ಚಿರತೆಗಳ ಜೊತೆ ಹೊಂದಾಣಿಕೆ ಅನಿವಾರ್ಯ ಪರಿಸ್ಥಿತಿ: ಎಚ್.ಸಿ.ಬಾಲಕೃಷ್ಣ

KannadaprabhaNewsNetwork | Published : Jun 5, 2025 1:28 AM
ಮನುಷ್ಯರು ತಾವು ಬದುಕುವುದಕ್ಕೋಸ್ಕರ ಅರಣ್ಯವನ್ನು ನಾಶ ಮಾಡುತ್ತಿದ್ದು, ಕಾಡು ಪ್ರದೇಶ ಕಡಿಮೆಯಾಗಿ ನಾಡು ಪ್ರದೇಶ ಹೆಚ್ಚಾಗುತ್ತಿದೆ.

ಕನ್ನಡಪ್ರಭ ವಾರ್ತೆ ಮಾಗಡಿ

ಮುನುಷ್ಯರು ಚಿರತೆ ಜೊತೆ ಹೊಂದಿಕೊಂಡು ವಾಸಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದ್ದು ಬೀದಿ ನಾಯಿಗಳಿಗಿಂತ ಚಿರತೆಗಳೇ ಹೆಚ್ಚಾಗಿದೆ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಬೇಸರ ವ್ಯಕ್ತಪಡಿಸಿದರು.ತಾಲೂಕಿನ ನಾಯಕನಪಾಳ್ಯ ಗೇಟ್ ಬಳಿ ಇರುವ ರೈತ ಭವನದಲ್ಲಿ ಅರಣ್ಯ ಇಲಾಖೆ ಪ್ರಾದೇಶಿಕ ವಿಭಾಗದಿಂದ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಚಿರತೆ ದಿನ-2025 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮನುಷ್ಯರು ತಾವು ಬದುಕುವುದಕ್ಕೋಸ್ಕರ ಅರಣ್ಯವನ್ನು ನಾಶ ಮಾಡುತ್ತಿದ್ದು, ಕಾಡು ಪ್ರದೇಶ ಕಡಿಮೆಯಾಗಿ ನಾಡು ಪ್ರದೇಶ ಹೆಚ್ಚಾಗುತ್ತಿದೆ.

ಈ ಮೊದಲು ಕಾಡು ಪ್ರಾಣಿಗಳಿಗೆ ಅರಣ್ಯದಲ್ಲಿ ಸಾಕಷ್ಟು ಆಹಾರ ದೊರೆಯುತ್ತಿತ್ತು, ಅರಣ್ಯ ನಾಶದ ಪರಿಣಾಮ ಕಾಡು ಪ್ರದೇಶ ಕಡಿಮೆಯಾಗಿದ್ದು, ಕಾಡು ಪ್ರಾಣಿಗಳಿಗೆ ಆಹಾರ ಸಿಗುತ್ತಿಲ್ಲವಾದ್ದರಿಂದ ಅವುಗಳು ಆಹಾರ ಅರಸಿ ನಾಡಿಗೆ ನುಗ್ಗಿ ಜನ, ಜಾನುವಾರುಗಳ ಮೇಲೆ ದಾಳಿ ನಡೆಸುವ ಪರಿಸ್ಥಿತಿ ಬಂದಿರುವುದರಿಂದ ಮನುಷ್ಯರಾದ ನಾವು ಚಿರತೆಗಳ ಜೊತೆಯಲ್ಲಿ ಹೊಂದಿಕೊಂಡು ವಾಸಿಸಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಹೇಳಿದರು.ಕಾಡು ಮತ್ತು ನಾಡು ಸಮ ಪ್ರಮಾಣದಲ್ಲಿ ಇರಬೇಕು. ಕಾಡಿನ ಪ್ರಮಾಣ ಕಡಿಮೆಯಾದರೆ ಅದರಿಂದ ವಾತವಾರಣದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ, ಅರಣ್ಯ ನಾಶದಿಂದ ಮಳೆಯ ಪ್ರಮಾಣ ವರ್ಷ ವರ್ಷ ಕಡಿಮೆಯಾಗುತ್ತಿದೆ. ನಾವುಗಳು ಚೆನ್ನಾಗಿ ಬದುಕಬೇಕೆಂದರೆ ಪರಿಸರ, ಅರಣ್ಯ, ಗಿಡ ಮರಗಳು ಅತ್ಯವಶ್ಯಕವಾಗಿದೆ, ನಮ್ಮ ಮುಂದಿನ ಪೀಳಿಗೆಗೆ ಪರಿಸರವನ್ನು ಉಳಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದು ಶಾಸಕರು ತಿಳಿಸಿದರು.ಕೊರೋನಾ ಸಮಯದಲ್ಲಿ ಮನುಷ್ಯರು ಮನೆಯಿಂದ ಆಚೆ ಬರುತ್ತಿರಲಿಲ್ಲ, ಆ ಸಮಯದಲ್ಲಿ ಚಿರತೆ, ಕರಡಿಯಂತಹ ಕಾಡು ಪ್ರಾಣಿಗಳು ಸ್ವಚ್ಛಂದವಾಗಿ ತಿರುಗಾಡುತ್ತಿದ್ದು, ಅವುಗಳ ಸಂತತಿ ತಾಲೂಕಿನಲ್ಲಿ ಬಹಳಷ್ಟು ಹೆಚ್ಚಾಗಿತ್ತು. ನಾಯಿಗಳಿಗಿಂತ ಚಿರತೆಗಳ ಸಂಖ್ಯೆ ನಮ್ಮ ಭಾಗದಲ್ಲಿ ಹೆಚ್ಚಾಗಿವೆ, ಕಾಡು ಪ್ರಾಣಿಗಳು ಅವುಗಳ ಪಾಡಿಗೆ ಅವು ಇರುತ್ತವೆ, ಮನುಷ್ಯ ಅದರ ತಂಟೆಗೆ ಹೋದಾಗ ಮಾತ್ರ ದಾಳಿ ಮಾಡುತ್ತವೆ ಎಂದ ಅವರು, ಗ್ರಾಮೀಣ ಭಾಗದ ಕಾಡಂಚಿನಲ್ಲಿ ವಾಸಿಸುವ ವೃದ್ಧರು, ಆಶಕ್ತರು ಬಹಳ ಜಾಗರೂಕತೆಯಿಂದ ಇರಬೇಕು ಎಂದು ತಿಳಿಸಿದರು. ಅರಣ್ಯ, ಕಾಡು ಪ್ರಾಣಿಗಳು, ಪರಿಸರ ನಮಗೆ ಅತ್ಯವಶ್ಯಕವಾಗಿರುವುದರಿಂದ ಇವುಗಳ ಸಂರಕ್ಷಣೆಯ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಶಾಲೆಗಳಿಗೆ ತೆರಳಿ ಅರಣ್ಯ ಸಂರಕ್ಷಣೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ಚರ್ಚಾ ಸ್ವರ್ಧೆಯನ್ನು ಏರ್ಪಡಿಸಬೇಕು. 8ನೇ ತರಗತಿಯ ವಿದ್ಯಾರ್ಥಿಗಳನ್ನು ಬನ್ನೇರುಘಟ್ಟ, ಸಾವನದುರ್ಗ ಮುಂತಾದ ಪ್ರವಾಸಿ ತಾಣಗಳಿಗೆ ಕರೆದುಕೊಂಡು ಹೋಗಿ ಅರಣ್ಯ, ಕಾಡು ಪ್ರಾಣಿಗಳ ಬಗ್ಗೆ ಮಾಹಿತಿ ನೀಡಬೇಕು ಎಂದು ಶಾಸಕರು ಅಧಿಕಾರಿಗಳಿಗೆ ಸೂಚನೆ ನೀಡಿದರು.ಅರಣ್ಯ ಸಚಿವ ಈಶ್ವರಖಂಡ್ರೆ ಅವರು ಮಾಗಡಿಗೆ ಭೇಟಿ ನೀಡಿದ್ದ ವೇಳೆ ₹ 1 ಕೋಟಿ ರು. ಅನುದಾನ ನೀಡುತ್ತೇನೆಂದು ಭರವಸೆ ನೀಡಿದ್ದು, ಈ ಅನುದಾನದಲ್ಲಿ ಸಾವನದುರ್ಗವನ್ನು ಪ್ರವಾಸಿ ತಾಣವನ್ನಾಗಿಸಲು ನೀಲಿ ನಕ್ಷೆ ತಯಾರಿಸಬೇಕು, ಉಳಿದ ಅನುದಾನವನ್ನು ಮಂಜೂರು ಮಾಡಿಸುತ್ತೇನೆ ಎಂದು ಎಚ್.ಸಿ.ಬಾಲಕೃಷ್ಣ ಭರವಸೆ ನೀಡಿದರು.ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಮಕೃಷ್ಣಪ್ಪ ಮಾತನಾಡಿ, ರಾಜ್ಯದಲ್ಲಿರುವ 56 ಕಾಡು ಪ್ರಾಣಿಗಳ ದಿನಾಚರಣೆಯನ್ನು ಪ್ರತಿ ವರ್ಷ ಮೇ 3 ರಂದು ಅರಣ್ಯ ಇಲಾಖೆ ವತಿಯಿಂದ ಆಚರಿಸುತ್ತಿದ್ದು, ಜಿಲ್ಲೆಯ ತಾಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಚಿರತೆಗಳಿರುವುದರಿಂದ ಮಾಗಡಿಯಲ್ಲಿ ಅಂತಾರಾಷ್ಟ್ರೀಯ ಚಿರತೆ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ರಾಮನಗರದ ರಾಮದೇವರ ಬೆಟ್ಟ ರಣಹದ್ದುಗಳ ವನ್ಯಜೀವಿ ಧಾಮಗಾಗಿದೆ. ವಿದ್ಯಾರ್ಥಿಗಳು ಆಸಕ್ತಿ ತೋರಿದರೆ ಅರಣ್ಯ ಇಲಾಖೆ ವತಿಯಿಂದ ಅವರನ್ನು ರಾಮದೇವರಬೆಟ್ಟಕ್ಕೆ ಕರೆದುಕೊಂಡು ಹೋಗಿ ರಣಹದ್ದುಗಳ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗುವುದು ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ವಲಯ ಅರಣ್ಯಾಧಿಕಾರಿ ಮಹಮ್ಮದ್ ಮುನ್ಸೂರು, ಚನ್ನಪಟ್ಟಣ ವಲಯ ಅರಣ್ಯಾಧಿಕಾರಿ ಮಲ್ಲೇಶ್, ಮಾಗಡಿ ಸಾಮಾಜಿಕ ವಲಯ ಪ್ರಾದೇಶಿಕ ಅರಣ್ಯಾಧಿಕಾರಿ ಕೆ.ಪಿ.ಮಂಜುನಾಥ್, ಸಾಮಾಜಿಕ ವಲಯ ಅರಣ್ಯಾಧಿಕಾರಿ ಚೈತ್ರ, ಹಂಚಿಕುಪ್ಪೆ ಗ್ರಾ.ಪಂ ಅಧ್ಯಕ್ಷೆ ಶಿಲ್ಪ, ಅಂಜಿನಪ್ಪ ಮತ್ತಿತರರು ಭಾಗವಹಿಸಿದ್ದರು.