ಹುಬ್ಬಳ್ಳಿ: ಧಾರವಾಡದ ಐಐಟಿಗೆ ಕೇಂದ್ರ ಸರ್ಕಾರ ₹2000 ಕೋಟಿ ಹೆಚ್ಚುವರಿ ಹಣ ನೀಡುತ್ತಿದೆ. ದೇಶದ ಎಲ್ಲ ಐಐಟಿಗಳಂತೆ ಇದೂ ಉತ್ತಮ ಅಭಿವೃದ್ಧಿ ಕಾಣುತ್ತದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿಶ್ವಾಸ ವ್ಯಕ್ತಪಡಿಸಿದರು.
ಶಿಕ್ಷಣದಲ್ಲಿ ಇಂದು ಭಾರತ ಮುನ್ನಡೆ ಸಾಧಿಸಿದ್ದು, 23 ಐಐಟಿಗಳನ್ನು ಹೊಂದಿದೆ. ದೇಶದ ಎಲ್ಲ ಐಐಟಿಗಳಂತೆ ಧಾರವಾಡ ಐಐಟಿಯನ್ನೂ ಸಮಗ್ರ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ ಎಂದರು.
ಇಂದಿನ ವಿದ್ಯಾರ್ಥಿ-ಯುವ ಸಮುದಾಯಕ್ಕೆ 21ನೇ ಶತಮಾನದ ಅಗತ್ಯಗಳಿಗೆ ಪೂರಕವಾದಂತಹ ಶಿಕ್ಷಣ ಒದಗಿಸುವ ಗುರಿ ಹೊಂದಿದೆ. ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) 2020 ಒಂದು ಐತಿಹಾಸಿಕ ಶಿಕ್ಷಣ ಸುಧಾರಣಾ ಯೋಜನೆಯಾಗಿದೆ ಎಂದರು.ರಾಷ್ಟ್ರೀಯ ಶಿಕ್ಷಣ ನೀತಿ ಭಾರತವನ್ನು ಜಾಗತಿಕ ಜ್ಞಾನದ ಮಹಾಶಕ್ತಿಯನ್ನಾಗಿ ರೂಪಿಸುವ ಗುರಿ ಹೊಂದಿದೆ. ಶಾಲಾ ಶಿಕ್ಷಣದಿಂದ ಉನ್ನತ ಶಿಕ್ಷಣದ ವರೆಗೆ ಸಮಗ್ರ ಮತ್ತು ಬಹುಶಿಸ್ತಿನ ಶಿಕ್ಷಣವನ್ನು ಒದಗಿಸುತ್ತಿದೆ. ಯುವ ಸಮುದಾಯವನ್ನು ಔದ್ಯೋಗಿಕವಾಗಿ ಮುನ್ನಡೆಸುತ್ತಿದೆ ಎಂದರು.
ಸಮಾರೋಪದಲ್ಲಿ ಧಾರವಾಡ ಐಐಟಿ ಡೀನ್ ಡಾ. ಶಿವಪ್ರಸಾದ ʼಎಜುಕೇಶನ್ ಇನ್ 21 ಸೆಂಚುರಿ'''' ವಿಷಯ ಕುರಿತು ಉಪನ್ಯಾಸ ನೀಡಿದರು.
ಧಾರವಾಡ ವಲಯದ ಕೆಜಿಸಿಟಿಎ ಅಧ್ಯಕ್ಷ ಡಾ. ಮೋತಿಲಾಲ್ ರಾಥೋಡ್, ಕೆಆರ್ಎಂಎಸ್ಎಸ್ ಸಂಸ್ಥಾಪಕ ಅಧ್ಯಕ್ಷ ರಘು ಅಕ್ಕಮಂಚಿ, ಪ್ರಸ್ತುತ ಕೆಆರ್ಎಂಎಸ್ಎಸ್ ಅಧ್ಯಕ್ಷ ಡಾ. ಗುರುನಾಥ ಬಡಿಗೇರ, ಸಂಘಟನಾ ಕಾರ್ಯದರ್ಶಿ ಡಾ. ಸಿ.ವಿ. ಮರಿದೇವರಮಠ ಹಾಗೂ ಮಾಧ್ಯಮಿಕ ಶಿಕ್ಷಕ ಸಂಘದ ಅಧ್ಯಕ್ಷ ಸಂದೀಪ ಬೂದಿಹಾಳ, ಅನುದಾನಿತ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕರು, ಪದಾಧಿಕಾರಿಗಳು ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.