ಯಾವುದೇ ಅಭ್ಯಾಸಗಳು ಆಕಸ್ಮಿಕವಾಗಿ, ಅನಾವಶ್ಯಕವಾಗಿ ಪ್ರಾರಂಭವಾಗುತ್ತದೆ. ಬದುಕು ಹಾಳು ಮಾಡಿಕೊಳ್ಳಬೇಕೆಂಬ ಭಾವನೆಯಿಂದ ಯಾರು ದುಶ್ಚಟಗಳನ್ನು ಮಾಡುವುದಿಲ್ಲ. ಬದಲಿಗೆ ಸುಖ, ಸಂತೋಷ, ಧೈರ್ಯ, ಕೆಲಸ ಮುಂತಾದ ವಿಚಾರಗಳನ್ನು ಸಾಧಿಸಬಹುದೆಂಬ ಭ್ರಮೆಯಿಂದ ಚಟಕ್ಕೆ ಬಲಿ ಬೀಳುತ್ತಾರೆ. ಆಧ್ಯಾತ್ಮದ ಒಲವು ಭಕ್ತಿ ಪಥದಲ್ಲಿ ಮುನ್ನಡೆದಾಗ ವ್ಯಸನಗಳು ಬಾಧಿಸುವುದಿಲ್ಲ ಎಂದು ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಧಾರ್ಮಿಕವಾಗಿ ಬದುಕುವವರು ಸ್ವಾಭಾವಿಕವಾಗಿ ಸಾತ್ವಿಕರಾಗುತ್ತಾರೆ. ಆಧ್ಯಾತ್ಮಿಕ ಚಿಂತನೆಗಳಿಂದ ಅತ್ಯುತ್ತಮ ವ್ಯಕ್ತಿತ್ವವನ್ನು ಸಾಧಿಸುತ್ತಾರೆ. ಆದುದರಿಂದ ಭಕ್ತಿ ಪಥದಲ್ಲಿ ಮುನ್ನಡೆದು ದುಶ್ಚಟಗಳನ್ನು ತ್ಯಜಿಸಿ ಸಂಸಾರದೊಂದಿಗೆ ಸಮಾಜದಲ್ಲಿ ನೆಮ್ಮದಿಯಿಂದ ಬಾಳಿ ಬದುಕಬಹುದು ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯ ನಿರ್ವಾಹಕ ನಿರ್ದೇಶಕ ಡಾ. ಎಲ್. ಹೆಚ್ ಮಂಜುನಾಥ್, ಅಹಂಕಾರವೇ ವ್ಯಸನಕ್ಕೆ ಪ್ರಮುಖ ಕಾರಣ ಈ ವ್ಯಸನವು ಕುಟುಂಬ, ತನ್ನೊಳಗಿನ ವಿಶ್ವಾಸ, ಭರವಸೆ, ಬದುಕಲು ನಿರ್ನಾಮ ಮಾಡುವುದರ ಜೊತೆಗೆ ನಮ್ಮ ಅಸ್ತಿತ್ವವನ್ನೇ ಇಲ್ಲದಾಗಿಸುತ್ತದೆ. ಇದನ್ನು ಅರ್ಥ ಮಾಡಿಕೊಂಡು ದೇವರಲ್ಲಿ ಅನುಸಂಧಾನ, ಕುಟುಂಬದಲ್ಲಿ ಒಡನಾಟ, ಮಕ್ಕಳಲ್ಲಿ ಪ್ರೀತಿ, ಗುರುಹಿರಿಯರಿಗೆ ಗೌರವ ಹೊಂದುತ್ತಾ ಬದಲಾಗಬೇಕು ಎಂದರು.ಈ ವಿಶೇಷ 8 ದಿನದ ಶಿಬಿರದಲ್ಲಿ ರಾಜ್ಯಾದ್ಯಂತ 76 ಶಿಬಿರಾರ್ಥಿಗಳು ಭಾಗವಹಿಸಿರುತ್ತಾರೆ. ಕೆ.ಎಸ್ ಹೆಗ್ಡೆ ಆಸ್ಪತ್ರೆಯ ಡಾ. ಶ್ರೀನಿವಾಸ್ ಭಟ್ ನೇತೃತ್ವದಲ್ಲಿ ಮನೋವೈದ್ಯಕೀಯ ಚಿಕಿತ್ಸೆ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸೆಯ ಮೂಲಕ ಯೋಗ ಮತ್ತು ದೈಹಿಕ ಚಟುವಟಿಕೆಗಳು, ಸಲಹಾ ಕಾರ್ಯಕ್ರಮ, ಸಾಂಸ್ಕೃತಿಕ, ಉಪಯುಕ್ತ ವಿಡಿಯೋ ಪ್ರದರ್ಶನ, ವಿಷಯಾಧಾರಿತ ಪ್ರವಚನ, ನವಜೀವನ ಸಮಿತಿ ಸದಸ್ಯರ ಅನಿಸಿಕೆ, ಆತ್ಮಾವಲೋಕನ, ಕುಟುಂಬದ ದಿನ ಮುಂತಾದ ಕಾರ್ಯಕ್ರಮಗಳ ಮೂಲಕ ಮನಪರಿವರ್ತನೆಗೆ ಆದ್ಯತೆ ನೀಡಲಾಗಿದೆ. ಕಾರ್ಯಕ್ರಮದಲ್ಲಿ ಜನಜಾಗೃತಿ ವೇದಿಕೆ ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿ. ಪಾೈಸ್, ಯೋಜನಾಧಿಕಾರಿ ಮಾಧವ ಗೌಡ, ಶಿಬಿರಾಧಿಕಾರಿ ದೇವಿಪ್ರಸಾದ್ ಸುವರ್ಣ, ಚಿತ್ತರಂಜನ್, ಆರೋಗ್ಯ ಸಹಾಯಕರಾದ ನೇತ್ರಾವತಿ, ರಂಜನಾ ಸಣ್ಣಕ್ಕಿ ಸಹಕರಿಸಿರುತ್ತಾರೆ. ಮುಂದಿನ ವಿಶೇಷ ಶಿಬಿರವು 2024ರ ಮೇ 5 ರಂದು ನಡೆಯಲಿದೆ ಎಂದು ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿ. ಪಾಯಸ್ ತಿಳಿಸಿದ್ದಾರೆ.