ಕನ್ನಡಪ್ರಭ ವಾರ್ತೆ ರಾಯಚೂರು
ಶ್ರೀರಾಮಾಯಣದ ಮುಖಾಂತರ ಮನುಕುಲಕ್ಕೆ ಮಾರ್ಗದರ್ಶನ ನೀಡಿದ ಆದಿಕವಿ ಶ್ರೀಮಹರ್ಷಿ ವಾಲ್ಮೀಕಿ ಅವರು ತಿಳಿಸಿದ ಜೀವನ ಮೌಲ್ಯಗಳನ್ನು ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಂಸದ ಜಿ.ಕುಮಾರ ನಾಯಕ ನುಡಿದರು.ಸ್ಥಳೀಯ ಆಶಾಪೂರು ರಸ್ತೆಯ ವಾಲ್ಮೀಕಿ ಭವನದಲ್ಲಿ ಜಿಲ್ಲಾಡಳಿತ, ಜಿಪಂ, ಪರಿಶಿಷ್ಠ ವರ್ಗಗಳ ಕಲ್ಯಾಣ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಇವರಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಂಗಳವಾರ ಅವರು ಮಾತನಾಡಿದರು. ವಾಲ್ಮೀಕಿ ರಾಮಾಯಣ ಗ್ರಂಥದರಲ್ಲಿರುವ ಸಂದೇಶಗಳು ಸದಾಕಾಲ ಪ್ರಸ್ತುತ ಎಂದರು.
ಮಹರ್ಷಿ ವಾಲ್ಮೀಕಿ ಕೇವಲ ಒಂದು ಸಮುದಾಯಕ್ಕೆ ಸೀಮಿತರಾಗಿಲ್ಲ; ಇಡೀ ದೇಶದ, ಜಗತ್ತಿನ ಎಲ್ಲ ಸಮುದಾಯ ಜನತೆ ಮೆಚ್ಚುವ ಮಹಾನ್ ವ್ಯಕ್ತಿಯಾಗಿದ್ದಾರೆ, ನಾವು ಇತಿಹಾಸ ಅರಿಯಬೇಕು. ಅಂದಾಗ ಮಾತ್ರ ಹೊಸ ಇತಿಹಾಸ ನಿರ್ಮಿಸಲು ಸಾಧ್ಯವಾಗಲಿದೆ ಎಂದ ಸಂಸದರು, ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ ರಾಯಚೂರು ನಗರಕ್ಕೆ ಹೆಮ್ಮೆ ಅನಿಸಿದ್ದು, ವಿಶ್ವವಿದ್ಯಾಲಯಕ್ಕೆ ವಾಲ್ಮೀಕಿಯವರ ಹೆಸರನ್ನು ನಾಮಕರಣ ಮಾಡಿದ ರಾಜ್ಯ ಸರ್ಕಾರಕ್ಕೆ ತಾವು ಅಭಿನಂದಿಸುವುದಾಗಿ ಹೇಳಿದರು.ರಾಯಚೂರಿನ ವಾಲ್ಮೀಕಿ ಭವನದ ಅಭಿವೃದ್ಧಿಗೆ 50 ಲಕ್ಷ ರೂ.ಅನುದಾನವನ್ನು ಸಂಸದರ ನಿಧಿಯಿಂದ ನೀಡುವುದಾಗಿ ಸಂಸದರು ತಿಳಿಸಿದರು. ಸ್ಥಳೀಯ ಶಾಸಕ ಡಾ.ಶಿವರಾಜ ಪಾಟೀಲ್ ಮಾತನಾಡಿ, ಮಹರ್ಷಿ ವಾಲ್ಮೀಕಿ ಜಗತ್ತಿನ ಮೊದಲ ಕವಿ. ಸುಮಾರು 12 ಸಾವಿರ ವರ್ಷಗಳ ಹಿಂದೆ ರಾಮಾಯಣ ಬರೆದು ಸಂಬಂಧ ಗಳ ಮಹತ್ವವನ್ನು ತಿಳಿಸಿಕೊಟ್ಟಿದ್ದಾರೆ. ರಾಯಚೂರು ಭಾಗದಲ್ಲೂ ಪರಿಶಿಷ್ಟ ವರ್ಗದ ಜನರ ಕೊಡುಗೆ ಅಪಾರವಾಗಿದೆ. ವಾಲ್ಮೀಕಿ ಅವರ ತತ್ವಾದರ್ಶಗಳಿಂದ ಸಮಾಜದಲ್ಲಿ ಸಮಾನತೆ ನೆಲೆಸಬೇಕು ಎಂದು ತಿಳಿಸಿದರು.
ಸುರಪುರದ ವಿಶ್ರಾಂತ ಪ್ರಾಂಶುಪಾಲ ಪ್ರೊ.ಜೆ.ವೇಣುಗೋಪಾಲ ನಾಯಕ ಅವರು ವಿಶೇಷ ಉಪನ್ಯಾಸ ನೀಡಿದರು.ಪುತ್ಥಳಿಗೆ ಮಾಲಾರ್ಪಣೆ, ಮೆರವಣಿಗೆ:
ವೇದಿಕೆ ಕಾರ್ಯಕ್ರಮಕ್ಕೂ ಪೂರ್ವದಲ್ಲಿ ನಗರದ ಮಹರ್ಷಿ ವಾಲ್ಮೀಕಿ ವೃತ್ತದಲ್ಲಿ ಗಣ್ಯರಿಂದ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು ಬಳಿಕ ಬಸವೇಶ್ವರ ವೃತ್ತ,ಸ್ಟೇಷನ್ ರಸ್ತೆ ಹಾಗೂ ಆಶಾಪುರ ರಸ್ತೆ ಮಾರ್ಗವಾಗಿ ಅದ್ದೂರಿ ಮೆರವಣಿಗೆಯನ್ನು ನಡೆಸಲಾಯಿತು.ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ ಎಂ., ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಶಿವಮಾನಪ್ಪ, ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಚನ್ನಬಸವ ನಾಯಕ, ಮುಖಂಡರಾದ ತಾಯಣ್ಣ ನಾಯಕ, ಮಾರಪ್ಪ ಬುದ್ದಿನ್ನಿ, ರಾಜಾ ಪಾಂಡುರಂಗ ನಾಯಕ, ಭೀಮರಾಯ ನಾಯಕ, ವೆಂಕಟೇಶ ನಾಯಕ, ರಘುವೀರ ನಾಯಕ, ನಾರಾಯಣ ನಾಯಕ, ಶಿವಪ್ಪ ನಾಯಕ, ಮಲ್ಲಿಕಾರ್ಜುನ ನಾಯಕ, ವೆಂಕಟೇಶ ಹಾಸ್ಕಿಹಾಳ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು
ಸಂವಿಧಾನ ಪೀಠಿಕೆ ಬೋಧನೆ: ಸಾಧಕರಿಗೆ ಗಣ್ಯರಿಂದ ಸನ್ಮಾನವೇದಿಕೆ ಸಮಾರಂಭದಲ್ಲಿ ಜಿಲ್ಲಾಧಿಕಾರಿ ನಿತೀಶ್ ಕೆ. ಅವರು ಭಾರತ ಸಂವಿಧಾನದ ಪೂರ್ವ ಪೀಠಿಕೆಯನ್ನು ಬೋಧಿಸಿದರು. ನಂತರ ಕನ್ನಡಪ್ರಭ ಲಿಂಗಸುಗೂರು ವರದಿಗಾರ ಗುರುರಾಜ ಗೌಡೂರು ಸೇರಿದಂತೆ ಸಮಾಜದ ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ವಿವಿಧ ಗಣ್ಯರು ಸನ್ಮಾನಿಸಿ ಗೌರವಿಸಿದರು.