ಶಿಗ್ಗಾಂವಿ: ಅಸಲಿ ಬಂಗಾರವೆಂದು ನಂಬಿಸಿ ನಕಲಿ ಬಂಗಾರದ ಬಿಲ್ಲೆಗಳನ್ನು ನೀಡಿ ಲಕ್ಷಾಂತರ ರುಪಾಯಿ ವಂಚಿಸಿದ್ದ ಹೊರ ಜಿಲ್ಲೆಯ ಆರೋಪಿಯನ್ನು ಬಂಧಿಸುವಲ್ಲಿ ಬಂಕಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ.ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಮಹಾಬಲೇಶ್ವರ ತಾಲೂಕಿನ ಕಿಂಗರ್ ಗ್ರಾಮದ ನಿವಾಸಿ ಶಂಕರ ಹರಿಬಾಹು ದುದಾನಿ ಎಂಬುವವರಿಗೆ ಆರೋಪಿಗಳು ಪರಿಚಯವಾಗಿದ್ದರು. ಕಳೆದ ಫೆ. 3ರಂದು ಆರೋಪಿಗಳು ಶಂಕರ ಅವರಿಗೆ ನಕಲಿ ಬಂಗಾರದ ಬಿಲ್ಲೆಗಳನ್ನು ನೀಡಿ, ಅಸಲಿ ಬಂಗಾರವೆಂದು ನಂಬಿಸಿ ಅವರಿಂದ ೫ ಲಕ್ಷ ರುಪಾಯಿಗಳನ್ನು ಪಡೆದು ವಂಚಿಸಿದ್ದರು. ಈ ಬಗ್ಗೆ ಬಂಕಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಪ್ರಕರಣ ದಾಖಲಾಗಿತ್ತು.ಹಾವೇರಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಯಶೋದಾ ವಂಟಗೋಡಿ ಮತ್ತು ಹೆಚ್ಚುವರಿ ಎಸ್.ಪಿ. ಎಲ್.ವೈ. ಶಿರಕೋಳ ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಮಾಚೇಹಳ್ಳಿಯ ನಿವಾಸಿ, ಪ್ರಸ್ತುತ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಆನವಟ್ಟಿಯಲ್ಲಿ ವಾಸವಿರುವ ರಾಮಪ್ಪ ನಾಗಪ್ಪ ಕೆ. (ಕಾವಾಡಿ) (೪೩) ಎಂಬಾತನನ್ನು ಬಂಧಿಸಿದ್ದಾರೆ. ಪ್ರಕರಣದ ಮತ್ತೊಬ್ಬ ಆರೋಪಿ ಸದ್ಯ ತಲೆಮರೆಸಿಕೊಂಡಿದ್ದು, ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.ಬಂಧಿತ ಆರೋಪಿಯಿಂದ ಪೊಲೀಸರು ೪ ಲಕ್ಷ ನಗದು ಹಣ, ಕೃತ್ಯಕ್ಕೆ ಬಳಸಿದ್ದ ಹೀರೋ ಸೂಪರ್ ಸ್ಪ್ಲೆಂಡರ್ ಮೋಟಾರ್ ಸೈಕಲ್ ವಶಪಡಿಸಿಕೊಂಡಿದ್ದು, ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಬಂಕಾಪುರ ಪಿಎಸ್ಐ ಮಂಜುನಾಥ ಎಸ್. ಕುರಿ, ಪಿಎಸ್ಐ-೨ ಶ್ರೀಶೈಲ ಕೆಂಚಣ್ಣವರ ಹಾಗೂ ಅಪರಾಧ ವಿಭಾಗದ ಸಿಬ್ಬಂದಿಗಳಾದ ವೆಂಕಟೇಶ ಲಮಾಣಿ, ಗೋವಿಂದ ಲಮಾಣಿ, ಬೀರಪ್ಪ ಕಳ್ಳಮನಿ, ಕೆ. ರಜನಿ ಮತ್ತಿತರರು ಪಾಲ್ಗೊಂಡಿದ್ದರು. ಪೊಲೀಸರ ಈ ಕಾರ್ಯಕ್ಷಮತೆಯನ್ನು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ಶ್ಲಾಘಿಸಿದ್ದಾರೆ.