9ರಂದು ಚಿಕ್ಕಮಗಳೂರಿನಲ್ಲಿ ಬೃಹತ್ ರೈತ ಸಮಾವೇಶ:

KannadaprabhaNewsNetwork |  
Published : Jun 05, 2025, 01:25 AM IST
ನರಸಿಂಹರಾಜಪುರ ಬಸ್ತಿಮಠದ ಮಹಾ ವೀರಭವನದಲ್ಲಿ ಮಲೆನಾಡು ನಾಗರೀಕ ರೈತ ಹಿತ ರಕ್ಷಣಾ ಸಮಿತಿ ಶೃಂಗೇರಿ ಕ್ಷೇತ್ರ ಮಟ್ಟದ ಅಧ್ಯಕ್ಷ ಎಂ.ಎನ್.ನಾಗೇಶ್ ರೈತ ಸಮಾವೇಶದ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿದರು.  | Kannada Prabha

ಸಾರಾಂಶ

ನರಸಿಂಹರಾಜಪುರ, ಜಿಲ್ಲಾ ನಾಗರಿಕ ಮತ್ತು ರೈತ ಹೋರಾಟ ಸಮಿತಿ, ಕರ್ನಾಟಕ ಬೆಳೆಗಾರರ ಒಕ್ಕೂಟ, ಮಲೆನಾಡು ನಾಗರಿಕ ರೈತ ಹಿತ ರಕ್ಷಣಾ ಸಮಿತಿ ನೇತೃತ್ವದಲ್ಲಿ ಜೂ.9 ರಂದು ಚಿಕ್ಕಮಗಳೂರಿನಲ್ಲಿ ಬೃಹತ್ ರೈತ ಸಮಾವೇಶ ನಡೆಯಲಿದೆ ಎಂದು ಮಲೆನಾಡು ನಾಗರಿಕ ರೈತ ಹಿತ ರಕ್ಷಣಾ ಸಮಿತಿ ಶೃಂಗೇರಿ ಕ್ಷೇತ್ರ ಅಧ್ಯಕ್ಷ ಎಂ.ಎನ್.ನಾಗೇಶ್ ತಿಳಿಸಿದರು.

- ಪ್ರತಿಯೊಬ್ಬ ರೈತರು ಭಾಗವಹಿಸಬೇಕು: ಎಂ.ಎನ್. ನಾಗೇಶ್ ಮನವಿ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಜಿಲ್ಲಾ ನಾಗರಿಕ ಮತ್ತು ರೈತ ಹೋರಾಟ ಸಮಿತಿ, ಕರ್ನಾಟಕ ಬೆಳೆಗಾರರ ಒಕ್ಕೂಟ, ಮಲೆನಾಡು ನಾಗರಿಕ ರೈತ ಹಿತ ರಕ್ಷಣಾ ಸಮಿತಿ ನೇತೃತ್ವದಲ್ಲಿ ಜೂ.9 ರಂದು ಚಿಕ್ಕಮಗಳೂರಿನಲ್ಲಿ ಬೃಹತ್ ರೈತ ಸಮಾವೇಶ ನಡೆಯಲಿದೆ ಎಂದು ಮಲೆನಾಡು ನಾಗರಿಕ ರೈತ ಹಿತ ರಕ್ಷಣಾ ಸಮಿತಿ ಶೃಂಗೇರಿ ಕ್ಷೇತ್ರ ಅಧ್ಯಕ್ಷ ಎಂ.ಎನ್.ನಾಗೇಶ್ ತಿಳಿಸಿದರು.

ಬುಧವಾರ ಪಟ್ಟಣದ ಬಸ್ತಿಮಠದ ಮಹಾ ವೀರ ಭವನದಲ್ಲಿ ಬೃಹತ್ ರೈತ ಸಮಾವೇಶದ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈಗಾಗಲೇ ಮಲೆನಾಡಿನಲ್ಲಿ ರೈತ ಮತ್ತು ಅರಣ್ಯ ಇಲಾಖೆ ನಡುವೆ ಇರುವ ಸಂಘರ್ಷ ತಪ್ಪಿಸಿ ಮಲೆನಾಡಿನ ಜನಜೀವನ ಉಳಿಸುವಂತೆ ಒತ್ತಾಯಿಸಿ ರೈತ ಸಮಾವೇಶ ಹಮ್ಮಿಕೊಂಡಿದ್ದೇವೆ. ಜೂ.9 ರಂದು ಬೆಳಿಗ್ಗೆ 10.30 ಗಂಟೆಗೆ ಚಿಕ್ಕಮಗಳೂರು ತಾಲೂಕು ಕಚೇರಿಯಿಂದ ಆಜಾದ್ ಪಾರ್ಕ್ ವರೆಗೆ ಮೆರವಣಿಗೆ ನಡೆಯಲಿದೆ. ಆಜಾದ್ ಪಾರ್ಕನಲ್ಲಿ ಬೃಹತ್ ರೈತ ಸಮಾವೇಶ ನಡೆಯಲಿದೆ. ಸಮಾವೇಶದಲ್ಲಿ ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ.ಪ್ರಾಣೇಶ್, ಸಂಸದ ಕೋಟಾ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್ ಸದಸ್ಯರಾದ ಸಿ.ಟಿ.ರವಿ, ಎಸ್.ಎಲ್‌.ಬೋಜೇಗೌಡ, ಜಿಲ್ಲೆಯ ಎಲ್ಲಾ ಶಾಸಕರು ಭಾಗವಹಿಸಲಿದ್ದಾರೆ ಎಂದರು.

ಅಲ್ಲದೆ ರೈತ ಸಂಘಟನೆ ಎಲ್ಲಾ ಮುಖಂಡರು ಭಾಗವಹಿಸಲಿದ್ದಾರೆ. ಸಮಾವೇಶದಲ್ಲೇ ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಘೋಷಣೆ ಮಾಡಬೇಕು ಎಂಬುದು ನಮ್ಮ ಆಗ್ರಹವಾಗಿದೆ. ಜಿಲ್ಲೆಯ ಎಲ್ಲಾ ತಾಲೂಕಿನಿಂದಲೂ ರೈತರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಶೃಂಗೇರಿ ಕ್ಷೇತ್ರ ಹಾಗೂ ಖಾಂಡ್ಯ ಹೋಬಳಿಯಿಂದ 2,500 ರೈತರು, ನಾಗರಿಕರು ಭಾಗವಹಿಸುವ ನಿರೀಕ್ಷೆ ಇದೆ. ರೈತರ ಹೋರಾಟದಲ್ಲಿ ಎಲ್ಲಾ ರಾಜಕೀಯ ಪಕ್ಷದವರು, ವಿವಿಧ ಸಂಘ ಸಂಸ್ಥೆಗಳು, ಮಹಿಳೆಯರು ಭಾಗವಹಿಸಲಿದ್ದಾರೆ. ಪ್ರತಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ರೈತರಿಗೆ ಈ ಸಮಾವೇಶ ಬಗ್ಗೆ ಮಾಹಿತಿ ನೀಡಬೇಕು ಎಂದು ಮನವಿ ಮಾಡಿದರು.

ಜೂನ್ 5 ರ ಬೆಳಿಗ್ಗೆ 10.30ಕ್ಕೆ ಶೃಂಗೇರಿ ಕನ್ನಡ ಭವನದಲ್ಲಿ ಪೂರ್ವಬಾವಿ ಸಭೆ ನಡೆಯಲಿದೆ. ಅದೇ ದಿನ ಮದ್ಯಾಹ್ನ 4 ಗಂಟೆಗೆ ಕೊಪ್ಪ ಪುರಭವನದಲ್ಲಿ ಪೂರ್ವಭಾವಿ ಸಭೆ ನಡೆಯಲಿದ್ದು ಎಲ್ಲಾ ರಾಜಕೀಯ ಪಕ್ಷಗಳ, ರೈತರ ಹಾಗೂ ಸಂಘ ಸಂಸ್ಥೆಗಳ ಮುಖಂಡರು ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಮಲೆನಾಡು ನಾಗರಿಕ ರೈತ ಹಿತ ರಕ್ಷಣಾ ಸಮಿತಿಯ ತಾ.ಕಾರ್ಯದರ್ಶಿ ಗಡಿಗೇಶ್ವರ ರತ್ನಾಕರ, ಶೃಂಗೇರಿ ಕ್ಷೇತ್ರ ಉಪಾಧ್ಯಕ್ಷ ನವೀನ್ ಕರಗಣೆ, ಸಮಿತಿ ಮುಖಂಡರಾದ ಎಚ್‌.ಡಿ. ಲೋಕೇಶ್,ಎನ್‌.ಡಿ.ಪ್ರಸಾದ್, ಅರುಣ್ ಜೈನ್, ಕಾರ್ತಿಕ್, ಕೌಸಿಕ್,ಮದನ್ ಇದ್ದರು.

-- ಬಾಕ್ಸ್ --

ಅರ್ಜಿಗಳಿಗೆ ಸಾಗುವಳಿ ಚೀಟಿ

ಮುಖ್ಯವಾಗಿ ಮಲೆನಾಡಿನ ಸಮಸ್ಯೆಯಾದ ನಮೂನೆ 57 ರಲ್ಲಿ ಪಡೆದಿರುವ ಅರ್ಜಿಗಳಿಗೆ ಸಾಗುವಳಿ ಚೀಟಿ ನೀಡಬೇಕು. ಡೀಮ್ಡ್ ಫಾರೆಸ್ಟ್ ಪರಿಸ್ಕೃತ ಪಟ್ಟಿ ತಯಾರಿಸುವಾಗ ಗ್ರಾಪಂ ಮೂಲಕ ಪ್ರಚಾರ ಪಡಿಸಿ ರೈತರ ಹಾಗೂ ಗ್ರಾಮಸ್ಥರ ಗಮನಕ್ಕೆ ತರಬೇಕು. ಸೆಕ್ಷನ್ 4 (1) ಪ್ರಸ್ತಾವನೆಯಲ್ಲಿರುವ ಎಲ್ಲಾ ರೈತರ ಜಮೀನು, ಮನೆ, ಗ್ರಾಮ ,ಶಾಲಾ ಕಾಲೇಜು, ಆಟದ ಮೈದಾನ, ಆಸ್ಪತ್ರೆ, ಸ್ಮಶಾನ, ಆಶ್ರಯ ನಿವೇಶನಕ್ಕೆ ಮತ್ತು ಇತರೆ ಅಭಿವೃದ್ದಿ ಕಾರ್ಯಗಳಿಗೆ ಜಾಗ ಮೀಸಲಿಡಬೇಕು .ನಗರಕ್ಕೆ ಹೊಂದಿಕೊಂಡಿರುವ ನಗರಾಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಗೆ ಸೇರಿದ ಜಾಗವನ್ನು ಸೆಕ್ಷನ್ 4 (1) ಮೀಸಲು ಅರಣ್ಯ ಪ್ರಸ್ತಾವನೆಯಿಂದ ಕೈ ಬಿಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಇಟ್ಟು ಬೃಹತ್ ರೈತ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಎಂ.ಎನ್‌.ನಾಗೇಶ್‌ ವಿವರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಾಕಿ ಲಕ್ಷ್ಮಿ ಶನಿವಾರದೊಳಗೆ ಮಹಿಳೆಯರ ಬ್ಯಾಂಕ್‌ ಖಾತೆಗೆ
ರಾಜಣ್ಣ ಸಿಎಂಗಷ್ಟೇ ಅಲ್ಲ, ನನಗೂ ಪರಮಾಪ್ತ: ಡಿಕೆಶಿ