‘ಸದನದ ಭಾಷೆ, ಸದನದ ನಡವಳಿಕೆ’ ಒಂದು ಚರ್ಚೆ ಕಾರ್ಯಕ್ರಮದಲ್ಲಿ ವಿಧಾನಸಭೆ ವಿಪಕ್ಷ ಉಪನಾಯಕಕನ್ನಡಪ್ರಭ ವಾರ್ತ ಕುರುಗೋಡು
ಸದನದ ಗೌರವ ಕಾಪಾಡಬೇಕು. ಜನಸಾಮಾನ್ಯರಿಗೆ ಜನಪ್ರತಿನಿಧಿಗಳಿಂದ ಸಹಾಯ ಹಸ್ತ ದೊರೆಯಬೇಕಾದರೆ ಬುದ್ದಿಜೀವಿಗಳು, ಸಾಹಿತಿಗಳು, ಹೋರಾಟಗಾರರು ಸದನ ಪ್ರವೇಶಿಸುವ ಅಗತ್ಯವಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಹೇಳಿದರು.ಇಲ್ಲಿಗೆ ಸಮೀಪದ ಸಿರಿಗೇರಿ ಗ್ರಾಮದಲ್ಲಿ ಕರ್ನಾಟಕ ರಾಜಕೀಯ ಅಕಾಡೆಮಿ ಭಾನುವಾರ ಆಯೋಜಿಸಿದ್ದ ‘ಸದನದ ಭಾಷೆ, ಸದನದ ನಡವಳಿಕೆ’ ಒಂದು ಚರ್ಚೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮೊದಲು ವಿವಿಧ ಆಯಾಮಗಳ ಹೋರಾಟದ ಹಿನ್ನೆಲೆಯ ವ್ಯಕ್ತಿಗಳು ಸೇವಾ ಮನೋಭಾವದಿಂದ ಜನಪ್ರತಿನಿಧಿಗಳಾಗಿ ಸದನ ಪ್ರವೇಶಿಸುತ್ತಿದ್ದರು. ಅವರಿಂದ ಗ್ರಾಮೀಣ ಭಾಗದ ಜನರ ನೋವುನಲಿವುಗಳಿಗೆ ಸೂಕ್ತ ಸ್ಪಂದನೆ ದೊರೆಯುತ್ತಿತ್ತು. ಇಂದು ಸದನದಲ್ಲಿ ಅನಗತ್ಯವಾಗಿ ವೈಯಕ್ತಿಕ ವಿಚಾರ, ಪಕ್ಷಗಳ ವಿಷಯ ಚರ್ಚೆ ಮಾಡುತ್ತಾ ಕಾಲಹರಣ ಮಾಡುತ್ತಿದ್ದಾರೆ. ವೈಯಕ್ತಿಕ ನಿಂದನೆ, ಏಕವಚನ ಬಳಕೆ, ಅವಾಚ್ಛ ಶಬ್ದಗಳಲ್ಲಿ ಪರಸ್ಪರ ಒಬ್ಬರಿಗೊಬ್ಬರು ಮೂದಲಿಸುತ್ತಿರುವುದು ವಿಷಾದಕರ ಸಂಗತಿ ಎಂದರು.ಸದನದಲ್ಲಿ ನಡೆಯುವ ಎಲ್ಲ ಚಟುವಟಿಕೆಗಳನ್ನು ರಾಜ್ಯದ ಜನರು ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ. ಜನಪ್ರತಿನಿಧಿಗಳು ಸದನದಲ್ಲಿ ಬಳಸುವ ಭಾಷೆ ಮತ್ತು ಸಭಾನಡವಳಿಕೆ ಶುದ್ಧವಾಗಿರಬೇಕು ಎಂದರು. ಆಡಳಿತಾರೂಢ ಪಕ್ಷ ನಡಗಳಿಗಳ ವಿಷಯ ಮಂಡನೆಯಾದ ನಂತರ ಪಕ್ಷಾತೀತವಾಗಿ ಚರ್ಚೆಗೆ ಎಲ್ಲರಿಗೂ ಅವಕಾಶ ನೀಡಬೇಕು. ಬದಲಾದ ಪರಿಸ್ಥಿತಿಯಲ್ಲಿ ಸದನದ ಕೊನೆಯ ದಿನ ಮತ್ತು ಕೊನೆಯ ಅವಧಿಯಲ್ಲಿ ಮಂಡಿಸಿ ಚರ್ಚೆಗೆ ಅವಕಾಶಗೊಡದೆ ಏಕಪಕ್ಷೀಯವಾಗಿ ಅನುಮೋದಿಸಿ ಅಂಗೀಕಾರ ಮಾಡುವ ಪರಿಪಾಟ ಮುನ್ನೆಲೆಗೆ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಇಂದಿನ ಬದಲಾದ ಪರಿಸ್ಥಿತಿಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಗಳು, ದಂಧೆಕೋರರು, ಸಂಘಟನೆಯ ಹೆಸರಿನಲ್ಲಿ ಅಮಾಯಕರಿಂದ ಹಣ ದೋಚುವವರು ಸದನ ಪ್ರವೇಶಿಸುತ್ತಿರುವುದು ಉತ್ತಮ ಬೆಳವಣಿಗೆಯಲ್ಲ ಎಂದು ಬೆಲ್ಲದ ಕಳವಳ ವ್ಯಕ್ತಪಡಿಸಿದರು.ಉದ್ಯಮವಾಗಿ ರಾಜಕಾರಣ:ಹಣಬಲ, ತೋಳ್ಬಲ, ಜಾತಿ ಪ್ರಾಬಲ್ಯ ಮತ್ತು ಪ್ರಭಾವದಿಂದ ಸದನ ಪ್ರವೇಶಿಸುತ್ತಿರುವುದರಿಂದ ರಾಜಕಾರಣ ಕಡಿಮೆ ಹಣ ಚೆಲ್ಲಿ ಹೆಚ್ಚು ಹಣ ಬಾಚುವ ಒಂದು ಉದ್ಯೋಗವಾಗಿ ಪರಿಣಮಿಸಿದೆ. ಪರಿಣಾಮ ಸಚ್ಚಾರಿತ್ರ್ಯ ಶುದ್ಧ ಮತ್ತು ಸಿದ್ಧ ಹಸ್ತರಾಗಿದ್ದ ರಮೇಶ್ ಕುಮಾರ್, ಎ.ಟಿ. ರಾಮಸ್ವಾಮಿ, ಎ.ಕೆ. ಸುಬ್ಬಯ್ಯ, ಮಾಧುಸ್ವಾಮಿ ಮತ್ತು ಬಿ.ಎಲ್. ಶಂಕರ್ ಅವರಂಥ ಉತ್ತಮ ಸಂಸದೀಯ ಪಟುಗಳು ಸದನ ಪ್ರವೇಶಿಸುವಲ್ಲಿ ವಂಚಿತರಾಗಿರುವುದು ಉತ್ತಮ ಬೆಳವಣಿಗೆಯಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸ್ನೇಹ ಸಂಪುಟದ ಅಧ್ಯಕ್ಷ ಕಲ್ಲುಕಂಭ ಪಂಪಾಪತಿ ಮಾತನಾಡಿ, ಜನಪ್ರತಿನಿಧಿಗಳಾದವರು ಗ್ರಾಮೀಣ ಭಾಗಗಳಲ್ಲಿ ದ್ವೇಷದ ರಾಜಕಾರಣ ಮಾಡಬಾರದು. ಪಕ್ಷಾತೀತವಾಗಿ ಗ್ರಾಮಗಳ ಅಭಿವೃದ್ಧಿಗೆ ಒತ್ತು ನೀಡಬೇಕು. ಸೇವಾಮನೋಭಾವ ಹೊಂದಿದವರು ಮಾತ್ರ ರಾಜಕಾರಣಕ್ಕೆ ಬರಬೇಕು ಎಂದು ಸಲಹೆ ನೀಡಿದರು.ಅಕಾಡೆಮಿ ಅಧ್ಯಕ್ಷ ಸಿರಿಗೇರಿ ಎರಿಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಿದ್ಯಾವಣ್ಣ ಉಪಾಧ್ಯಕ್ಷೆ ರಾಜಮ್ಮ ಹುಲುಗಪ್ಪ, ಶಂಭುಲಿಂಗ ದೇವಸ್ಥಾನದ ಸಮಿತಿ ಅಧ್ಯಕ್ಷ ಹೂಗಾರ ಬಸವರಾಜ ಮತ್ತು ನಿಮಗಾಗಿ ನಾವು ಸಂಸ್ಥೆಯ ಅಧ್ಯಕ್ಷ ಕೊಳ್ಳಿ ಶೇಖರ್ ಇದ್ದರು.