ಕಾನೂನು ಚೌಕಟ್ಟಲ್ಲಿ ಮುಖ್ಯ ರಸ್ತೆ ವಿಸ್ತರಣೆಗೆ ಕ್ರಮ: ಶಾಸಕ ದೇವೇಂದ್ರಪ್ಪ

KannadaprabhaNewsNetwork | Published : Mar 1, 2025 1:03 AM

ಪಟ್ಟಣದಲ್ಲಿ ಹಾದುಹೋಗಿರುವ ಮಲ್ಪೆ-ಮೊಳಕಾಲ್ಮೂರು ರಾಜ್ಯ ಹೆದ್ದಾರಿ ಅಗಲೀಕರಣಕ್ಕೆ ಈಗಾಗಲೇ ₹20 ಕೋಟಿ ಬಿಡುಗಡೆಯಾಗಿದೆ. ಜಿಲ್ಲಾಧಿಕಾರಿ ಗಮನಕ್ಕೆ ತಂದು ಕಾನೂನು ಚೌಕಟ್ಟಿನಲ್ಲಿ ರಸ್ತೆ ವಿಸ್ತರಣೆ ಮಾಡಲು ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದ್ದಾರೆ.

- ಜಗಳೂರು ಪ.ಪಂ.ನಲ್ಲಿ ಇ-ಖಾತಾ ಆಂದೋಲನಕ್ಕೆ ಚಾಲನೆ - - - ಜಗಳೂರು: ಪಟ್ಟಣದಲ್ಲಿ ಹಾದುಹೋಗಿರುವ ಮಲ್ಪೆ-ಮೊಳಕಾಲ್ಮೂರು ರಾಜ್ಯ ಹೆದ್ದಾರಿ ಅಗಲೀಕರಣಕ್ಕೆ ಈಗಾಗಲೇ ₹20 ಕೋಟಿ ಬಿಡುಗಡೆಯಾಗಿದೆ. ಜಿಲ್ಲಾಧಿಕಾರಿ ಗಮನಕ್ಕೆ ತಂದು ಕಾನೂನು ಚೌಕಟ್ಟಿನಲ್ಲಿ ರಸ್ತೆ ವಿಸ್ತರಣೆ ಮಾಡಲು ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.

ಪಟ್ಟಣದ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಇ-ಖಾತಾ ಆಂದೋಲನಕ್ಕೆ ಗುರುವಾರ ಚಾಲನೆ ನೀಡಿದ ನಂತರ ಮಾತನಾಡಿದ ಅವರು, ಪಟ್ಟಣದಲ್ಲಿ 13 ಲೇಔಟ್‌ಗಳಲ್ಲಿ ಸಾರ್ವಜನಿಕರು ಕೊಳ್ಳಲು ಮತ್ತು ಮಾರಾಟ ಮಾಡಲು ಸಾಧ್ಯವಾಗದ ಸ್ಥಿತಿಯಿದೆ. ಹೀಗಾಗಿ, ನಮ್ಮ ಸರ್ಕಾರ ಡಿ.ಸಿ.ಗಳಿಗೆ ಸೂಚನೆ ನೀಡಿದ್ದು, ಬಿ ಖಾತಾ ನೀಡುವಂತೆ ಸೂಚಿಸಿದೆ ಎಂದರು.

ನಾವು ಇದನ್ನು ಅಭಿಯಾನವಾಗಿ ಕೈಗೆತ್ತಿಕೊಂಡು ಮೂರು ತಿಂಗಳೊಳಗೆ ಪೂರ್ಣಗೊಳಿಸಲು ಮತ್ತು ಇ-ಖಾತಾ ಇಲ್ಲದ ಆಸ್ತಿಗಳಿಗೆ ಬಿ-ಖಾತಾ ನೀಡಲು ತೀರ್ಮಾನಿಸಿ, ಭೂ ಮಾಲೀಕರು ದಾಖಲೆಗಳಿಲ್ಲದಿದ್ದರೆ, ಇ-ಪ್ರಾಪರ್ಟೀಸ್ ಅಡಿಯಲ್ಲಿ ನೋಂದಾಯಿಸಿಕೊಳ್ಳಬಹುದು. ಅಗತ್ಯ ದಾಖಲೆಗಳನ್ನು ಒದಗಿಸಿದರೆ ಬಿ ಖಾತಾ ನೀಡುತ್ತಿದ್ದು, ಇದರಿಂದ ಸ್ಥಳೀಯ ಸಂಸ್ಥೆಗಳಿಗೆ ಆದಾಯ ವೃದ್ಧಿಯಾಗಲಿದೆ. ಅಧಿಕಾರಿಗಳು ಬಿ ಖಾತಾ ನೀಡಲು ವಿಳಂಬ ಮಾಡಬೇಡಿ ಎಂದು ಸೂಚನೆ ನೀಡಿದರು.

ಈಗಾಗಲೇ ಪಟ್ಟಣದ ರಸ್ತೆ ಅಗಲೀಕರಣಕ್ಕೆ ಮಾರ್ಕಿಂಗ್ ಆಗಿದೆ. ಸಾರ್ವಜನಿಕರ ಸುಗಮ ಸಂಚಾರದ ದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿದ್ದೇವೆ. ಆದರೆ, 100ಕ್ಕೂ ಹೆಚ್ಚು ವರ್ತಕರು ಕೋರ್ಟ್ ಮೆಟ್ಟಿಲೇರಿದ್ದಾರೆ. ಮಾಲೀಕರ ಬಳಿ ಸ್ವಂತ ಆಸ್ತಿ ದಾಖಲೆಗಳಿದ್ದರೆ ತೋರಿಸಲಿ. ಅನಧಿಕೃತ ಕಟ್ಟಡವಾಗಿದ್ದರೆ ಅದಕ್ಕೆ ಕಾನೂನು ಚೌಕಟ್ಟಿನಲ್ಲಿ ಡಿಸಿ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲು ಅಧ್ಯಕ್ಷ, ಸದಸ್ಯರು ಸಭೆಯಲ್ಲಿ ಸರ್ವಾನುಮತದ ತೀರ್ಮಾನ ಮಾಡಿ ಎಂದು ಸಲಹೆ ನೀಡಿದರು.

ದಾಖಲೆಗಳಿಲ್ಲದ ಭೂ ಮಾಲೀಕರಿಗೆ ಇ-ಖಾತಾ ಬದಲಿಗೆ ಬಿ-ಖಾತಾ ದಾಖಲೆಗಳನ್ನು ನೀಡಲಾಯಿತು. ಪಪಂ ಅಧ್ಯಕ್ಷ ಕೆ.ಎಸ್.ನವೀನಕುಮಾರ್, ಉಪಾಧ್ಯಕ್ಷರಾದ ಲೋಕಮ್ಮ ಓಬಳೇಶ್, ಪ.ಪಂ. ಮುಖ್ಯ ಅಧಿಕಾರಿ ಸಿ.ಲೋಕ್ಯಾನಾಯ್ಕ್ ಇದ್ದರು.

- - - -27ಕೆಡಿವಿಜಿ37ಜೆಪಿಜಿ:

ಜಗಳೂರು ಪಂಚಾಯಿತಿಯಲ್ಲಿ ಗುರುವಾರ ಇ-ಖಾತಾ ಆಂದೋಲನಕ್ಕೆ ಶಾಸಕ ಬಿ.ದೇವೇಂದ್ರಪ್ಪ ಚಾಲನೆ ನೀಡಿದರು.