ಹರಪನಹಳ್ಳಿ: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಭಾರತ ಕಮ್ಯುನಿಷ್ಟ್ ಪಕ್ಷದ (ಮಾರ್ಕ್ಸ್ವಾದಿ) ಕಾರ್ಯಕರ್ತರು ಸೋಮವಾರ ನಗರದ ತಾಲೂಕು ಆಡಳಿತ ಸೌಧ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹ ನಡೆಸಿದರು. ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ರೈತರ ಬಗರ್ ಹುಕುಂ ಸಾಗುವಳಿ ಚೀಟಿ ವಿತರಿಸಬೇಕು, ಅಕ್ರಮ ಮದ್ಯ ಮಾರಾಟ ತಡೆಗಟ್ಟಬೇಕು, ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ಒತ್ತುವರಿಯಾಗಿರುವ ಸಾರ್ವಜನಿಕ ಬಸ್ ನಿಲ್ದಾಣದ ಜಾಗ ತೆರವುಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು. ಹರಪನಹಳ್ಳಿ ತಾಲೂಕಿನ 37 ಗ್ರಾಮ ಪಂಚಾಯ್ತಿಗಳಲ್ಲಿ ಎಸ್ಎಲ್ಡಬ್ಲ್ಯೂಎಂನ ವಾಹನ ಚಾಲಕರ ಮತ್ತು ಕಸ ವಿಂಗಡಕರ ಸಂಬಳ ಪಾವತಿ ಮಾಡಬೇಕು, ಬೇಸಿಗೆ ಪ್ರಾರಂಭವಾಗಿದ್ದು ತಾಲೂಕಿನಾದ್ಯಂತ ಕುಡಿಯುವ ನೀರು ಹಾಗೂ ಮೇವಿನ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಪಟ್ಟಣದ ಹೊಸಪೇಟೆ ರಸ್ತೆ ಮತ್ತು ಹರಿಹರ ರಸ್ತೆಯ ಆಶ್ರಯ ಮತ್ತು ಆಸರೆ ಮನೆಗಳ ನಿವಾಸಿಗಳಿಗೆ ಕೂಡಲೇ ಹಕ್ಕು ಪತ್ರ ವಿತರಣೆ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಗುಳೇದಟ್ಟಿ ಸಂತೋಷ, ಸಂದೇರ ಪರಶುರಾಮ, ರಾಘವೇಂದ್ರ, ರಾಮಪ್ಪ, ಬಸಪ್ಪ, ಮಲ್ಲೇಶ, ಅಕ್ಬರ್, ಅಣ್ಣನಾಯ್ಕ್ ಸೇರಿದಂತೆ ಮತ್ತಿತರರು ಇದ್ದರು.