ಅನಧಿಕೃತ ರೆಸಾರ್ಟ್‌ಗಳ ವಿರುದ್ಧ ಕ್ರಮ ಜರುಗಿಸಿ

KannadaprabhaNewsNetwork |  
Published : Feb 25, 2026, 02:45 AM IST
ಪೋಟೊ: ಕೊಪ್ಪಳ ನಗರದ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಮಾತನಾಡಿದರು. | Kannada Prabha

ಸಾರಾಂಶ

ಈಗಾಗಲೇ ಎಫ್‌ಐಆರ್ ಆದ ರೆಸಾರ್ಟ್‌ಗಳ ಟ್ರೇಡ್ ಲೈಸೆನ್ಸ್ ರದ್ದುಪಡಿಸಿ ಇತರೆ ಕ್ರಮ ಜರುಗಿಸಬೇಕು.

ಕೊಪ್ಪಳ: ಕೊಪ್ಪಳ ಜಿಲ್ಲೆಯಲ್ಲಿರುವ ಅನಧಿಕೃತ ರೆಸಾರ್ಟ್‌ಗಳ ವಿರುದ್ಧ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಜಿಲ್ಲಾಧಿಕಾರಿ ಡಾ.ಸುರೇಶ ಬಿ. ಇಟ್ನಾಳ ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೊಪ್ಪಳ ಜಿಲ್ಲೆಯಲ್ಲಿರುವ ಅನಧಿಕೃತ ರೆಸಾರ್ಟ್ ಮತ್ತು ಹೋಂಸ್ಟೇಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಕುರಿತು ವಿವಿಧ ಇಲಾಖೆಯ ಅಧಿಕಾರಿಗಳಿಗೆ ಕರೆದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈಗಾಗಲೇ ಎಫ್‌ಐಆರ್ ಆದ ರೆಸಾರ್ಟ್‌ಗಳ ಟ್ರೇಡ್ ಲೈಸೆನ್ಸ್ ರದ್ದುಪಡಿಸಿ ಇತರೆ ಕ್ರಮ ಜರುಗಿಸಬೇಕು. ಪ್ರತಿಯೊಂದಕ್ಕೂ ನಾನೇ ಕರೆದು ತಮಗೆ ಹೇಳಬೇಕಾ, ಹಾಗಾದರೆ ತಮ್ಮ ಜವಾಬ್ದಾರಿ ಏನು ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ತಮ್ಮ ಇಲಾಖೆಗಳಿಗೆ ಸಂಬಂಧಿಸಿದ ಕೆಲಸ ಜವಾಬ್ದಾರಿಯಿಂದ ತಾವು ನಿರ್ವಹಿಸಬೇಕು. ಸರ್ಕಾರದ ನಿಯಮಗಳನ್ವಯ ಅಗತ್ಯ ದಾಖಲೆ ಪರಿಶೀಲಿಸದೆ ಹೋಂಸ್ಟೇ ಮತ್ತು ರೆಸಾರ್ಟ್‌ಗಳಿಗೆ ಕಟ್ಟಡ ಪರವಾನಗಿ ನೀಡಿದ್ದಲ್ಲಿ ಅಂತಹ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ ಎಂದು ಹೇಳಿದರು.

ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಯಲ್ಲಿ ಯಾವುದೇ ಅಕ್ರಮ ರೆಸಾರ್ಟ್ ಹಾಗೂ ಹೋಂಸ್ಟೇಗಳು ಇರುವ ಹಾಗಿಲ್ಲ. ಈ ಕುರಿತು ಕಂದಾಯ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಸರ್ವೇ ಕಾರ್ಯಕೈಗೊಳ್ಳಬೇಕು. ಜಿಲ್ಲೆಯಲ್ಲಿ ಅನಧಿಕೃತ ಮದ್ಯ ಮಾರಾಟ ಮತ್ತು ಕಾನೂನು ಬಾಹಿರ ಚಟುವಟಿಕೆ ಕಂಡು ಬಂದರೆ ತಕ್ಷಣ ಅವುಗಳಿಗೆ ಸಂಬಂಧಿಸಿದ ಇಲಾಖೆಯವರು ಕಡಿವಾಣ ಹಾಕಬೇಕು.

ಹಂಪಿ ಕೆಫೆ, ರಾಖಿ ಮಿಡೋಸ್ ರೆಸಾರ್ಟ್ ಸೇರಿದಂತೆ ಇತರೆ ನಿಯಮ ಉಲ್ಲಂಘನೆ ಮಾಡಿದ ರೆಸಾರ್ಟ್‌ಗಳ ಟ್ರೇಡ್ ಲೈಸೆನ್ಸ್ ಕ್ಯಾನ್ಸಲ್ ಆಗಿರುವ ಕುರಿತು ಮಾಹಿತಿ ನೀಡಿ ಎಂದರು. ಉಪಲೋಕಾಯುಕ್ತರು ದಾಖಲಿಸಿದ ಸೊಮೊಟೊ ಪ್ರಕರಣಗಳ ಕಂಪ್ಲೆಯನ್ಸ್ ರಿಪೋರ್ಟ್‌ಗಳನ್ನು ಕೊಡಬೇಕೆಂದು ಹೇಳಿದರು.

ಜಿಪಂ ಸಿಇಒ ವರ್ಣಿತ್ ನೇಗಿ ಮಾತನಾಡಿ, ಕೆಲಸ ಕೇವಲ ಪೇಪರ್‌ನಲ್ಲಿ ಆಗಬಾರದು. ಗ್ರೌಂಡ್ ಲೇವಲ್‌ನಲ್ಲಿ ಕೆಲಸ ಆಗಬೇಕು. ಟ್ರೇಡ್ ಲೈಸೆನ್ಸ್ ರದ್ದಾದ ಮೇಲೆ ಅವುಗಳನ್ನು ಮುಚ್ಚುವ ಕೆಲಸ ಆಗಬೇಕು. ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಪಿಡಿಓಗಳು ಏನು ಮಾಡುತ್ತಿದ್ದೀರಾ, ಈ ಕುರಿತು ಗಮನ ಹರಿಸುತ್ತಿರಬೇಕು. ಸಭೆಗೆ ಬಂದಾಗ ಮಾತ್ರವೇ ಕೆಲಸ ಮಾಡಿದ ಹಾಗೆ ಹೇಳಬಾರದು ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ ಮಾತನಾಡಿ, ಅಧಿಕಾರಿಗಳು ಯಾವುದೇ ಅನುಮತಿ ನೀಡುವ ಮುಂಚೆ ಎಲ್ಲವನ್ನೂ ಪರಿಶೀಲನೆ ಮಾಡಿ ಕೊಡಬೇಕು. ಇಲ್ಲವಾದರೆ ಕಾನೂನು ಸಮಸ್ಯೆ ಆಗುತ್ತವೆ. ನಮ್ಮ ಪೊಲೀಸರು ಕೇಳಿದಾಗ ಅವರು ಆ ಅನುಮತಿ ಪಡೆದಿದ್ದೇವೆ,ಇದು ಪಡೆದಿದ್ದೇವೆ ಎಂದು ರೆಸಾರ್ಟ್‌ನವರು ನಮ್ಮ ಪೊಲೀಸರಿಗೆ ಹೇಳುತ್ತಾರೆ. ಮೊನ್ನೆ ಮುನಿರಾಬಾದನಲ್ಲಿ ಘಟನೆಯಾದ ನಂತರ ಗಂಗಾವತಿ ಮತ್ತು ಸಾಣಾಪುರದಲ್ಲಿ ನಮ್ಮ ಪೊಲೀಸರನ್ನು ಗಸ್ತಿಗೆ ನಿಯೋಜಿಸಲಾಗಿದೆ ಎಂದು ಹೇಳಿದರು.

ಈ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಉಪ ಅರಣ್ಯ ಸಂರಕ್ಷಣಾಧಿಕಾರಿ ನಿರ್ಮಲಾ, ಸಹಾಯಕ ಆಯುಕ್ತ ಕ್ಯಾ.ಮಹೇಶ ಮಾಲಗಿತ್ತಿ. ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು, ತಹಸೀಲ್ದಾರರು, ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಪಿಡಿಓ ಸೇರಿದಂತೆ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವ್ಯವಸಾಯದಲ್ಲಿ ತಂತ್ರಜ್ಞಾನದ ಅಳವಡಿಕೆ ಅವಶ್ಯ: ಚೇತನಾ ಪಾಟೀಲ
ಸಿಎಂ ಜೊತೆ ಚರ್ಚಿಸಿ ವಿವಿ ಸಮಸ್ಯೆಗಳ ಪರಿಹಾರಕ್ಕೆ ಕ್ರಮ: ಸಚಿವ ಡಾ. ಎಂ.ಸಿ. ಸುಧಾಕರ್