ಹೊಸಕೋಟೆ: ಹೊಸಕೋಟೆ ನಗರದ ಸಮಗ್ರ ಅಭಿವೃದ್ಧಿಗಾಗಿ 93.06 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದು, ಮುಂದಿನ ದಿನಗಳಲ್ಲಿ ಹೆಚ್ಚುವರಿ 50 ಕೋಟಿ ಅನುದಾನ ನೀಡುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.
ಪರಿಶಿಷ್ಟ ಜಾತಿ ಕಾಲೋನಿಗಳಲ್ಲಿ 2.5 ಕೋಟಿ ವೆಚ್ಚದಲ್ಲಿ ಸಿಸಿ ರಸ್ತೆ, ರಾಷ್ಟ್ರೀಯ ಹೆದ್ದಾರಿ-85ರ ಡಿಎಲ್ಟಿ ಯೋಜನೆಯಡಿ 3.15 ಕೋಟಿ ವೆಚ್ಚದಲ್ಲಿ ಉಪ್ಪಾರಹಳ್ಳಿ ಭಾಗದಲ್ಲಿ ರಸ್ತೆ ಅಭಿವೃದ್ಧಿ, ನಗರದ ಮನೆಗಳಿಗೆ ಭೂಗತ ವಿದ್ಯುತ್ ಕೇಬಲ್ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ 125 ಕೋಟಿ ವೆಚ್ಚದ ಯುಜಿ ಕೇಬಲ್ ಕಾಮಗಾರಿ, ಹಳೆ ಹೊಸಕೋಟೆಯಲ್ಲಿ ಒಂದು ಸಾವಿರ ವಿದ್ಯುತ್ ಕಂಬಗಳ ಆಳವಡಿಕೆ, ಕೆ.ಆರ್.ರಸ್ತೆ ಉನ್ನತೀಕರಣಕ್ಕೆ ೧.೫ ಕೋಟಿ, ಕೆಇಬಿ ಸರ್ಕಲ್ನಿಂದ ಕಾಲೇಜುವರೆಗಿನ ರಸ್ತೆ, ಚರಂಡಿ ಹಾಗೂ ಪಾದಚಾರಿ ಮಾರ್ಗಗಳ ಅಭಿವೃದ್ಧಿಗೆ 3.5 ಕೋಟಿ ಹಾಗೂ ಗಣಗಲು ರಸ್ತೆ ಅಭಿವೃದ್ಧಿಗೆ 3.5 ಕೋಟಿ ವೆಚ್ಚ ಮಾಡಲಾಗುವುದು ಎಂದು ಹೇಳಿದರು.
ದೊಡ್ಡಕೆರೆ ಹಾಗೂ ದೊಡ್ಡಹುಲ್ಲೂರು ಕೆರೆಯನ್ನು ನೀರು ಸಂಗ್ರಹಣೆಗೆ ಬಳಸಿಕೊಳ್ಳುವ ಕುರಿತು ಯೋಜನೆ ರೂಪಿಸಲಾಗುತ್ತಿದೆ. ಹೊಸಕೋಟೆ ಚಿಂತಾಮಣಿ ರಸ್ತೆಯನ್ನು 1100 ಕೋಟಿ ವೆಚ್ಚದಲ್ಲಿ ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಕುರಿತು ಚರ್ಚೆ ನಡೆಯುತ್ತಿದೆ. ನಗರದಲ್ಲಿ ವಾಹನ ದಟ್ಟಣೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೆ.ಆರ್.ಪುರಂನಿಂದ ಎಂವಿಜೆ ವರೆಗೆ 6 ಪಥದ ಮೇಲ್ಸೇತುವೆ ವಿಸ್ತರಿಸುವ ಕುರಿತು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಚರ್ಚಿಸಲಾಗಿದೆ. ಹೊಸಕೋಟೆಗೆ ಮೆಟ್ರೋ ಸಂಪರ್ಕ ಕಲ್ಪಿಸುವ ಕುರಿತು ಡಿಪಿಆರ್ ಸಿದ್ಧಪಡಿಸಲಾಗಿದೆ ಎಂದು ಹೇಳಿದರು.ನಗರಸಭೆ ಪೌರಾಯಕ್ತ ನೀ ಲೋಚನ ಪ್ರಭು ಮಾತನಾಡಿ, ನಗರದ ಅಭಿವೃದ್ಧಿ ಹಾಗೂ ಮೂಲಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ ಕಳೆದ ವರ್ಷ 45 ಕೋಟಿ ಬಜೆಟ್ ಮಂಡಿಸಲಾಗಿದ್ದು, ಈ ಬಾರಿ 53 ಕೋಟಿ ಬಜೆಟ್ ರೂಪಿಸಲಾಗಿದೆ ಎಂದು ಹೇಳಿದರು.
ಫೋಟೋ: 6 ಹೆಚ್ಎಸ್ಕೆ 1 ಮತ್ತು 2
2: ಹೊಸಕೋಟೆ ನಗರದಲ್ಲಿ ಕೈಗೊಂಡಿರುವ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಶಾಸಕ ಶರತ್ ಬಚ್ಚೇಗೌಡ ಶಿಲಾನ್ಯಾಸ ನೆರವೇರಿಸಿದರು.