- ಬೀರೂರಿನ ಪೊಲೀಸ್ ಸ್ಟೇಷನ್ ಮುಂಭಾಗದ ನಾಡಕಚೇರಿ
ಕನ್ನಡಪ್ರಭ ವಾರ್ತೆ,ಬೀರೂರುಹಲವಾರು ವರ್ಷಗಳಿಂದ ನಾಡಕಚೇರಿ ಕಟ್ಟಡ ಸೋರುತ್ತಿರುವ ಜೊತೆ ಯಾವುದೇ ಮೂಲಭೂತ ಸೌಕರ್ಯಗಳು ಇಲ್ಲದೆ ನಲುಗುತ್ತಿದೆ ಎಂಬ ನಾಗರಿಕರು ಮತ್ತು ಸಾರ್ವಜನಿಕರ ಅಹವಾಲಿನ ಮೇಲೆ ಚಿಕ್ಕಮಗಳೂರು ಅಪರ ಜಿಲ್ಲಾಧಿಕಾರಿ ನಾರಾಯಣ ರಡ್ಡಿ ಕನಕ ರಡ್ಡಿ ಶನಿವಾರ ಪಟ್ಟಣದ ನಾಡಕಛೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ನಂತರ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಈ ಹಿಂದೆ ತಾಲೂಕು ಪಂಚಾಯ್ತಿ ಅಧೀನದಲ್ಲಿದ್ದ ಈ ಜಾಗ ಮುಸಾಫರ್ ಖಾನ್ ಎಂದು ನೋಂದಣಿಯಾಗಿದೆ. ಈ ಕಟ್ಟಡದಲ್ಲಿ ಅನೇಕ ಇಲಾಖೆಗಳು ಕಾರ್ಯನಿರ್ವಹಿಸಿ ಸದ್ಯ ಕಂದಾಯ ಇಲಾಖೆ ನಾಗರಿಕರ ಬಹುಬೇಡಿಕೆಯ ನಾಡಕಚೇರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಹೃದಯ ಭಾಗದಲ್ಲಿರುವ ಈ ಕಚೇರಿ ಹಳೆಯದಾಗಿದ್ದು, ಮೇಲ್ಚಾವಣಿ ಸೋರುತ್ತಿರುವುದನ್ನು ಪರಿಶೀಲಿಸಿದ್ದೇನೆ. ತಾಲೂಕು ಪಂಚಾಯ್ತಿಯವರು ಈ ಜಾಗವನ್ನು ಕಂದಾಯ ಇಲಾಖೆಗೆ ಹಸ್ತಾಂತರಿಸಿರುವ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಅಧಿಕಾರಿಗಳು ಶೀಘ್ರದಲ್ಲೇ ಸರ್ವೇ ಇಲಾಖೆ ಕರೆಯಿಸಿ ಮೊದಲು ನಮಗೆ ಸೇರಬೇಕಾದ ಜಾಗದ ಅಳತೆ ಮಾಡಿ, ನೂತನ ಕಟ್ಟಡ ನಿರ್ಮಾಣದ ನೀಲಿನಕ್ಷೆ ತಯಾರು ಮಾಡಿಕೊಟ್ಟರೆ ಶೀಘ್ರ ಹೊಸ ನಾಡಕಚೇರಿ ತಲೆ ಎತ್ತಲಿದೆ ಎಂದು ಮಾಹಿತಿ ನೀಡಿದರು.ಉಪತಹಸೀಲ್ದಾರ್ ಮಲ್ಲಿಕಾರ್ಜುನ್ ಮಾತನಾಡಿ, ಈ ಕಚೇರಿ ದುರಸ್ತಿ ಬಗ್ಗೆ ಸಾರ್ವಜನಿಕರು ಸೇರಿದಂತೆ ಅನೇಕರು ಇಲ್ಲಿನ ಕಟ್ಟಡದ ಪರಿಸ್ಥಿತಿ ಬಗ್ಗೆ ಪತ್ರ ವ್ಯವಹಾರದ ಮೂಲಕ ದೂರು ಸಲ್ಲಿಸಿದ ಹಿನ್ನಲೆಯಲ್ಲಿ ಅಪರ ಜಿಲ್ಲಾಧಿಕಾರಿ ಸ್ಥಳ ಪರಿಶೀಲನೆಗೆ ಆಗಮಿಸಿದ್ದು ಉತ್ತಮ ಮೂಲ ಸೌಲಭ್ಯ ಹೊಂದಿರುವ ಕಟ್ಟಡ ನಿರ್ಮಾಣವಾದರೇ ನಾವು ಕೂಡ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಬಹುದು ಎಂದರು.ಕಂದಾಯ ಅಧಿಕಾರಿ ಶ್ರೀನಿವಾಸ್ ಮಾತನಾಡಿ, ಕಡೂರು ತಾಲೂಕಿನ ಎಲ್ಲೆಡೆ ನಾಡಕಚೇರಿಗಳು ಹೊಸ ರೂಪ ಪಡೆದಿದ್ದು, ನಮ್ಮದು ಮಾತ್ರ ಹಳೆ ಕಟ್ಟಡದಲ್ಲೇ ಕುಂಟುಂತಾ ಸಾಗಿದೆ. ಸದ್ಯ ಇದಕ್ಕೂ ಸಹ ಮುಕ್ತಿ ಸಿಕ್ಕಿ ಹೊಸ ಕಟ್ಟಡದ ಕನಸು ನನಸಾಗುತ್ತಿರುವುದು ಸಂತಸ ತಂದಿದೆ. ಸಾರ್ವಜನಿಕರ ಸಹಕಾರದಿಂದ ಇವೆಲ್ಲಕ್ಕೂ ಸಾಧ್ಯವಾಗಿದೆ ಎಂದರು.ದಲಿತ ಸಂಘಟನೆ ಮುಖಂಡ ಬಿ.ಟಿ.ಚಂದ್ರಶೇಖರ್ ಮಾತನಾಡಿ, ನಮ್ಮಲಿರುವ ನಾಡಕಚೇರಿ ದುರಸ್ತಿ , ಹೊಸ ಕಟ್ಟಡ ನಿರ್ಮಾಣಕ್ಕೆ ಬಗ್ಗೆ ಹಲವಾರು ಸಭೆಗಳಲ್ಲಿ, ತಾಪಂ ಅಧಿಕಾರಿಗಳ ಗಮನಕ್ಕೆ ತಂದ ನಂತರ ಈ ಹೊಸ ಕಾರ್ಯಕ್ಕೆ ಮುನ್ನುಡಿ ಯಾಗಿದೆ. ತಮ್ಮ ಪ್ರಯತ್ನಕ್ಕೆ ಫಲತಂದಿದೆ ಎಂದರು.ನಾಡಕಚೇರಿ ಸಹಾಯಕ ಗಿರೀಶ್, ಸಾರ್ವಜನಿಕರು, ಸೇರಿದಂತೆ ಮತ್ತಿತರರು ಇದ್ದರು.9 ಬೀರೂರು 1ಬೀರೂರಿನ ನಾಡಕಛೇರಿಗೆ ಶನಿವಾರ ಚಿಕ್ಕಮಗಳೂರು ಅಪರ ಜಿಲ್ಲಾಧಿಕಾರಿ ನಾರಾಯಣ ಕನಕ ರೆಡ್ಡಿ ಕಟ್ಟಡವನ್ನು ಪರಿಶೀಲನೆ ನಡೆಸಿದರು. ಡಿಟಿ ಮಲ್ಲಿಕಾರ್ಜುನ್, ಶ್ರೀನಿವಾಸ್ , ಗಿರೀಶ್ ಸೇರಿದಂತೆ ಮತ್ತಿತರರು ಇದ್ದರು.