ಹನೂರು: ತಾಲೂಕಿನ ಶ್ರೀ ಕ್ಷೇತ್ರ ಮಲೆ ಮಾದೇಶ್ವರ ಬೆಟ್ಟದಲ್ಲಿ ಶನಿವಾರ ಶನೇಶ್ವರ ಜಯಂತಿ ಹಾಗೂ ಅಮಾವಾಸ್ಯೆ ಹಿನ್ನೆಲೆ ಅಪಾರ ಸಂಖ್ಯೆಯ ಭಕ್ತಾದಿಗಳು ಬೆಟ್ಟಕ್ಕೆ ಭೇಟಿ ನೀಡಿ, ಅಧಿಕಮಾಸ, ಅಮಾವಾಸ್ಯೆ ವಿವಿಧ ಪೂಜಾ ಕೈಂಕರ್ಯ ನೆರವೇರಿಸಿದರು. ಕಳೆದ ಎರಡು ದಿನಗಳಿಂದ ರಾಜ್ಯದ ವಿವಿಧ ಜಿಲ್ಲೆಗಳಿಂದ ಅಪಾರ ಸಂಖ್ಯೆಯ ಭಕ್ತಾದಿಗಳು ಹರಿದು ಬಂದ ಹಿನ್ನೆಲೆ ಸರತಿ ಸಾಲಿನಲ್ಲಿ ನಿಂತು ಮಾದಪ್ಪನ ದರ್ಶನ ಪಡೆದು ಪುನೀತರಾದರು. ಬಿಸಿಲ ಬೇಗೆ ಲೆಕ್ಕಿಸದೆ ಮಾದಪ್ಪನ ದರ್ಶನ ಮಾಡುತ್ತಿರುವ ಭಕ್ತಾದಿಗಳು ಹುಲಿವಾಹನ ಉತ್ಸವ, ರುದ್ರಾಕ್ಷಿ ಮಂಟಪೋತ್ಸವ, ಬಸವ ರಥ ಸೇರಿ ವಿವಿಧ ಉತ್ಸವಗಳಲ್ಲಿ ಪಾಲ್ಗೊಂಡರು, ಹರಕೆ ಹೊತ್ತ ಮಾದಪ್ಪನ ಭಕ್ತಾದಿಗಳಿಂದ ಧೂಪದ ಸೇವೆ, ಪಂಜಿನ ಸೇವೆ ಹಾಗೂ ಉರುಳು ಸೇವೆ ಸೇರಿ ವಿವಿಧ ಸೇವೆಗಳನ್ನು ಹಮ್ಮಿಕೊಳ್ಳುವ ಮೂಲಕ ಮಾದೇಶ್ವರನಿಗೆ ಉಘೇ ಉಘೇ ಎಂದು ಜೈಕಾರಗಳನ್ನು ಕೂಗಿದರು.