ಬಹು ವಾರ್ಷಿಕ ಯೋಜನೆ ಅಳವಡಿಸಿಕೊಳ್ಳಿ

KannadaprabhaNewsNetwork |  
Published : Nov 28, 2025, 01:30 AM IST
ಪೊಟೋ: 27ಎಸ್‌ಎಂಜಿಕೆಪಿ02ಶಿವಮೊಗ್ಗದ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ ಗುರುವಾರ ಏರ್ಪಡಿಸಿದ್ದ ಸೈನಿಕ ಹುಳುವಿನ ಸುಸ್ಥಿರ ನಿಯಂತ್ರಣ ಕುರಿತಾದ ಅಂತರಾಷ್ಟ್ರೀಯ ಸಮ್ಮೇಳನ ಕಾರ್ಯಕ್ರಮದಲ್ಲಿ ಬೆಂಗಳೂರಿನ ಐಸಿಎಆರ್-ಎನ್‌ಬಿಎಐಆರ್ ನ ನಿರ್ದೇಶಕರಾದ ಡಾ.ಎಸ್.ಎನ್. ಸುಶೀಲ್‌ ಮಾತನಾಡಿದರು. | Kannada Prabha

ಸಾರಾಂಶ

ಸೈನಿಕ ಹುಳುಬಾಧೆಯನ್ನು ಸುಸ್ಥಿರವಾಗಿ ನಿಯಂತ್ರಿಸಲು ಸಮಗ್ರ ಕೀಟ ನಿರ್ವಹಣೆ ಪದ್ಧತಿ ಮತ್ತು ಬಹುವಾರ್ಷಿಕ ಯೋಜನೆಗಳನ್ನು ಅಳವಡಿಸಿಕೊಳ್ಳಬೇಕಿದೆ ಎಂದು ಏಷಿಯಾದ ಸಿಐಎಂಎಂವೈಟಿ ವಿಶೇಷ ವಿಜ್ಞಾನಿ ಪ್ರಾದೇಶಿಕ ನಿರ್ದೇಶಕ ಹಾಗೂ ಬೊರ್ಲಾಗ್ ಇನ್ಸ್ಟಿಟ್ಯೂಟ್ ಆಫ್ ಸೌತ್ ಏಷಿಯಾದ ಎಂಡಿ ಡಾ.ಬಿ.ಎಂ.ಪ್ರಸನ್ನ ಸಲಹೆ ನೀಡಿದರು.

ಶಿವಮೊಗ್ಗ: ಸೈನಿಕ ಹುಳುಬಾಧೆಯನ್ನು ಸುಸ್ಥಿರವಾಗಿ ನಿಯಂತ್ರಿಸಲು ಸಮಗ್ರ ಕೀಟ ನಿರ್ವಹಣೆ ಪದ್ಧತಿ ಮತ್ತು ಬಹುವಾರ್ಷಿಕ ಯೋಜನೆಗಳನ್ನು ಅಳವಡಿಸಿಕೊಳ್ಳಬೇಕಿದೆ ಎಂದು ಏಷಿಯಾದ ಸಿಐಎಂಎಂವೈಟಿ ವಿಶೇಷ ವಿಜ್ಞಾನಿ ಪ್ರಾದೇಶಿಕ ನಿರ್ದೇಶಕ ಹಾಗೂ ಬೊರ್ಲಾಗ್ ಇನ್ಸ್ಟಿಟ್ಯೂಟ್ ಆಫ್ ಸೌತ್ ಏಷಿಯಾದ ಎಂಡಿ ಡಾ.ಬಿ.ಎಂ.ಪ್ರಸನ್ನ ಸಲಹೆ ನೀಡಿದರು.ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ ಗುರುವಾರ ಏರ್ಪಡಿಸಿದ್ದ ಸೈನಿಕ ಹುಳುವಿನ ಸುಸ್ಥಿರ ನಿಯಂತ್ರಣ ಕುರಿತಾದ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.

ಸೈನಿಕ ಹುಳು ಮೊದಲಿಗೆ ಅಮೆರಿಕಾದಲ್ಲಿ ಕಂಡು ಬಂದಿತು. ನಂತರ 2016ರಲ್ಲಿ ಆಫ್ರೀಕಾದಲ್ಲಿ ಹೆಚ್ಚಿನ ಬಾಧೆ ನೀಡಿತು. ಕಳೆದ 6 ರಿಂದ 7 ವಷಗಳಿಂದ ನಮ್ಮ ದೇಶದಲ್ಲಿ ತೊಂದರೆ ನೀಡುತ್ತಿದೆ. ಸೈನಿಕ ಹುಳು ಬಾಧೆ ನಿಯಂತ್ರಣಕ್ಕೆ ಬಳಸಲಾಗುತ್ತಿರುವ ರಾಸಾಯನಿಕ ಕೀಟನಾಶಕಗಳಿಂದ ಪರಿಸರ ವ್ಯವಸ್ಥೆಗೆ ಹಾನಿಯಾಗುತ್ತಿದೆ. ಆದ್ದರಿಂದ ಸಮಗ್ರ ಕೀಟ ನಿರ್ವಹಣೆ ಪದ್ಧತಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.

ಕೀಟ ಬಾಧೆ ಹತೋಟಿಗಾಗಿ ಸಮಗ್ರ ಕೀಟ ನಿರ್ವಹಣೆ ಹಾಗೂ ಬಹು ವಾರ್ಷಿಕ ಯೋಜನೆಗಳನ್ನು ರೂಪಿಸಲು ಸ್ಥಳೀಯ, ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಸಂಸ್ಥೆಗಳ ಸಹಭಾಗಿತ್ವ ಬಹಳ ಮುಖ್ಯವಾಗಿದ್ದು, ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು. ಬೆಂಗಳೂರಿನ ಐಸಿಎಆರ್-ಎನ್‌ಬಿಎಐಆರ್ ನ ನಿರ್ದೇಶಕ ಡಾ.ಎಸ್.ಎನ್.ಸುಶೀಲ್‌ ಮಾತನಾಡಿ, ಸೈನಿಕ ಹುಳು ಸೇರಿದಂತೆ ಕೀಟಗಳನ್ನು ನಿರ್ವಹಿಸಲು ಪರಿಸರ ತನ್ನದೇ ಆದ ವ್ಯವಸ್ಥೆಯನ್ನು ಹೊಂದಿದೆ. ಆದರೆ ನಾವು ಅದಕ್ಕೆ ಅವಕಾಶ ನೀಡದೇ ಅನವಶ್ಯಕವಾಗಿ ಹಲವಾರು ರಾಸಾಯನಿಕ ಕೀಟನಾಶಕಗಳನ್ನು ಸಿಂಪಡಿಸುತ್ತಲೇ ಇದ್ದೇವೆ. ಇದರಿಂದ ಸ್ವಾಭಾವಿಕ ಪರಿಸರ ವ್ಯವಸ್ಥೆ ಹಾಳಾಗುತ್ತಿದೆ ಎಂದರು.

ಪರಿಸರ ವ್ಯವಸ್ಥೆಯನ್ನು ಕಾಪಾಡುವುದು ಅತಿ ಅವಶ್ಯಕವಾಗಿದ್ದು, ಜೈವಿಕ ಸರಪಳಿಯನ್ನು ಬೆಳೆಯಲು ಬಿಡಬೇಕು. ಬೆಳೆಗಳನ್ನು ಯಾವುದೇ ರಾಸಾಯನಿಕ ಕೀಟ ನಾಶಕಗಳನ್ನು ಹಾಕದೇ ಬೆಳೆಯಬಹುದು. ಪರಿಸರ ಕೀಟ ನಿಯಂತ್ರಣಕ್ಕೆ ತನ್ನದೇ ಆದ ವ್ಯವಸ್ಥೆ ಹೊಂದಿದ್ದು, ಆ ಪ್ರಕ್ರಿಯೆಗೆ ಅವಕಾಶ ನೀಡಬೇಕು. ರೈತರು ಅನವಶ್ಯಕವಾಗಿ ಆತಂಕಕ್ಕೀಡಾಗಿ ರಾಸಾಯನಿಕ ಕೀಟನಾಶಕಗಳ ಬಳಕೆ ಮಾಡುವುದಕ್ಕೆ ಮುಂದಾಗುತ್ತಾರೆ ಎಂದು ತಿಳಿಸಿದರು.ರಾಸಾಯನಿಕ ಕೀಟನಾಶಕಗಳನ್ನು ಬಳಸದೇ ಕೀಟ ನಿಯಂತ್ರಿಸಲು ಹಲವಾರು ವಿಧಾನಗಳಿವೆ. ಜೈವಿಕ ನಿಯಂತ್ರಣ ವಿಧಾನಗಳು, ಜೈವಿಕ ಕೀಟನಾಶಕಗಳನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಬಹುದು. ಸಮಗ್ರವಾಗಿ ಕೀಟ ನಿರ್ವಹಣಾ ಕ್ರಮಗಳನ್ನು ಅನುಸರಿಸುವ ಮೂಲಕ ಕೀಟ ಬಾಧೆಯನ್ನು ಹತೋಟಿಗೆ ತರಬೇಕು ಎಂದರು.

ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ.ಆರ್.ಸಿ ಜಗದೀಶ್ ಮಾತನಾಡಿ, ಮೆಕ್ಕೆಜೋಳ, ಭತ್ತ, ಅಡಕೆ ಮತ್ತು ಶುಂಠಿ ವಿಶ್ವವಿದ್ಯಾಲಯ ವ್ಯಾಪ್ತಿಯ ಮುಖ್ಯ ಬೆಳೆಗಳಾಗಿದ್ದು, ಈ ಬೆಳೆಗಳಿಗೆ ಕಾಡುವ ಸೈನಿಕ ಹುಳು ನಿಯಂತ್ರಣ ಮಾಡಲು 2018ರಿಂದ ವಿಶ್ವವಿದ್ಯಾಯಲವು ಹಲವಾರು ಪ್ರಯೋಗಗಳನ್ನು ಮಾಡಿದೆ. ಹುಳು ಬಾಧೆ ಕಡಿಮೆ ಆಗುತ್ತಿದೆ. ಈ ಕುರಿತು ಅತ್ಯುತ್ತಮ ಜರ್ನಲ್‌ಗಳನ್ನು ಪ್ರಕಟಿಸಲಾಗಿದ್ದು, ಇತ್ತೀಚಿನ ಸಂಶೋಧನೆಗಳು ಸೈನಿಕ ಹುಳು ನಿಯಂತ್ರಣಕ್ಕೆ ಸಹಕಾರಿಯಾಗಲಿವೆ ಎಂಬ ಭರವಸೆ ಇದೆ ಎಂದರು.

ಸೈನಿಕ ಹುಳು ಸೇರಿದಂತೆ ಕೀಟಗಳ ನಿಯಂತ್ರಣದಲ್ಲಿ ಸರ್ಕಾರಿ ಸಂಸ್ಥೆಗಳು ಮಾತ್ರವಲ್ಲ ಖಾಸಗಿ ಸಂಸ್ಥೆಗಳು, ವಿದ್ಯಾರ್ಥಿಗಳು, ಅಂತಾರಾಷ್ಟ್ರೀಯ ಸಂಸ್ಥೆಗಳ ಸಹಯೋಗ ಬೇಕು ಎಂದ ಅವರು, ಪರಿಸರ ವ್ಯವಸ್ಥೆ ಹಾಳಾಗದಂತೆ ಕೀಟ ನಿಯಂತ್ರಣಕ್ಕಾಗಿ ಶ್ರಮಿಸುತ್ತಿರುವ ಕೀಟಶಾಸ್ತ್ರಜ್ಞರಿಗೆ ಅಭಿನಂದನೆಗಳನ್ನು ತಿಳಿಸಿದರು.

ಇದೇ ವೇಳೆ ಸೈನಿಕ ಹುಳು ನಿಯಂತ್ರಣ ಕುರಿತಾದ ಕೈಪಿಡಿಯನ್ನು ಬಿಡುಗೆಗೊಳಿಸಲಾಯಿತು. ಶಿಕ್ಷಣ ನಿರ್ದೇಶಕ ಡಾ.ಬಿ.ಹೇಮ್ಲಾನಾಯ್ಕ್ ಮಾತನಾಡಿದರು. ಪ್ರಗತಿಪರ ರೈತರಾದ ಎಚ್.ಡಿ.ದೇವಿಕುಮಾರ್, ಎಚ್.ಎಸ್.ಶಶಾಂಕ್, ಕಾಲೇಜಿನ ಬೋಧಕ, ಬೋಧಕೇರ ಸಿಬ್ಬಂದಿ, ವಿವಿಧ ರಾಜ್ಯ, ದೇಶಗಳ ಪ್ರತಿನಿಧಿಗಳು ಸಂಘಟನಾ ಕಾರ್ಯದರ್ಶಿ ದೇಶ್‌ಮುಖ್ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

10 ಪ್ಯಾರಾದಲ್ಲಿ ಕೇಂದ್ರ ವಿರುದ್ಧ ಟೀಕಾ ಪ್ರಹಾರ
ಬೇಡಿಕೆಗೆ ತಕ್ಕಷ್ಟು ಬರುತ್ತಿಲ್ಲ ಮೈಸೂರು ರೇಷ್ಮೆ ಸೀರೆ