ಕುರುಗೋಡು: ಅರ್ಜಿದಾರರ ಸಮಸ್ಯೆಗೆ ಮುಂದಿನ ಸಭೆಯೊಳಗೆ ಪರಿಹಾರ ದೊರೆಯದಿದ್ದರೆ ಸ್ವಯಂ ದೂರು ದಾಖಲಿಸಿಕೊಂಡು ಕ್ರಮ ಕೈಗೊಳ್ಳಲಾಗುವುದು ಎಂದು ಲೋಕಾಯುಕ್ತ ಡಿವೈಎಸ್ಪಿ ವಸಂತಕುಮಾರ್ ಕಂದಾಯ ಇಲಾಖೆ ಸಿಬ್ಬಂದಿಗೆ ತಾಕೀತು ಮಾಡಿದರು.
ಬುಧವಾರ ಜರುಗಿದ ಸಭೆಯಲ್ಲಿ ಈ ವಿಷಯ ತೀವ್ರ ಚರ್ಚೆಗೆ ಗ್ರಾಸವಾಯಿತು. ಕಂದಾಯ ಇಲಾಖೆ ಮತ್ತು ಭೂಮಾಪನ ಇಲಾಖೆ ಅಧಿಕಾರಿಯಳು ಅರ್ಜಿದಾರರಿಗೆ ದಾಖಲೆಗಳಿಲ್ಲ ಎಂದು ಹಿಂಬರಹ ನೀಡಿ ಕೈತೊಳೆದುಕೊಂಡರೆ ದಾಖಲೆಗಳ ಕೊಠಡಿಯಲ್ಲಿ ಪರಿಶೀಲಿಸಿ ಸ್ವಯಂ ದೂರು ದಾಖಲಿಸಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ತಾಲೂಕಿನ ಯಲ್ಲಾಪುರ ಗ್ರಾಮದ ಗಾದಿಲಿಂಗಪ್ಪ ಅವರ ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ನೀಡುವಲ್ಲಿ ಬೇಜವಾಬ್ದಾರಿ ತೋರಿದ ಕಂದಾಯ ಇಲಾಖೆ ಸಿಬ್ಬಂದಿಗೆ ಮತ್ತು ಪಟ್ಟಣಸೆರಗು ಗ್ರಾಮದ ತಿಪ್ಪೇರುದ್ರ ಗೌಡ ನೀಡಿದ ಚರಂಡಿ ಸಮಸ್ಯೆ ಕುರಿತು ತಾಲ್ಲೂಕು ಪಂಚಾಯಿತಿ ಮತ್ತು ಲೋಕೋಪಯೋಗಿ ಇಲಾಖೆ ಸಿಬ್ಬಂದಿಗೆ ತರಾಟೆಗೆ ತೆಗೆದುಕೊಂಡರು. ಮುಂದಿನ ಸಭೆಯೊಳಗೆ ಸಮಸ್ಯೆಗೆ ಪರಿಹಾರ ದೊರಕಿಸಿಕೊಡುವಂತೆ ಸೂಚಿಸಿದರು.ಮದಿರೆ ಗ್ರಾಮದ ರೈತ ಮಹಿಳೆ ನೀಲಮ್ಮ ಅವರ ಸ್ವಂತ ಭೂಮಿಯಲ್ಲಿ ಸಾಗುವಳಿ ಮಾಡಲು ಅಡ್ಡಿಪಡಿಸುತ್ತಿರುವ ವ್ಯಕ್ತಿಗಳ ವಿರುದ್ದ ಕ್ರಮಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಸೂಚಿಸಿದರು.
ಕುರುಗೋಡು ತಾಲೂಕು ಕಚೇರಿಯಲ್ಲಿ ಜರುಗಿದ ಲೋಕಾಯುಕ್ತ ಪೊಲೀಸರ ಕುಂದುಕೊರತೆ ಸಭೆಯಲ್ಲಿ ಅರ್ಜಿದಾರರು ಮತ್ತು ಅಧಿಕಾರಿಗಳೊಂದಿಗೆ ಚರ್ಚಿಸಿದರು.