಗೆರೆ ಗ್ರಾಮದ ಆರೋಪಿ ಇ.ಎಸ್.ಕಿರಣ್(25) ನನ್ನು ಹಲಗೂರು ಸಿಪಿಐ ಬಿ.ಎಸ್.ಶ್ರೀಧರ್ ನೇತೃತ್ವದ ತಂಡ ಗುರುವಾರ ಮಧ್ಯರಾತ್ರಿ ತಾಲೂಕಿನ ಭೀಮನಹಳ್ಳಿ ಬಳಿ ಕಾಲಿಗೆ ಗುಂಡು ಹಾರಿಸಿ ಬಂಧಿಸಿದೆ.

ಆರೋಪಿ ಕಿರಣ್ ನನ್ನು ಬಂಧಿಸುವ ವೇಳೆ ಕಿರುಗಾವಲು ಪೊಲೀಸ್ ಠಾಣೆ ಕಾನ್ ಸ್ಟೆಬಲ್ ಎಚ್.ವಿ.ಶ್ರೀನಿವಾಸ್ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ಗಾಯಗೊಳಿಸಿದ್ದಲ್ಲದೆ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಪೊಲೀಸರು ತಮ್ಮ ಪ್ರಾಣ ರಕ್ಷಣೆ, ಆರೋಪಿ ಬಂಧನಕ್ಕಾಗಿ ಸಿಪಿಐ ಶ್ರೀಧರ್ ಕಿರಣ್ ಕಾಲಿಗೆ ಫೈರಿಂಗ್ ಮಾಡಿದ್ದಾರೆ.

ಆರೋಪಿ ಕಿರಣ್ ಗೆ ಹಾಗೂ ಗಾಯಾಳು ಕಾನ್ ಸ್ಟೆಬಲ್ ಎಚ್.ವಿ.ಶ್ರೀನಿವಾಸ್ ಅವರಿಗೆ ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಪ್ರಕರಣ ಹಿನ್ನೆಲೆ:

ಕಳೆದ ಆ.17ರ ಭಾನುವಾರ ಬೆಳಗಿನ ಜಾವ ಕಿರುಗಾವಲು ಗ್ರಾಮದ ಮುಖ್ಯರಸ್ತೆಯ ಮಹಾಲಕ್ಷ್ಮೀ ಜ್ಯುವೆಲರ್ಸ್ ಆ್ಯಂಡ್ ಬ್ಯಾಂಕರ್ಸ್ ನ ಶೆಟರ್ ಅನ್ನು ಗ್ಯಾಸ್ ಕಟರ್ ನಿಂದ ಕಟ್ ಮಾಡಿ ಒಳನುಗ್ಗಿದ ಐವರ ದರೋಡೆಕೋರರ ತಂಡ 110 ಗ್ರಾಂ ಚಿನ್ನಾಭರಣ ಹಾಗೂ 2 ಕೆ.ಜಿ. ಬೆಳ್ಳಿಯ ವಸ್ತುಗಳನ್ನು ದೋಚಿದ್ದರು.

ದರೋಡೆ ಶಬ್ಧ ಕೇಳಿಸಿಕೊಂಡು ಪಕ್ಕದ ಮಹದೇಶ್ವರ ಹೋಟೆಲ್ ಮಾಲೀಕ ಮಾದಪ್ಪ(67) ಹೊರಬಂದಾಗ ಕಳ್ಳತನ ಕೃತ್ಯ ನೋಡಿದ್ದಾರೆ ಎಂದು ದರೋಡೆಕೋರರ ತಂಡ ಮಾದಪ್ಪ ಅವರ ಮೇಲೆ ಹಲ್ಲೆ ನಡೆಸಿ ಕತ್ತು ಹಿಸುಕಿ ಕೊಲೆ ಮಾಡಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಕಿರುಗಾವಲು ಪೊಲೀಸರು, ಹಲಗೂರು ಸಿಪಿಐ ಬಿ.ಎಸ್.ಶ್ರೀಧರ್ ಹಾಗೂ ಪಿಎಸ್ಐ ಡಿ.ರವಿಕುಮಾರ್ ನೇತೃತ್ವದಲ್ಲಿ ತನಿಖೆ ನಡೆಸಿದ್ದರು.

ಆರೋಪಿಗಳಾದ ಕೊತ್ತತ್ತಿ ಗ್ರಾಮದ ಕೆ.ಎಂ.ಆನಂದ್(30), ಈಚಗೆರೆ ಗ್ರಾಮದ ಕೆ.ಶರತ್ ಕುಮಾರ್(29), ಹಟ್ಣ ಗ್ರಾಮದ ಎಚ್.ಟಿ.ಶ್ರೀನಿವಾಸ(22), ಕೀಲಾರ ಗ್ರಾಮದ ಕೃಷ್ಣಾಚಾರಿ(40) ಅವರನ್ನು ಬಂಧಿಸಿದ್ದರು. ಪ್ರಕರಣದ ಪ್ರಮುಖ ಆರೋಪಿ ಈಚಗೆರೆಯ ಇ.ಎಸ್.ಕಿರಣ್(25) ತಲೆಮರೆಸಿಕೊಂಡಿದ್ದನು.

ಇ.ಎಸ್.ಕಿರಣ್ ತಾಲೂಕಿನ ಭೀಮನಹಳ್ಳಿ ಗ್ರಾಮದಲ್ಲಿ ತಲೆಮರೆಸಿಕೊಂಡಿದ್ದ ಬಗ್ಗೆ ಮಾಹಿತಿ ಪಡೆದ ಪಿಎಸ್ಐ ಡಿ.ರವಿಕುಮಾರ್ ಕೂಡಲೇ ಸಿಪಿಐ ಬಿ.ಎಸ್.ಶ್ರೀಧರ್ ಹಾಗೂ ಮೇಲಾಧಿಕಾರಿಗಳಿಗೆ ವಿಷಯ ತಿಳಿಸಿದ್ದರು. ಖಚಿತ ಮಾಹಿತಿ ಮೇರೆಗೆ ಗುರುವಾರ ರಾತ್ರಿ ಪೊಲೀಸರು ಬಂಧಿಸಲು ಕಾರ್ಯಾಚರಣೆ ನಡೆಸಿದರು.

ಮಂಡ್ಯದ ಮಿಮ್ಸ್ ಗೆ ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಇ.ತಿಮ್ಮಯ್ಯ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!